UN NETWORKS
ಉಳ್ಳಾಲ: ನಾವು ಮಾತ್ರವಲ್ಲ ನಮ್ಮ ಜೊತೆ ಎಲ್ಲರೂ ಸಂತೋಷದಿಂದ ಜೀವನ ಸಾಗಿಸಬೇಕು ಎಂಬ ಮನೋಭಾವ ನಮ್ಮಲ್ಲಿರಬೇಕು. ಹೆಲ್ಪ್ ಇಂಡಿಯಾ ಫೌಂಡೇಶನ್ ಕಳೆದ ಹಲವಾರು ವರ್ಷಗಳಿಂದ ಸಮಾಜಮುಖಿ ಕಾರ್ಯದೊಂದಿಗೆ ಮುನ್ನಡೆಯುತ್ತಿದ್ದು ಇದೀಗ ಅನಾಥಾಶ್ರಮದ ಹಿರಿಯರೊಂದಿಗೆ ಈದುಲ್ ಫಿತ್ರ್ ಹಬ್ಬ ಆಚರಣೆ ಕಾರ್ಯಕ್ರಮವು ಮಾದರಿಯಾದುದು ಎಂದು ಸಚಿವರಾದ ಯು.ಟಿ.ಖಾದರ್ ಅವರು ಹೇಳಿದರು.

ಅವರು ಬುಧವಾರ ಹೆಲ್ಪ್ ಇಂಡಿಯಾ ಫೌಂಡೇಶನ್ ಇದರ ವತಿಯಿಂದ ಕೋಟೆಕಾರು ಸೋಮೇಶ್ವರದ ಪಶ್ಚಿಮ್ ರಿಹಾಬ್ ಸೆಂಟರ್ ಅನಾಥಾಶ್ರಮದಲ್ಲಿ ಹಿರಿಯರೊಂದಿಗೆ ಈದುಲ್ ಫಿತ್ರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಇಂತಹ ಸೌಹಾರ್ದಯುತ ಕಾರ್ಯಕ್ರಮಗಳು ಸಮಾಜದಲ್ಲಿ ಎಲ್ಲರನ್ನೂ ಒಗ್ಗೂಡಿಸುವುದರೊಂದಿಗೆ ಉತ್ತಮ ಸಮಾಜವನ್ನು ಕಟ್ಟಲು ಸಾಧ್ಯವಾಗುವಂತಿರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೆಲ್ಪ್ ಇಂಡಿಯಾ ಫೌಂಡೇಶನ್ನ ಸ್ಫಾಪಕಾಧ್ಯಕ್ಷ ರಾಝಿಕ್ ಉಳ್ಳಾಲ್ ಮಾತನಾಡಿ, ಅನಾಥಶ್ರಮದಲ್ಲಿರುವವರನ್ನು ನಾವು ಕೀಳರಿಮೆಯಿಂದ ಕಾಣದೆ ಸಮಾನತೆಯೊಂದಿಗೆ ಅವರನ್ನು ಗೌರವಿಸುವ ಕಾರ್ಯವಾಗಬೇಕು. ಅಲ್ಲದೆ ಆಶ್ರಮಗಳಿಗೆ ನಾವು ಪ್ರಾಮಾಣಿಕವಾಗಿ ನೆರವಾದರೆ ಅದರ ಪುಣ್ಯ ಖಂಡಿತಾ ಪ್ರಾಪ್ತವಾಗುತ್ತದೆ. ಇಂತಹ ಕಾರ್ಯಗಳಿಗೆ ಎಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಳ್ಳಾಲ ಸೈಯದ್ ಮದನಿ ದರ್ಗಾದ ಅಧ್ಯಕ್ಷ ರಶೀದ್ ಹಾಜಿ, ಮುಖಂಡರಾದ ಯು.ಬಿ.ಸಲೀಂ, ಡಾ.ಪ್ರಕಾಶ್, ಕೋಟೆಕಾರು ಅನಾಥಾಶ್ರಮದ ನಿರ್ದೇಶಕರಾದ ರೋಹಿತ್ ಸ್ಯಾಂಟಸ್, ತೌಸೀಫ್ ಹಾಗೂ ಹೆಲ್ಪ್ ಇಂಡಿಯಾ ಫೌಂಡೇಶನ್ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಹೆಲ್ಪ್ ಇಂಡಿಯಾ ಪೌಂಡೇಶನ್ನ ಝಾಕಿರ್ ಇಕ್ಲಾಸ್ ಪ್ರಸ್ತಾವಿಕವಾಗಿ ಮಾತನಾಡಿದರು. ಶಾಕಿಲ್ ಕಾರ್ಯಕ್ರಮ ನಿರೂಪಿಸಿದರು. ಅಹ್ಮತ್ ತಮೀಮ್ ಕಿರಾಅತ್ ಪಠಿಸಿದರು. ಬಳಿಕ ಅನಾಥಾಶ್ರಮದ ಹಿರಿಯರಿಗೆ ಹಬ್ಬದ ಪ್ರಯುಕ್ತ ಬಿರಿಯಾನಿ ವಿತರಿಸಲಾಯಿತು.


