UN NETWORKS
ಕೊಣಾಜೆ: ಕಪ್ಪೆಚಿಪ್ಪು ಹೆಕ್ಕಲೆಂದು ಇತರೆ ಐವರು ಸ್ನೇಹಿತರ ಜತೆಗೆ ತೆರಳಿದ್ದ ಬಾಲಕನೋರ್ವ ನೇತ್ರಾವತಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ವೇಳೆ ಸಂಭವಿಸಿದೆ.
ಪುದು ಗ್ರಾಮ ಅಮ್ಮೆಮ್ಮಾರ್ ನಿವಾಸಿ ಎಂ.ಬಶೀರ್ ಎಂಬವರ ಪುತ್ರ ಅಬ್ದುಲ್ ಸತ್ತಾರ್ (15) ಮೃತ ಬಾಲಕ. ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಫರಂಗಿಪೇಟೆ ಕಡೆಯಿಂದ ಕಪ್ಪೆಚಿಪ್ಪು ಸಂಗ್ರಹಿಸಲು ಸತ್ತಾರ್ ಸೇರಿದಂತೆ ಐವರು ನೇತ್ರಾವತಿ ನದಿ ತೀರಕ್ಕೆ ಇಳಿದಿದ್ದರು. ಅಲ್ಲಿ ಕಪ್ಪೆಚಿಪ್ಪು ಹಿಡಿಯುವ ಸಂದರ್ಭ ಆಯತಪ್ಪಿ ನದಿ ನೀರಿಗೆ ಬಿದ್ದ ಸತ್ತಾರ್ ಬಳಿಕ ನಾಪತ್ತೆಯಾಗಿದ್ದರು. ಕೂಡಲೇ ಕೊಣಾಜೆ ಠಾಣಾ ಪೊಲೀಸರು ಹಾಗೂ ಸ್ಥಳೀಯ ಈಜುಗಾರರು ನಾಪತ್ತೆಯಾದ ಬಾಲಕನಿಗಾಗಿ ಶೋಧ ಕಾರ್ಯ ಆರಂಭಿಸಿದ್ದರು. ಒಂದು ಗಂಟೆ ಬಳಿಕ ಬಾಲಕನ ಮೃತದೇಹ ಮುಳುಗಿದ ಜಾಗದಿಂದ ಸ್ವಲ್ಪ ದೂರದಲ್ಲಿ ಪತ್ತೆಯಾಗಿದೆ. ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


