UN NETWORKS
ಮುಡಿಪು : ಮುಡಿಪು ಹೋಬಳಿಯಾದರೂ ಅತ್ಯಂತ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶವಾಗಿದ್ದು ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಉತ್ತಮ ವ್ಯವಸ್ಥೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಮಾದರಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು.


ಮುಡಿಪು ಗೋಪಾಲಕೃಷ್ಣ ದೇವಸ್ಥಾನದಿಂದ ಜಂಕ್ಷನ್ ವರೆಗೆ ರಸ್ತೆ ಅಗಲೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಆಗಬಹುದಾದ ಖರ್ಚಿನ ರೂಪುರೇಷೆ ವೀಕ್ಷಿಸಿ ಅವರು ಮಾತನಾಡಿದರು.ಮುಡಿಪುವಿನಲ್ಲಿ ಜ್ಞಾನ ಮಂದಿರ, ಇತಿಹಾಸ ಪ್ರಸಿದ್ಧ ಚರ್ಚ್ ,ಕೈಗಾರಿಕಾ ವಲಯ ಇದ್ದು ಮಾದರಿ ರಸ್ತೆ, ಮಾದರಿ ಅಟೋ, ಟೆಂಪೋ, ಟ್ಯಾಕ್ಸಿ, ಲಾರಿ ಸ್ಟ್ಯಾಂಡ್, ಉತ್ತಮ ಬಸ್ ತಂಗುದಾಣ ನಿರ್ಮಿಸಿ ಮಾದರಿ ಜಂಕ್ಷನ್ ನಿರ್ಮಿಸಲಾಗುವುದು. ತೊಕ್ಕೊಟ್ಟಿನಿಂದ ಮುಡಿಪುವರೆಗೆ ಅತ್ಯಂತ ಮಾದರಿ ಹಾಗೂ ವೇಗದ ರಸ್ತೆ ನಿರ್ಮಾಣ ಯೋಜನೆಯಿದ್ದು, ತೊಕ್ಕೊಟ್ಟುವಿನಿಂದ ದೇರಳಕಟ್ಟೆವರೆಗೆ 10ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಗಲೀಕರಣಗೊಂಡಿದೆ. ತೊಕ್ಕೊಟ್ಟಿನಿಂದ ಕುತ್ತಾರ್ ರಸ್ತೆ ಅಗಲೀಕರಣಕ್ಕೆ 20ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಹೇಳಿದರು.ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ, ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಸದಸ್ಯ ಹೈದರ್ ಕೈರಂಗಳ, ಮುಡಿಪು ಬ್ಲಾಕ್ ಅಧ್ಯಕ್ಷ ಪ್ರಶಾಂತ ಕಾಜವ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ, ಜಿಲ್ಲಾ ವಕ್ ಸಲಹಾ ಸಮಿತಿ ಸದಸ್ಯ ಉಮ್ಮರ್ ಪಜೀರು, ಬಾಳೆಪುಣಿ ಗ್ರಾಮ ಪಂಚಾಯಿತಿ ಸದಸ್ಯ ಶರೀಫ್ ಚೆಂಬೆತೋಟ, ನಾಸೀರ್ ನಡುಪದವು, ಇರಾ ಗ್ರಾಮ ಪಂಚಾಯಿತಿ ಅಧ್ಯಕ್ಷ ರಝಾಕ್ ಕುಕ್ಕಾಜೆ, ನರಿಂಗಾನ ಗ್ರಾಮ ಪಂಚಾಯಿತಿ ಸದಸ್ಯ ಮುರಳೀಧರ ಶೆಟ್ಟಿ ಮೋರ್ಲ, ಕಾಂಗ್ರೆಸ್ ಕಿಸಾನ್ ಘಟಕಾಧ್ಯಕ್ಷ ಅರುಣ್ ಡಿಸೋಜ, ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ರವೀಂದ್ರನಾಥ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಎಂಜಿನಿಯರ್ ರವಿಚಂದ್ರ ಹಾಗೂ ಮುಖಂಡರಾದ ಜಗದೀಶ್ ಪಲಾಯಿ ಉಪಸ್ಥಿತರಿದ್ದರು.


