UN networks
ಉಳ್ಳಾಲ: ಕೀಡೆಯಿಂದ ಸಹಬಾಳ್ವೆ, ಸಮನ್ವಯತೆ, ಒಗ್ಗಟ್ಟಿನ ಸಂದೇಶ ಸಿಗುವುದರ ಮೂಲಕ ಉತ್ತಮ ಮನುಷ್ಯರನ್ನಾಗಿಸಲು ಸಾಧ್ಯ. ಇದರಿಂದ ಆರೋಗ್ಯಯುತ ಸಮಾಜ ನಿರ್ಮಾಣವೂ ಸಾಧ್ಯ ಎಂದು ಎ.ಜೆ ವೈದ್ಯಕೀಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಖ್ಯಾತ ಹೃದಯ ಶಸ್ತ್ರ ಚಿಕಿತ್ಸಾ ತಜ್ಞ ಡಾ| ಜಯಶಂಕರ್ ಮಾರ್ಲ ಹೇಳಿದ್ದಾರೆ.
ದ.ಕ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಕುದ್ರೋಳಿ ನಾರಾಯಣ ಗುರು ಪದವಿಪೂರ್ವ ಕಾಲೇಜು ಇವರ ಜಂಟಿ ಆಶ್ರಯದಲ್ಲಿ ಮಂಗಳ ಕ್ರೀಡಾಂಗಣದಲ್ಲಿ ಜರಗಿದ ಮಂಗಳೂರು ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿದರು.



ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷರು ಹಾಗೂ ನಾರಾಯಣ ಗುರು ವಿದ್ಯಾಸಂಸ್ಥೆಗಳ ಅಧ್ಯಕ್ಷ ನವೀನ್ ಚಂದ್ರ ಸುವರ್ಣ ಮಾತನಾಡಿ, ಪ್ರಸ್ತುತ ಕಾಲದಲ್ಲಿ ಕಲಿಕೆಯ ಹಿಂದೆಯೇ ಇರುವವರೇ ಜಾಸ್ತಿ. ಸ್ಪರ್ಧೆ ಶೇ.೯೫% ಮೇಲಿದೆ. ಆದುದರಿಂದ ಕಲಿಕೆಯ ಜೊತೆಗೆ ಕ್ರೀಡೆಗೂ ಹೆಚ್ಚಿನ ಒತ್ತು ನೀಡುತ್ತಾ ಮುಂದುವರಿದಲ್ಲಿ ಆರೋಗ್ಯಯುತರ ಸಂಖ್ಯೆಯೂ ಹೆಚ್ಚುವುದು ಎಂದರು.
ದ.ಕ ಜಿಲ್ಲಾ ಯುಬಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರವಿ ನಾಯಕ್ ಮಾತನಾಡಿ , ಆಟವನ್ನು ಜೀವನದ ಉಪಯೋಗಕ್ಕೆ ಬರುವಂತೆ ಪಳಗಿಸಿಕೊಳ್ಳಿ. ಸರಕಾರ ಈಗ ಶೇ.೨ ಸ್ಪೋರ್ಟ್ ಕೋಟಾದಲ್ಲಿ ಸರಕಾರಿ ಉದ್ಯೋಗ ನೀಡುವುದನ್ನು ಘೋಷಿಸಿದೆ ಎಂದರು.
ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷ ಸುಧಾಕರ್ ಶೆಟ್ಟಿ ಮುಗೆರೋಡಿ ,ಎಸ್ ಎಐ ನ ಕೋಚ್ ನಾರಾಯಣ ಆಳ್ವ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಕುದೋಳಿ ಶಾಖೆಯ ವ್ಯವಸ್ಥಾಪಕ ರಾಹು ಟೊಪ್ಪೋ , ದೈಹಿಕ ಶಿಕ್ಷಣ ಉಪನ್ಯಾಸಕ ವಿಕ್ರಮ್ ಹೆಚ್.ಪಿ ಮುಖ್ಯ ಅತಿಥಿಗಳಾಗಿದ್ದರು.
ನಾರಾಯಣ ಗುರು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ರೇಣುಕಾ ಅರುಣ್ ಸ್ವಾಗತಿಸಿದರು. ಉಪನ್ಯಾಸಕ ಕೇಶವ ಬಂಗೇರ ನಿರೂಪಿಸಿದರು.
ಕ್ರೀಡಾಕೂಟದಲ್ಲಿ ಒಟ್ಟು ೨೨ ಕಾಲೇಜಿನ ವಿದ್ಯಾರ್ಥಿಗಳ ತಂಡ ಭಾಗವಹಿಸಿತ್ತು.


