UN NETWORKS
ತೊಕ್ಕೊಟ್ಟು: ಧಾರ್ಮಿಕ, ಶೈಕ್ಷಣಿಕವಾಗಿ ಮುಂಚೂಣಿಯಲ್ಲಿರುವ ಉಳ್ಳಾಲ ಕ್ಷೇತ್ರಕ್ಕೆ ಅರ್ಹತೆಯ ತಾಲೂಕು ಭಾಗ್ಯವನ್ನು ಒದಗಿಸಿದ ಸಚಿವ ಯು.ಟಿ.ಖಾದರ್ ಅವರನ್ನು ಕ್ಷೇತ್ರದ ಜನತೆ ಅಭಿನಂದಿಸುವುದು ಧರ್ಮ. ಈ ನಿಟ್ಟಿನಲ್ಲಿ ಎಲ್ಲರನ್ನು ಸೇರಿಸಿಕೊಂಡು ಅಸೈಗೋಳಿ ಮೈದಾನದಲ್ಲಿ ಮಾ. 7 ರಂದು ಬೃಹತ್ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಪ್ರಾಂಶುಪಾಲ ರವೀಂದ್ರ ರೈ ಹರೇಕಳ ಹೇಳಿದರು.
ತೊಕ್ಕೊಟ್ಟುವಿನಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. ತಾಲೂಕಿಗೆ ಅರ್ಹತೆಯ ಜಾಗ ಉಳ್ಳಾಲ ಆಗಿದೆ. ತಾಲೂಕು ಘೋಷಣೆ ಮಾಡುವುದು ಸುಲಭದ ಮಾತಲ್ಲ. ಆದರೆ ಕ್ಷೇತ್ರದ ಶಾಸಕರು ರಸ್ತೆ ಅಭಿವೃದ್ಧಿಯಿಂದ ಹಿಡಿದು ಮೂಲಭೂತ ಸೌಕರ್ಯಗಳನ್ನು ಕ್ಷೇತ್ರದ ಜನಸಾಮಾನ್ಯರಿಗೆ ಒದಗಿಸುವಲ್ಲಿ ಸಫಲರಾಗಿದ್ದಾರೆ. ಹಾಗೆಯೇ ವೈದ್ಯಕೀಯ, ಇಂಜಿನಿಯರಿಂಗ್ ಉನ್ನತ ಶಿಕ್ಷಣ ಸಂಸ್ಥೆಗಳು, ಧಾರ್ಮಿಕ ಕ್ಷೇತ್ರಗಳನ್ನು ಒಳಗೊಂಡಂತಹ ಕ್ಷೇತ್ರ ದೇಶದಲ್ಲೇ ಗುರುತಿಸಲ್ಪಟ್ಟಿದೆ. ಸಚಿವರ ಶ್ರಮದಿಂದ ಇದೀಗ ತಾಲೂಕು ರಚನೆಯ ಘೋಷಣೆಯಾಗಿದೆ. ಇದು ಊರಿಗೆ ಆಗುವಂತಹ ಒಳ್ಳೆಯ ಕೆಲಸ . ಈ ನಿಟ್ಟಿನಲ್ಲಿ ಸಚಿವರಿಗೆ ನಡೆಯುವಂತಹ ಅಭಿನಂದನಾ ಕಾರ್ಯಕ್ರಮದಲ್ಲಿ ಜಾತಿ, ಧರ್ಮ, ಪಕ್ಷ ಬೇಧ ಮರೆತು ಎಲ್ಲರೂ ಭಾಗವಹಿಸಬೇಕು ಎಂದರು.
ಸುದ್ಧಿಗೋಷ್ಠಿಯಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮುಸ್ತಾಫ ಹರೇಕಳ, ಉದ್ಯಮಿ ಪ್ರಸಾದ್ ರೈ ಕಲ್ಲಿಮಾರ್, ಸೋಮೇಶ್ವರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವನಾಥ್ ಗಟ್ಟಿ ವಗ್ಗ, ಪುರುಷೋತ್ತಮ್ ಅಂಚನ್ ಉಪಸ್ಥಿತರಿದ್ದರು.


