UN NETWORKS
ತೊಕ್ಕೊಟ್ಟು: ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಕುರ್ನಾಡು ಮಹಾಶಕ್ತಿ ಕೇಂದ್ರ ಆಶ್ರಯದಲ್ಲಿ ಜ. 20ರಂದು ಸಂಜೆ 4.30ಕ್ಕೆ ಚುನಾವಣಾ ಕಾರ್ಯಾಲಯ ಉದ್ಘಾಟನೆ ಹಾಗೂ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಯಲಿದೆ ಎಂದು ಕುರ್ನಾಡು ಮಹಾಶಕ್ತಿಕೇಂದ್ರದ ಅಧ್ಯಕ್ಷ ಹಾಗೂ ಹಿರಿಯ ಬಿಜೆಪಿ ಮುಖಂಡ ಟಿ.ಜಿ. ರಾಜಾರಾಂ ಭಟ್ ಹೇಳಿದರು.
ತೊಕ್ಕೊಟ್ಟು ಖಾಸಗಿ ಹೊಟೇಲ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಲೋಕಸಭಾ ಕ್ಷೇತ್ರದ ಚುನಾವಣಾ ತಯಾರಿ ದೃಷ್ಟಿಯಿಂದ ಚುನಾವಣಾ ಕಾರ್ಯಾಲಯ ಉದ್ಘಾಟನೆ ಹಾಗೂ ಕಾರ್ಯಕರ್ತರ ಬೃಹತ್ ಸಮಾವೇಶ ಮುಡಿಪು ಅಮರ್ ದೀಪ ಕಾಂಪ್ಲೆಕ್ಸ್ನಲ್ಲಿ ಸಂಜೆ 4.30ಕ್ಕೆ ನಡೆಯಲಿದೆ. ಸಂಸದ ನಳಿನ್ ಕುಮಾರ್ ಕಟೀಲ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಪುತ್ತೂರು ಶಾಸಕ ಸಂಜೀವ ಮಠಂದೂರು, ಕಾರ್ಕಳ ಶಾಸಕ ಸುನಿಲ್ ಕುಮಾರ್, ಮಂಗಳೂರು ಲೋಕಸಭಾ ಕ್ಷೇತ್ರ ಸಂಚಾಲಕ ಗೋಪಾಲಕೃಷ್ಣ ಹೇರಳ ಹಾಗೂ ಅಧ್ಯಕ್ಷತೆಯನ್ನು ಸಂತೋಷ್ ಕುಮಾರ್ ರೈ ಬೋಳಿಯಾರ್ ಅಧ್ಯಕ್ಷತೆ ವಹಿಸಲಿದ್ದು, ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ 4.00ಗಂಟೆಗೆ ತೌಡುಗೋಳಿ ಕ್ರಾಸ್ನಿಂದ 4.15ಕ್ಕೆ ಬೋಳಿಯಾರಿನಿಂದ ಬೈಕ್ ರ್ಯಾಲಿ ಆರಂಭವಾಗಿ ಮುಡಿಪುವಿನಲ್ಲಿ ಸಮಾಪನೆಗೊಳ್ಳಲಿದೆ ಎಂದರು.
ಮೋದಿ ಟೀ ಕೌಂಟರ್ : ಕಾರ್ಯಕ್ರಮದಲ್ಲಿ ವಿಶೇಷವಾಗಿ ಮೋದಿ ಚಹಾ ಕೌಂಟರ್ ಇಡಲಾಗುವುದು. ಈ ಮೂಲಕ ಮೋದಿ ಮತ್ತೊಮ್ಮೆ ಘೋಷಣೆಯನ್ನು ಜನರಿಗೆ ತಲುಪಿಸಲಾಗುವುದು. ಇದೇ ಸಂದರ್ಭ 14ಮಂದಿ ಹಿರಿಯ ಬಿಜೆಪಿ ಮುಖಂಡರುಗಳಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಮಾತನಾಡಿ, ಸುಮಾರು ಎರಡು ಸಾವಿರ ಕಾರ್ಯಕರ್ತರು ಬೈಕ್ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಶಕ್ತಿಕೇಂದ್ರ, ಬೂತ್ ಸಮಿತಿ ಹಾಗೂ ಪೇಜ್ ಪ್ರಮುಖರು ಭಾಗವಹಿಸಲಿದ್ದಾರೆ. ಮೋದಿ ಸರಕಾರದ 83ಯೋಜನೆಗಳ ಪರಿಚಯ ಹಾಗೂ ಉದ್ದೇಶಗಳನ್ನು ತಿಳಿಸಲಿದ್ದೇವೆ ಎಂದರು.ಸುದ್ದಿಗೋಷ್ಠಿಯಲ್ಲಿ ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮೋಹನರಾಜ್ ಕೆ.ಆರ್, ತಾಲೂಕು ಪಂಚಾಯಿತಿ ಸದಸ್ಯ ನವೀನ್ ಪಾದಲ್ಪಾಡಿ ಹಾಗೂ ಕುರ್ನಾಡು ಶಕ್ತಿಕೇಂದ್ರದ ಪ್ರಧಾನ ಕಾರ್ಯದರ್ಶಿ ಲೋಹಿತ್ ಗಟ್ಟಿ ಉಪಸ್ಥಿತರಿದ್ದರು.


