ಉಳ್ಳಾಲ : ತೊಕ್ಕೊಟ್ಟು ಕಾಪಿಕಾಡು ಬಳಿ ಮುಸ್ಲಿಂ ಮನೆಗೆ ಹಿಂದೂ ಯುವತಿಯನ್ನು ಯುವಕನೋರ್ವ ಕರೆ ತಂದಿರುವ ಕುರಿತು ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ನಿನ್ನೆ ತಡರಾತ್ರಿ ವೇಳೆ ನಡೆದಿದೆ.
ಗುಲ್ಬರ್ಗಾ ಮೂಲದ 30 ರ ಹರೆಯದ ಮಹಿಳೆಯನ್ನು ಮುಸ್ಲಿಂ ಯುವಕನೋರ್ವ ಮಂಗಳೂರು ರೈಲ್ವೇ ನಿಲ್ದಾಣದಿಂದ ಕರೆತಂದಿದ್ದ. ಈ ಬಗ್ಗೆ ಸ್ಥಳೀಯರು ಗಮನಿಸಿ, ಹಿಂದೂ ಯುವತಿ ಇರುವುದನ್ನು ಖಚಿತಪಡಿಸಿ ಉಳ್ಳಾಲದ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ರಾತ್ರೋರಾತ್ರಿ ಇಬ್ಬರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮಹಿಳೆ ಪತಿ ತೀರಿಕೊಂಡಿದ್ದು, ಗುಲ್ಬರ್ಗಾ ಮೂಲದವಳಾಗಿದ್ದು, ಕೇರಳದ ಮನೆಯಲ್ಲಿ ಕೆಲಸಕ್ಕಿರುವುದಾಗಿ ತಿಳಿಸಿದ್ದಳು. ಕೇರಳ ನಿವಾಸಿ ಆಗಿರುವ ಯುವಕನ ಮನೆಯಲ್ಲಿ ಮಹಿಳೆ ಕೆಲಸಕ್ಕಿದ್ದರು. ಯುವಕ ಬೆಂಗಳೂರಿಗೆ ಹೋಗುವವನಾಗಿದ್ದು, ಕಾಪಿಕಾಡಿನ ಸಂಬಂಧಿಕರ ಮನೆಯಲ್ಲಿ ಬಂದು ಮೊದಲೇ ನಿಂತಿದ್ದನು. ಕೇರಳದಿಂದ ಗುಲ್ಬರ್ಗಾಕ್ಕೆ ಹೋಗುವ ಮಹಿಳೆ ಶನಿವಾರ ಸಂಜೆ ಮಂಗಳೂರು ರೈಲ್ವೇ ನಿಲ್ದಾಣದಲ್ಲಿ ಬಂದಿಳಿದು, ಇಂದು ಯುವಕನ ಜೊತೆಗೆ ಬೆಂಗಳೂರಿಗೆ ತೆರಳಿ ಅಲ್ಲಿಂದ ಗುಲ್ಬರ್ಗಾ ತೆರಳುವವರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆ ಮನೆಮಂದಿಗೂ ವಿಚಾರವನ್ನು ತಿಳಿಸಲಾಗಿದೆ.

