
ಉಳ್ಳಾಲ: ಇಲ್ಲಿನ ನಗರಸಭಾ ವ್ಯಾಪ್ತಿ ಸಮುದ್ರ ಮತ್ತು ನೇತ್ರಾವತಿ ನದಿಯನ್ನು ಹೊಂದಿರುವುದರಿಂದ ಈ ಭಾಗದಲ್ಲಿ ಮಳೆಗಾಲದ ಸಂದರ್ಭದಲ್ಲಿ ಪ್ರಾಕೃತಿಕ ವಿಕೋಪ ತಡೆಯುವ ನಿಟ್ಟಿನಲ್ಲಿ ಆದರ ನಿರ್ವಹಣೆಗೆ ಬೇಕಾದ ವ್ಯವಸ್ಥೆಗೆ ನಗರಸಭೆಯ ಅಧಿಕಾರಿಗಳೊಂದಿಗೆ, ಜನಪ್ರತಿನಿಧಿಗಳ ಕಾರ್ಯ ಅತ್ಯಂತ ಪ್ರಮುಖವಾಗಿದ್ದು, ಸಮುದ್ರ ಮತ್ತು ನದಿ ತಟದ ಮೀನುಗಾರರ, ಸಂಘ ಸಂಸ್ಥೆಗಳ ಸಹಕಾರದೊಂದಿಗೆ ವಿಕೋಪ ಎದುರಿಸಲು ಬೇಕಾದ ಕ್ರಮವನ್ನು ಕೈಗೊಳ್ಳಬೇಕು ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ. ಖಾದರ್ ತಿಳಿಸಿದರು.
ಉಳ್ಳಾಲ ನಗರಸಭಾ ಸಭಾಂಗಣದಲ್ಲಿ ಪ್ರಕೃತಿ ವಿಕೋಪ ಮುನ್ನೆಚ್ಚರಿಕೆಯ ಪೂರ್ವಭಾವಿ ಸಭೆಯಲ್ಲಿ ಉಳ್ಳಾಲ ತಾಲೂಕಿಗೆ ನಿಯೋಜಿತ ನೂತನ ತಹಶೀಲ್ದಾರ್, ನಗರಸಭಾ ಕಮಿಷನರ್ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳ, ಸಿಬ್ಬಂದಿಗಳ ಮತ್ತು ನಗರಸಭಾ ಸದಸ್ಯರೊಂದಿಗೆ ಚರ್ಚೆ ನಡೆಸಿ ಮಾತನಾಡಿದರು.
ನದಿ ತಟದಲ್ಲಿ ತುರ್ತುಕ್ರಮವಾಗಿ ದೋನಿಗಳ ಅಗತ್ಯ ಇದೆ. ಇದಕ್ಕೆ ಸ್ಥಳೀಯ ಮೀನುಗಾರರ ಸಹಕಾರ ಪಡೆದುಕೊಳ್ಳಬಹುದು, ಇದರೊಂದಿಗೆ ಅಗ್ನಿಶಾಮಕದಳ, ಆಂಬುಲೆನ್ಸ್ ವ್ಯವಸ್ಥೆಯನ್ನು ಆಯಕಟ್ಟಿನ ಪ್ರದೇಶದಲ್ಲಿ ನಿಯೋಜಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರವೂ ಅಗತ್ಯ ಎಂದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರು ತಮ್ಮ ವ್ಯಾಪ್ತಿಯಲ್ಲಿ ಮಳೆಗಾಲದ ಮೊದಲು ತೋಡಿನಲ್ಲಿ ತುಂಬಿರುವ ಹೂಳು ಎತ್ತುವ ಕಾರ್ಯ ಆಗಬೇಕು ಮತ್ತು ನೀರು ಸರಾಗವಾಗಿ ಹರಿಯಲು ಬೇಕಾದ ಡ್ರೈನೇಜ್ ವ್ಯವಸ್ಥೆಯನ್ನು ಮಾಡಬೇಕು ಎಂದು ಆಗ್ರಹಿಸಿದರು.
ಕುಡಿಯುವ ನೀರು ಸರ್ವೇ ಕಾರ್ಯಕ್ಕೆ ಚಾಲನೆ ನೀಡಿ : ಉಳ್ಳಾಲ ನಗರಸಭಾ ವ್ಯಾಪ್ತಿಗೆ ಮುಂದಿನ ಒಂದು ವರ್ಷದ ಒಳಗೆ ಕುಡಿಯುವ ನೀರಿನ ವ್ಯವಸ್ಥೆ ಆಗಲಿದ್ದು, ನಗರಸಭೆಯ ಪ್ರತೀ ಮನೆಗೂ ನೀರು ಮುಟ್ಟಿಸುವ ಕಾರ್ಯಕ್ಕೆ ನಗರಸಭೆಯ ಸದಸ್ಯರು ಈಗಿನಿಂದಲೇ ಕಾರ್ಯ ನಿರ್ವಹಿಸಬೇಕು. ಯೋಜನೆ ಪೂರ್ಣಗೊಂಡ ಬಳಿಕ ನಮ್ಮ ಪ್ರದೇಶಗಳಿಗೆ ನೀರು ಬಂದಿಲ್ಲ ಎನ್ನುವ ದೂರುಗಳು ಬರಬಾರದು. ನಗರಸಭಾ ವ್ಯಾಪ್ತಿಯಲ್ಲಿ ಹೆಚ್ಚಿನ ಪೈಪ್ಲೈನ್ ಯೋಜನೆಗೆ ಬೇಕಾದ ಸರ್ವೇಗೆ ಹಣ ಬಿಡುಗಡೆ ಮಾಡಬೇಕು ಸರ್ವೇ ಮುಗಿದು ಬೆಂಗಳೂರಿನಲ್ಲಿ ಟೆಂಡರ್ ಆಗುವಾಗ ವರ್ಷ ಕಳೆಯುತ್ತದೆ . ಈಗಿನಿಂದಲೇ ಈ ಕಾರ್ಯ ನಡೆದರೆ ನೀರಿನ ಪೈಪ್ಲೈನ್ ವರ್ಷದೊಳಗೆ ಜೋಡಿಸಿ ನೀರು ಸರಬರಾಜು ಸಾಧ್ಯ ಎಂದರು.
ಕಸ ಮಾಹಿತಿ ನೀಡಿದರೆ ಬಹುಮಾನ : ಘನತ್ಯಾಜ್ಯ ನಿರ್ವಹಣೆ ವಿಚಾರದಲ್ಲಿ ಮಸ್ಸಯೆ ಎದುರಾಗುತತಿದ್ದು ಸಾರ್ವಜನಿಕ ಪ್ರದೇಶದಲ್ಲಿ ಕಸ ಎಸೆಯುವವರ ವಾಹನದ ಫೋಟೋ ಅಥವಾ ವಿಡಿಯೋ ನೀಡಿದ್ದಲ್ಲಿ ಮಾಹಿತಿ ನೀಡಿದವರಿಗೆ ಕಸ ಎಸದವರ ದಂಡದಲ್ಲೇ ಬಹುಮಾನ ನೀಡಲಾಗುವುದು ಈ ನಿಟ್ಟಿನಲ್ಲಿ ನಗರಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಬೇಕು. ಸಾರ್ವಜನಿಕ ಪ್ರದೇಶದಲ್ಲಿ ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ವಸತಿ ಯೋಜನೆ ಸ್ಪಷ್ಟ ನಿರ್ಣಯ ಅಗತ್ಯ : ಕಳೆದ ಮೂರು ವರ್ಷಗಳಿಂದ ನಗರಸಭಾ ವ್ಯಾಪ್ತಿಯಲ್ಲಿ ವಸತಿ ಯೋಜನೆಎ ಸಂಬಂಧಿಸಿ ಅರ್ಜಿ ಸಲ್ಲಿಸಿದವರಿಗೆ ಹಣ ಬಿಡುಗಡೆಯಾಗಿಲ್ಲ. ಅರ್ಜಿದಾರರಿಗೆ ಮನೆ ಕಟ್ಟಲು ಸೂಚನೆ ನೀಡಿದರೂ ಯಾಕೆ ಈವರೆಗೆ ಹಣ ಬಂದಿಲ್ಲ ಎನ್ನುವುದನ್ನು ನಗರಸಭೆಯಲ್ಲಿ ಕಡತದಲ್ಲಿಟ್ಟರೆ ಸಾಲದು ಬೆಂಗಳೂರಿಗೆ ನಗರಸಭೆಯಿಂದ ಸಂಬಂಧಿತ ಅಧಿಕಾರಿಗಳು ಬೆಂಗಳೂರಿಗೆ ಬಂದರೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಕ್ರಮಕೈಗೊಳ್ಳಾಗುವುದು ಮುಂದಿನ 15 ದಿನಗಳೊಳಗೆ ಈ ಕಾರ್ಯ ಮುಗಿಯಬೇಕು ಎಂದರು.
ಪ್ರಕೃತಿ ವಿಕೋಪದಡಿ ಕಳೆದ ವರ್ಷ ಕಡಲ್ಕೊರೆತ ಸೇರಿದಂತೆ ಮಳೆ ಹಾನಿಯಿಂದ ನಷ್ಟಗೊಳಗಾದ ಮನೆಯವರಿಗೆ ಪರಿಹಾರ ಬಿಡುಗಡೆಯಾಗಿಲ್ಲ. ಈ ಬಾರಿಯೂ ಚಂಡಮಾರುತದಿಂದ ಹಾನಿಗೋಳಗಾದ ಜನರಿಗೆ ಪರಿಹಾರ ಸಿಗಬೇಕು ಈ ನಿಟ್ಟಿನಲಇ ಸಂಬಂಧಿತ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಉಳ್ಳಾಲ ತಾಲೂಕು ನಿಯೋಜಿತ ತಹಶೀಲ್ದಾರ್ ಸಪ್ತಶ್ರೀ, ಉಳ್ಳಾಲ ನಗರಸಭಾ ಅಧ್ಯಕ್ಷೆ ಚಿತ್ರಲಾ ಚಂದ್ರಕಾಂತ್, ಉಪಾಧ್ಯಕ್ಷ ಅಯ್ಯಬ್ ಮಂಚಿಲ, ಕಮಿಷನರ್ ರಾಯಪ್ಪ ಮತ್ತು ನಗರಸಭಾ ಸದಸ್ಯರು ಉಪಸ್ಥಿತರಿದ್ದರು.

