ಮಂಗಳೂರು : ಸಾಮಾಜಿಕ ,ಆಧ್ಯಾತ್ಮಿಕ, ಧನಾತ್ಮಕ ಹಿತಚಿಂತನೆಗಳ ಮುಖೇನ ಓರ್ವ ಆದರ್ಶ ವ್ಯಕ್ತಿಯಾಗಿ, ಉತ್ಸಾಹಿ ಸೇವಾ ಕಾರ್ಯಕರ್ತರಾಗಿ, ಮನೋಜಾಗೃತರಾಗಿ, ಧಾರ್ಮಿಕ ಮಾರ್ಗದರ್ಶಕರಾಗಿ, ಶಕ್ತಿ_ಯುಕ್ತಿ-ಪ್ರೇರಕರಾಗಿ ಜನಮಾನಸದ ಹೃದಯದಿ ಶೋಭಿಸುತ್ತಿರುವ ನಿಸ್ವಾರ್ಥ ಸೇವಾ ಮಾಣಿಕ್ಯ. ಧೀಮಂತ ನಾಯಕನಾಗಿ ಪ್ರಾಮಾಣಿಕತೆ, ದಕ್ಷತೆ,ಶಿಸ್ತುಗಾರವಾಗಿ ನೇರನುಡಿಪಾಲಕನಾಗಿ, ನಿಷ್ಟುರವಾದಿಯಾಗಿ, ಮಿತಭಾಷಿಯಾಗಿ, ರಾಜ ಗಾಂಭೀರ್ಯ ಕಳೆಯ ಸುಂದರ ಅಜಾನುಬಾಹು ಆಕರ್ಷಕ ಮೈಕಟ್ಟು, ಚುರುಕುತನದ ಬುದ್ಧಿವಂತಿಕೆಯಿಂದ ಕೂಡಿದ್ದು ಸಭೆ ಸಮಾರಂಭಗಳಲ್ಲಿ ಓರ್ವ ಸಂಪನ್ಮೂಲ ವ್ಯಕ್ತಿಯಾಗಿ ಪಾದರಸದಂತೆ ಕ್ರಿಯಾಶೀಲರಾಗಿ ಸರ್ವರ ಕಣ್ಮನ ಸೆಳೆದು ಮಿಂಚುತ್ತಿರುವ ಹಿರಿಯ ನಿಷ್ಠಾವಂತ ನಿವೃತ್ತ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ನಿರ್ಮಲ್ ಪದ್ಮನಾಭ ಮಾಣಿಂಜರವರ ಯಶಸ್ವಿ ಸಾಧನೆಯ ಯಶೋಗಾಥೆ.
ತುಳುನಾಡಿನ ಅಳಿಯ ಕಟ್ಟಿನ ಪ್ರತಿಷ್ಠಿತ ಮುಗ್ಗಗುತ್ತು ಮನೆತನದ ಕೇಶವ ಪೂಜಾರಿ ಮತ್ತು ಕುಕ್ಕಿನಡ್ಡ ಮನೆತನದ ಮೋಹಿನಿ ದಂಪತಿ ಪ್ರಥಮ ಪುತ್ರನಾಗಿ 1937 ನೇ ಸಪ್ಟೆಂಬರ್ 5 ರಂದು ಜನಿಸಿದರು. ಪಾಣೆಮಂಗಳೂರು ಎಸ್.ವಿ.ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪೆÇರೈಸಿ ತದನಂತರ ಮಂಗಳೂರು ಸರ್ಕಾರಿ ಪದವಿ ಶಿಕ್ಷಣ ವ್ಯಾಸಂಗ ಮಾಡಿದವರು.
ಅಜ್ಞಾನದಿಂದ ಸುಜ್ಞಾನದೆಡೆಗೆ ಎಂಬ ಪೂರ್ವಜರ ಮಾತಿಗೆ ಸರಿಸಾಟಿವೆಂಬಂತೆ ಪದ್ಮನಾಭ ಮಾಣಿಂಜರವರು ಬದುಕಿನ ಯೌವ್ವನದ ಪುಟದೀ ಶೈಕ್ಷಣಿಕ ಖಾತೆ ತೆರೆದು ಅವಿರತ ಕಲಿಕಾಶ್ರಮದಿಂದ ಪ್ರಪಥಮವಾಗಿ 1959 ರಲ್ಲಿ ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯಿಂದ ವಲಯ ಅರಣ್ಯಾಧಿಕಾರಿ ತರಬೇತಿಗೆ ಆಯ್ಕೆಯಾಗಿ ಮುಂದೆ ಕೊಯಮೂತ್ತೂರಿನ ಅರಣ್ಯ ವಿಶ್ವವಿದ್ಯಾನಿಲಯದಲ್ಲಿ ಎರಡು ವರ್ಷ ಅರಣ್ಯ ಶಾಸ್ತ್ರದ ಉನ್ನತ ವಿದ್ಯಾಭ್ಯಾಸವನ್ನು ಅಧ್ಯಯನ ಮಾಡಿದ ಯಶಸ್ಸಿನ ಮೆಟ್ಟಿಲು ಇವರದ್ದು. ತನ್ನ ಕರ್ತವ್ಯದ ಬದುಕಿನಲ್ಲಿ ಓರ್ವ ಜವಾಬ್ದಾರಿಯುತ ಸರ್ಕಾರಿ ನೌಕರನಾಗಿ ಪ್ರಾಮಾಣಿಕತೆ, ನಿಷ್ಠೆ, ದಕ್ಷತೆಗೆ ಸವಾಲೆಂಬಂತೆ 1961 ನೇ ನವೆಂಬರಿನಲ್ಲಿ ಕರ್ನಾಟಕ ಸರ್ಕಾರದ ವಲಯ ಅಧಿಕಾರಿಯಾಗಿ ನೇಮಕಗೊಂಡು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಆದರ್ಶ ಅರಣ್ಯ ಅಧಿಕಾರಿಯಾಗಿ ಬಹು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿರುವರು. 1978 ರಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಭಡ್ತಿಗೊಂಡ ನಂತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ. 1983 ರಲ್ಲಿ ಆಫ್ರಿಕಾ ಖಂಡದ ಝಂಬಿಯು , ಜಿಂಬಾಬ್ವೆ ಮತ್ತು ಸ್ಕಾಟ್ಲ್ಯಾಂಡ್ ದೇಶ-ವಿದೇಶಗಳಲ್ಲಿ ಅರಣ್ಯದ ಬಗ್ಗೆ ವಿಶೇಷ ಅಧ್ಯಯನ ನಡೆಸಿ ಪರಿಣಿತಿ ಪಡೆದಿರುತ್ತಾರೆ. ಅಷ್ಟೇ ಅಲ್ಲದೆ ಜಗತ್ಪ್ರಸಿದ್ದ ಇಂಗ್ಲೆಂಡ್ ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಅರಣ್ಯ ಶಾಸ್ತ್ರದ ಅಧ್ಯಯನ ನಡೆಸಿದಂತಹ ಇವರ ಹಿರಿಮೆ ಅಕ್ಷರಶಃ ಅಸಾಧಾರಣವಾದದ್ದು. ತನ್ನ ನಿರಂತರ 1990 ರಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಭಡ್ತಿಗೊಂಡು ಮಂಗಳೂರು ಮತ್ತು ಕಾರ್ಕಳದಲ್ಲಿ ಸೇವೆ ಸಲ್ಲಿಸಿರುತ್ತಾರೆ.
ತನ್ನ ಸಾರ್ಥಕ್ಯ ವೃತ್ತಿ ಪುಟದಲ್ಲಿ ಧೀಮಂತಿಕೆಯಿಂದ ಸುದೀರ್ಘ 35 ವರ್ಷದ ಸೇವೆಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ 1995 ರಲ್ಲಿ ನಿವೃತ್ತಿಗೊಂಡಿರುವಂತಹ ಟಾಕುಟೀಕೆಯ ಅಧಿಕಾರಿ. ಇವರು ರಾಜ ಗಾಂಭೀರ್ಯದ ಹುಲಿಯಂತೆ ಘರ್ಜಿಸುತ್ತ, ಯಾರನ್ನು ಲೆಕ್ಕಿಸದೆ ಧೈರ್ಯದಿಂದ ಸತ್ಯವನ್ನು ಕಡ್ಡಿ ತುಂಡಾದಂತೆ ಉಲ್ಲೇಖಿಸುವ ನಿಷ್ಠುರವಾದಿ, ಯಾವುದೇ ಆಮಿಷಗಳಿಗೆ ಒಳಗಾಗದೆ ಭೃಷ್ಟರ ಪಾಲಿಗೆ ಸಿಂಹಸ್ವಪ್ನರಾಗಿರುವ ನಿವೃತ್ತ ಅಧಿಕಾರಿ ಪದ್ಮನಾಭ ಮಾಣಿಂಜರವರು ತುಳುನಾಡಿನ ಹೊನ್ನ ಕಲಶ.
ಪದ್ಮನಾಭ ಮಾಣಿಂಜರವರು 1964 ರಲ್ಲಿ ಗೃಹಸ್ಥಾಶ್ರಮ ಪ್ರವೇಶಿಸಿ ಶ್ರೀಮತಿ ಇಂದಿರಾರವನ್ನು ಬಾಳ ತೇರಿಗೆ ಒಲುಮೆಯ ಸಂಗಾತಿಯನ್ನಾಗಿ ಸ್ವೀಕರಿಸಿ ಸಂಸ್ಕಾರಯುತ ಮೌಲ್ಯಾಧಾರಿತ ಜೀವನವನ್ನು ಅಳವಡಿಸಿಕೊಂಡು ಪ್ರಸ್ತುತ ಮೂರು ಗಂಡು ಮಕ್ಕಳು ಹಾಗೂ ನಾಲ್ಕು ಮೊಮ್ಮಕ್ಕಳ ಸವಿಜೇನ ಒಡನಾಟದ ಕೂಡು ಕುಟುಂಬದೊಂದಿಗೆ ಸುಖಿಸಂಸಾರದ ಪಯಣದಲ್ಲಿ ಸಫಲರಾಗಿದ್ದಾರೆ. ತನ್ನ ವೃತ್ತಿ ನಿರತ ಸಮಯದಲ್ಲೂ ಹಲವಾರು ಸಮಾಜಮುಖಿ ಚಟುವಟಿಕೆಗಳಿಗೆ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ತನ್ನ ನಿವೃತ್ತಿಯ ನಂತರವೂ ಸಹ ಹಲವಾರು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ತನ್ನದೇ ಆದ ಶೈಲಿಯಲ್ಲಿ ಕೊಡುಗೆಯನ್ನು ನೀಡುತ್ತಾ ಸರ್ವರ ಹೃದಯದೀ ಪ್ರಶಂಸಾರ್ಹರಾಗಿರುತ್ತಾರೆ .
ಧಾರ್ಮಿಕ ಕ್ಷೇತ್ರವಾದ ಬೆಳ್ತಂಗಡಿ ತಾಲೂಕು ಕನ್ಯಾಡಿ ಶ್ರೀ ರಾಮಮಂದಿರದ ನಿರ್ಮಾಣದ ಕಾಲಾವಧಿಯಲ್ಲಿ ಅವಿರತ ಶ್ರಮದಿಂದ ಸಂಪೂರ್ಣವಾಗಿ ತನ್ನನ್ನು ತಾನು ತೊಡಗಿಸಿಕೊಂಡು ತನುಮನಗಳಿಂದ ಸಹಕರಿಸುತ್ತ ಕನ್ಯಾಡಿ ಶ್ರೀ ಶ್ರೀ ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರ ಆತ್ಮೀಯ ನಿಕಟವರ್ತಿ ಆಗಿರುತ್ತಾರೆ.
ಅಷ್ಟೇ ಅಲ್ಲದೆ ಶ್ರೀರಾಮ ಕ್ಷೇತ್ರದ ಟ್ರಸ್ಟಿಯಾಗಿರುತ್ತಾರೆ. ಹಾಗೇ ಗುರುದೇವ ಮಠ ನಿರ್ಮಾಣದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಕ್ಷೇತ್ರದ ಟ್ರಸ್ಟಿಯಾಗಿ ಪ್ರಾಮಾಣಿಕತೆಯಿಂದ ನಿಸ್ವಾರ್ಥ ಸೇವೆ ಸಲ್ಲಿಸಿರುತ್ತಾರೆ.
ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಸಂಘಟನೆಯಿಂದ ಬಲಯುತರಾಗಿರಿ ಎನ್ನುವ ತತ್ವ ಸಂದೇಶಗಳ ಪರಿಪಾಲಕನಾಗಿ, ಅನುಯಾಯಿಯಾಗಿ ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಸ್ಥಾಪನೆಗೆ ಕೊಡುಗೈ ದಾನಿಯಾಗಿ ಹಾಗೂ ನಾರಾಯಣ ಗುರು ವಾಣಿಜ್ಯ ಸಂಕೀರ್ಣ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಪ್ರಸ್ತುತ ಎರಡನೇ ಬಾರಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಸಾಮಾಜಿಕ ಸೇವಾಕರ್ತರು. ಇವರು ಯಾವುದೇ ಪ್ರಚಾರ ಗಿಟ್ಟಿಸಿಕೊಳ್ಳದೇ ಅದೆಷ್ಟೋ ಸಂಘ ಸಂಸ್ಥೆಗಳಿಗೆ ಹೆಚ್ಚೆಚ್ಚು ದೇಣಿಗೆ ನೀಡುತ್ತ ಸಹಕರಿಸಿದ ಸಹಕಾರ ಮೂರ್ತಿ.
ವಿದ್ಯೆಯಿಂದ ಸ್ವತಂತ್ರರಾಗಿರಿ ವಿದ್ಯೆಯಿಂದ ಜ್ಞಾನ ಉಂಟಾಗುತ್ತದೆ, ಸಮಾಜದಲ್ಲಿ ಶಿಕ್ಷಣ ಪ್ರಸಾರಕ್ಕೆ ಮಹತ್ವ ನೀಡುವ ಗುರು ತತ್ವ ಆದೇಶದಂತೆ ಹಿಂದುಳಿದ ಬಡ ವಿದ್ಯಾರ್ಥಿಗಳಿಗಾಗಿ ಗುರುದೇವ ಎಜುಕೇಶನಲ್ ಟ್ರಸ್ಟ್ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದು ಪ್ರಸ್ತುತ ಟ್ರಸ್ಟ್ ಉಪಾಧ್ಯಕ್ಷರಾಗಿರುತ್ತಾರೆ.
ರಾಷ್ಟ್ರೀಯ ರಬ್ಬರ್ ಬೋರ್ಡ್ ಮಾಜಿ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಪ್ರಬುದ್ಧತೆಯ ವ್ಯಕ್ತಿತ್ವ. ಕುಕ್ಕಿನಡ್ಡ ಫ್ಯಾಮಿಲಿಯ ಟ್ರಸ್ಟಿ ಅಧ್ಯಕ್ಷರಾಗಿ , ಬೆಳ್ತಂಗಡಿ ರಬ್ಬರ್ ಸೊಸೈಟಿ ಉಜಿರೆ ಮಾಜಿ ಉಪಾಧ್ಯಕ್ಷರಾಗಿ ಹಾಲಿ ನಿರ್ದೇಶಕರಾಗಿದ್ದು ಮಾತ್ರವಲ್ಲದೆ ಮಾಸ್ ಲಿಮಿಟೆಡ್ ಮಂಗಳೂರು ಮಾಜಿ ನಿರ್ದೇಶಕರಾಗಿರುತ್ತಾರೆ. ಉದ್ದಿಮೆಯಿಂದ ಆರ್ಥಿಕ ಸ್ವಾವಲಂಬಿಗಳಾಗಿ ಎಂಬ ಗುರು ಸಂದೇಶಕ್ಕೆ ಸರಿಸಮನ್ವಯವಾಗುವಂತೆ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗಾಗಿ ಮಾಜಿ ಶಾಸಕರಾದ ವಸಂತ ಬಂಗೇರ, ಕೆ.ಜಿ ಬಂಗೇರ, ವಕೀಲರಾದ ಭಗೀರಥ.ಜಿ ಹೀಗೆ ಹತ್ತು ಹಲವು ಸಹಕಾರ ಮನೋಭಾವನೆಯುಳ್ಳ ಸಹಪಾಠಿಗಳನ್ನು ಸೇರಿಸಿಕೊಂಡು ಉತ್ತಮ ಸಾಮಾಜಿಕ ಹಿತಚಿಂತನೆಯುಳ್ಳ ಆರ್ಥಿಕ ಸಂಸ್ಥೆಯಾದ ಶ್ರೀ ಗುರುದೇವ ವಿವಿಧೋದ್ಧೇಶ ಸಹಕಾರ ಸಂಘ ಹುಟ್ಟು ಹಾಕಿರುವುದು ನಿಜಕ್ಕೂ ಶ್ಲಾಘನೀಯ. ಸಂಸ್ಥೆಯ ಉನ್ನತಿಗಾಗಿ ಸತತವಾಗಿ ಹನ್ನೊಂದು ವರ್ಷಗಳಿಂದ ಯಾವುದೇ ಫಲಾಪೇಕ್ಷೆ ಬಯಸದೆ ಶ್ರೀ ಗುರುದೇವ ವಿವಿಧೋದ್ಧೇಶ ಸಹಕಾರ ಸಂಘದ ಅಧ್ಯಕ್ಷರಾಗಿರುತ್ತಾರೆ. ತನ್ನ ವೃತ್ತಿಜೀವನದಲ್ಲಿ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಇವರು ಇಂದು ತನ್ನ ಪೂರ್ಣ ಪ್ರಮಾಣದ ಸಹಕಾರವನ್ನು ಸಾಮಾಜಿಕ, ಧಾರ್ಮಿಕ,ಆರ್ಥಿಕ ಸೇವಾ ರಂಗದಲ್ಲೂ ಮುಂದುವರಿಸಿಕೊಂಡು ಬಂದಿರುತ್ತಾರೆ. ಶ್ರೀ ಗುರುದೇವ ವಿವಿಧೋದ್ಧೇಶ ಸಹಕಾರ ಸಂಘವನ್ನು ಸಹಕಾರದ ಕ್ಷೇತ್ರದಲ್ಲಿ ಅಭಿವೃದ್ಧಿಯ ಪಥದಲ್ಲಿ ಸಾಗಿಸಿರುವುದು ಇವರ ದಕ್ಷ ಆಡಳಿತಕ್ಕೆ ಹಿಡಿದಂತಹ ಕೈಗನ್ನಡಿಯ ಪ್ರತಿರೂಪ. ಇವತ್ತು ಶ್ರೀ ಗುರುದೇವ ವಿವಿಧೋದ್ಧೇಶ ಸಹಕಾರ ಸಂಘ ನಿಯಮಿತ ರಾಜ್ಯಮಟ್ಟದ ಉತ್ತಮ ಸಹಕಾರಿ ಸಂಘ ಎಂಬ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ ಎಂದರೆ ಅದಕ್ಕೆ ಅಧ್ಯಕ್ಷರಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿರುವ ಪ್ರತಿಫಲ ಎಂದರೆ ತಪ್ಪಾಗಲಾರದು. 85 ವರ್ಷಕ್ಕೆ ಕಾಲಿಡುತ್ತಿರುವ ಈ ಇಳಿವಯಸ್ಸಿನಲ್ಲೂ ವೃತ್ತಿಯಲ್ಲಿ ತೋರಿಸುವ ನವಹುರುಪು, ಉಲ್ಲಾಸದ ಯುವಕನಂತಿರುವ ಇವರು ಇಂದಿಗೂ ಕಾರನ್ನು ಚಲಾಯಿಸಿಕೊಂಡು ಹೋಗುವಂತಹ ನವಚೈತನ್ಯಯುತ ಆರೋಗ್ಯ, ಹುಮ್ಮಸ್ಸನ್ನು ನೋಡಿದರೆ ಯುವ ಪೀಳಿಗೆಯನ್ನೇ ನಾಚಿಸುವಂತಿದೆ. ಇವರ ನಿಸ್ವಾರ್ಥ ಸೇವಾ ಮನೋಭಾವದ ಅವಧಿ ಫಲಪ್ರದವಾಗಿ ಪ್ರಸ್ತುತ 13 ಶಾಖೆಗಳನ್ನು ತೆರೆದಿದ್ದು ಮುಂದಿನ ಯೋಜನೆಯಡಿ 5 ಶಾಖೆಗಳನ್ನು ತೆರೆಯಲು ಸರಕಾರದಿಂದ ಅನುಮತಿ ಮಂಜೂರಾತಿಯಾಗಿರುತ್ತದೆ. ಈಗಾಗಲೇ ಬೆಳ್ತಂಗಡಿ ಕೇಂದ್ರ ಕಚೇರಿಗೆ ಒಂದು ಕೋಟಿ ರೂಪಾಯಿಯೊಳಗಿನ ನಿವೇಶನ ಹೊಂದಿದ್ದು, ಭವಿಷ್ಯದ ಕನಸಿನ ಕೂಸಿಗಾಗಿ ಸುಮಾರು 3.5 ಕೋಟಿ ರೂಪಾಯಿ ವೆಚ್ಚದಲ್ಲಿ ಕೇಂದ್ರ ಕಚೇರಿ ನಿರ್ಮಾಣಕ್ಕೆ ಯೋಜನೆ ಹಾಕಿಕೊಂಡಿದೆ. ಇವರ ಪ್ರಬಲ ಅಧ್ಯಕ್ಷತೆಯಲ್ಲಿ ಮುನ್ನಡೆಸಿಕೊಂಡು ಬರುತ್ತಿರುವ ಶ್ರೀಗುರುದೇವ ವಿವಿದ್ಧೋದ್ಧೇಶ ಸಹಕಾರ ಸಂಘ(ನಿ.) ಸಂಸ್ಥೆಯು ಪ್ರಸ್ತುತ 50 ಸಿಬ್ಬಂದಿಗಳ ಕುಟುಂಬಕ್ಕೆ ಅನ್ನದಾಸೋಹಿಯಾಗಿ, ಆಶ್ರಯದಾತವಾಗಿರುವಂತಹುದು ಸಾಕ್ಷಾತ್ ಸೌಭಾಗ್ಯವೇ ಸರಿ.
ಬೆಳ್ತಂಗಡಿ ಮಾಜಿ ಶಾಸಕರಾದ ವಸಂತ ಬಂಗೇರರ ಬಲು ತೀರದ ನಿಕಟವರ್ತಿಯಾಗಿದ್ದು, ಸಭೆ-ಸಮಾರಂಭಗಳಲ್ಲಿ ವಸಂತ ಬಂಗೇರರಿಂದ “ಪದ್ಮನಾಭ ಮಾಣಿಂಜರವರು ಹುಲಿ”ಯೆಂದೇ ಉಲ್ಲೇಖಿಸಿ ವರ್ಣನೆಗಳೊಗಾದ ಹೆಮ್ಮೆಯ ಅಧಿಕಾರಿ. ಇವರು ಕೇವಲ ಕಟ್ಟುನಿಟ್ಟಿನ ಸರ್ಕಾರಿ ಅಧಿಕಾರಿಯಾಗಿರದೇ ಕೈ ಕೆಸರಾದರೆ ಬಾಯಿ ಮೊಸರೆಂಬ ಮಾತಿಗೆ ಪುಷ್ಟಿ ನೀಡುವಂತೆ ಉತ್ತಮ ಕೃಷಿಕನಾಗಿಯೂ ಪಳಗಿ ರಬ್ಬರ್, ಹಣ್ಣು ಹಂಪಲು, ಅಡಿಕೆ, ತೆಂಗು, ಗೇರು ಬೆಳೆಗಾರನಾಗಿ ಸಮಾಜದ ಯುವಜನಾಂಗಕ್ಕೆ ಮಾದರಿ ಯಶಸ್ವಿ ಕೃಷಿಕರಾಗಿರುತ್ತಾರೆ.
ದೀಪದ ಪಾವಿತ್ರ್ಯವೂ ಲೋಕದ ಅಂಧಕಾರವನ್ನು ದೂರವಾಗಿಸಿ ಪ್ರಖರತೆಯ ಜ್ಯೋತಿ ನೀಡಿದಾಗ ಸಕಾರಾತ್ಮಕ ಬೆಳವಣಿಗೆಯಾಗುವುದು. ಹಾಗೇ ಇವರ ಹಿರಿತನದ ಸಾಧನೆಯ ಅನುಭವದ ಸಾರವು ಯುವಜನತೆಗೆ ಸ್ಪೂರ್ತಿಯಾಗಿ, ಮಾರ್ಗದರ್ಶಿಯಾಗಿ ಲೋಕಕ್ಕೆ ಮಾದರಿಯಾಗಲಿ, ಸಾಧನೆಯ ಗರಿ ಕೀರ್ತಿಪತಾಕೆ ಕಂಪು ಬಾನಂಗಳದ ಅಷ್ಟದಿಕ್ಕಿನಲ್ಲೂ ರಾರಾಜಿಸಲಿ, ಸಮಾಜಮುಖಿ ಕಲ್ಯಾಣದ ರೂಪುರೇಷೆಗಳು, ಆದರ್ಶ ಜೀವನದ ಮೌಲ್ಯಗಳು, ಪ್ರಾಮಾಣಿಕತೆ, ನೈತಿಕತೆ,
ಶಿಸ್ತು ಬದ್ಧತೆ ಪರರಿಗೆ ದಾರಿದೀಪವಾಗಲಿ. ದೈವ ದೇವರ ಕೃಪಾಕಟಾಕ್ಷವಿದ್ದು ಇನ್ನಷ್ಟು ಸಮಾಜ ಹಿತಚಿಂತನೆ ಅನಾವರಣವಾಗಲಿ, ಮಿತಭಾಷಿಯಾಗಿ ಮಾತು ಮಾಣಿಕ್ಯ, ಮೌನ ಬಂಗಾರವೆಂಬಂತೆ ಮಾತಿಗಿಂತ ಹೆಚ್ಚುತನ್ನ ಕೃತಿಗೆ ಒತ್ತು ಕೊಟ್ಟು ಅಚಲ ನಿರ್ಧಾರದ ದಿಟ್ಟ ಹೆಜ್ಜೆಯಿಂದ ಕಾರ್ಯ ಸಾಧಿಸುತ್ತ ಮಂದಸ್ಮಿತ ಭೂಷಣರಾಗಿ ಗಮನಸೆಳೆದಿರುವ ಪಾದರಸದಂತಹ ಕ್ರಿಯಾಶೀಲ ವ್ಯಕ್ತಿತ್ವದ ಅಪರೂಪದ ನೆಚ್ಚಿನ ಜನಮನನಾಯಕನಿಗೆ ಪದಪುಂಜದೀ ಹೆಣೆದಿಹ ಅಭಿಮಾನ-ಗೌರವದ ಪುಷ್ಪಾರ್ಚನೆ ಅರ್ಪಣೆಯಾಗಲಿ.










