UN NETWORKS
ಉಳ್ಳಾಲ: ಸಂಘಟನೆಯಲ್ಲಿ ಪೈಪೋಟಿ ಆಗುವುದು ಬೇಡ. ಎಲ್ಲರೂ ಜತೆಯಾಗಿ ಸೇರಿಕೊಂಡು ಸಂಘಟನೆ ಬೆಳೆಸುತ್ತಾ ಅಪವಾದಗಳು ಬಾರದಂತೆ, ಸಂಘದ ರೀತಿಯಲ್ಲಿ ತೆರೆಮರೆಯಲ್ಲಿ ಕಾರ್ಯಕರ್ತರು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದು ಮಾತೃಭೂಮಿ ಸೇವಾ ಪ್ರತಿಷ್ಠಾನ ದ ಅಧ್ಯಕ್ಷ ಕೆ.ಟಿ ಸುವರ್ಣ ಅಭಿಪ್ರಾಯಪಟ್ಟರು.
ತೊಕ್ಕೊಟ್ಟು ಚಾವಡಿ ಸಭಾಂಗಣದಲ್ಲಿ ಭಾನುವಾರ ಹಿಂದೂ ಯುವಸೇನೆ ಪಾಂಚಜನ್ಯ ಶಾಖೆ ತೊಕ್ಕೊಟ್ಟು ಇದನ್ನು ಉದ್ಘಾಟಿಸಿ ಮಾತನಾಡಿದರು.ಉಳ್ಳಾಲ ಭಾಗದಲ್ಲಿನ ಹಿಂದೂ ಸಂಘಟನೆಗಳಲ್ಲಿ ಒಗ್ಗಟ್ಟಿನ ಕೊರತೆಯಿದೆ. ಆದರೆ ಹಿಂದೆ ಇದ್ದಂತಹ ಹಿಂದೂ ಯುವಸೇನೆ ಮರುಸ್ಥಾಪನೆಯಾಗುವ ಮೂಲಕ ಎಲ್ಲಾ ಯುವಕರನ್ನು ಒಗ್ಗೂಡಿಸುವ ಕಾರ್ಯ ಆಗಲಿದೆ. ಹಿಂದೂಗಳ ರಕ್ಷಣೆಯ ಜಾಗ ಎಕ್ಕೂರು ಎಂಬ ಮಾತು ಇದೆ. ಅಲ್ಲಿ ಹಿಂದೂ ಯುವಸೇನೆ ಹಿಂದೆಯೂ , ಈಗಲೂ ಬಲಿಷ್ಠವಾಗಿದೆ. ಸಮಾಜಮುಖಿ ಕಾರ್ಯಗಳೊಂದಿಗೆ ಸಮಾಜದಲ್ಲಿ ಅಸಹಾಯಕರಿಗೆ ಧ್ವನಿಯಾಗಿ ನಿಲ್ಲುತ್ತಾ ಸಂಘಟನೆ ಬೆಳೆದುನಿಂತಿದೆ. ಉಳ್ಳಾಲದಲ್ಲಿಯೂ ತಿಂಗಳಲ್ಲಿ ಸಭೆ ಕರೆದು ಸಂಘಟನೆಯನ್ನು ಬಲಿಷ್ಠಗೊಳಿಸುವ ಪ್ರಯತ್ನ ನೂತನ ಸಮಿತಿಯಿಂದ ನಡೆಯಬೇಕಿದೆ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ವಹಿಸಿ ಮಾತನಾಡಿ ಯುವಶಕ್ತಿಯನ್ನು ಸೇರಿಸುವುದೇ ದೊಡ್ಡ ಕೆಲಸ. ಈ ನಡುವೆ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸೇರಿಸಿಕೊಂಡು ಮತ್ತೆ ಉಳ್ಳಾಲ ಭಾಗದಲ್ಲಿ ಸ್ಥಾಪನೆಗೊಂಡ ಹಿಂದೂ ಯುವಸೇನೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿ. ರಕ್ತದ ಕೊರತೆ, ಬ್ರಹ್ಮಕಲಶ ಸಮಯ ಸೇವೆ ಅಶಕ್ತರಿಗೆ ಸಹಾಯ ವಿವಿಧ ರೀತಿಯಲ್ಲಿ ತೊಡಗಿಸಿಕೊಂಡಿದೆ. ಸಂಘದ ಅಡಿಯಲ್ಲಿ ವಿವಿಧ ಸಂಘಟನೆಗಳು ಇದ್ದರೂ, ಎಲ್ಲರ ಉದ್ದೇಶ ಹಿಂದುತ್ವ. ತೊಕ್ಕೊಟ್ಟುವಿನಲ್ಲಿ ಆರಂಭಗೊಂಡ ಸೇನೆ ಹಿಂದುತ್ವಕ್ಕೆ ದೊಡ್ಡ ಅಡಿಪಾಯ ಆಗಿ ಹೊರಹೊಮ್ಮಲಿ ಎಂದು ಹಾರೈಸಿದರು.
ಸಂಘಟನೆಯ ಉದ್ದೇಶಗಳನ್ನು ಹಿಂದೂ ಯುವ ಸೇನೆ ಕೇಂದ್ರೀಯ ಮಂಡಳಿ ಅಧ್ಯಕ್ಷ ಭಾಸ್ಕರ ಚಂದ್ರ ಶೆಟ್ಟಿ ನೀಡಿದರು.
ಪದಾಧಿಕಾರಿಗಳ ಘೋಷಣೆಯನ್ನು ಯಶೋಧರ ಚೌಟ ಎಕ್ಕೂರು ನಡೆಸಿದರು.
ಮುಖ್ಯ ಅತಿಥಿಗಳಾಗಿ ಮಾಡೂರು ಶಿರಡಿ ಸಾಯಿ ಮಂದಿರದ ಆಡಳಿತ ಮೊಕ್ತೇಸರ ಚಂದ್ರಹಾಸ್ ಪಂಡಿತ್ ಹೌಸ್, ಹಿಂದೂ ಯುವಸೇನೆ ಕೇಂದ್ರೀಯ ಮಂಡಳಿ ಉಪಾಧ್ಯಕ್ಷರುಗಳಾದ ಶುಭಕರ ಶೆಟ್ಟಿ ಎಕ್ಕೂರು, ನಾಗರಾಜ ಆಚಾರ್ಯ ಮಂಗಳಾದೇವಿ, ಮಂಗಳೂರು ಗಣೇಶೋತ್ಸವ ಸಮಿತಿ ಅಧ್ಯಕ್ಷ ಶಶಿಕಾಂತ್ ನಾಗ್ವೇಕರ್, ಉಪಾಧ್ಯಕ್ಷ ಶ್ರೀನಿವಾಸ ಎಕ್ಕೂರು, ಹಿಂದೂ ಯುವಸೇನೆ ಜಿಲ್ಲಾಧ್ಯಕ್ಷ ವೀರಪ್ಪ ಮೂಡುಶೆಡ್ಡೆ, ಜಿಲ್ಲಾ ಕಾರ್ಯದರ್ಶಿ ರವಿಚಂದ್ರ ಎಕ್ಕೂರು, ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ಸುರೇಶ್ ಶೆಟ್ಟಿ ಕೊಟ್ಟಾರ ಕ್ರಾಸ್ ಭಾಗವಹಿಸಿದ್ದರು. ಪುರುಷೋತ್ತಮ ಕಲ್ಲಾಪು, ದೀಕ್ಷಿತ್ ಪೂಜಾರಿ ತೊಕ್ಕೊಟ್ಟು, ಜಿತೇಶ್ ಗಟ್ಟಿ ಪಿಲಾರ್, ವಿಕಾಸ ರಾವ್ ಕುಂಪಲ, ಸತೀಶ್ ಚೆಂಬುಗುಡ್ಡೆ ಉಪಸ್ಥಿತರಿದ್ದರು. ಪ್ರವೀಣ್. ಎಸ್ ಕುಂಪಲ ಸ್ವಾಗತಿಸಿದರು. ಕೃಷ್ಣ ಪೊನ್ನತ್ತೋಡು ಕಾರ್ಯಕ್ರಮ ನಿರ್ವಹಿಸಿದರು. ಪ್ರಶಾಂತ್ ಕಾಪಿಕಾಡ್ ವಂದಿಸಿದರು.
`ಮನೆ ಜವಾಬ್ದಾರಿ ನಿರ್ವಹಿಸಿ
ಮತ್ತೆ ಸಮಾಜದಲ್ಲಿ ತೊಡಗಿಸಿಕೊಳ್ಳಿ’
` ರಾಮಜನ್ಮಭೂಮಿ ವಿವಾದ ಬಳಿಕ ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಿಂದೂ ಆರಾಧನಾಲಯಗಳ ಮೇಲೆ ನಿರಂತರ ದೌರ್ಜನ್ಯಗಳು ನಡೆದಾಗ ಸಂಘಪರಿವಾರದ ಪ್ರಮುಖರೊಂದಿಗೆ ಚರ್ಚಿಸಿ ಹಿಂದೂ ಯುವಸೇನೆ ಆರಂಭಿಸಲಾಗಿತ್ತು. ಸಂಘದ ಪ್ರಥಮ ಸಂಘಟನೆಯಾಗಿ ಹೊರಹೊಮ್ಮುವ ಮೂಲಕ ಬಸ್ಸಿನಲ್ಲಿ ಮಹಿಳೆಯರಿಗೆ ಮೀಸಲು ಸೀಟಿನ ಹೋರಾಟದಲ್ಲಿ ಯಶಸ್ವಿ, ವ್ಯಾಘ್ರಚಾಮುಂಡೇಶ್ವರಿ ದೇವಸ್ಥಾನಕ್ಕೆ ಪೊಲೀಸರು ಶೂ ಹಾಕಿ ಒಳಹೊಕ್ಕ ಸಂದರ್ಭ ಹೋರಾಟ ನಡೆಸಿ ನ್ಯಾಯ ಒದಗಿಸಿಕೊಟ್ಟಂತಹ ಉದಾಹರಣೆಗಳಿವೆ. ನಗರದಲ್ಲಿ ಅಲ್ಲಲ್ಲಿ ತಂಡಗಳನ್ನು ಕಟ್ಟಿಕೊಂಡು ಹಿಂದೂ ಯುವಕರೇ ಗಲಾಟೆ ನಡೆಸುವ ಸಂದರ್ಭ ಅವರನ್ನು ಒಟ್ಟು ಸೇರಿಸುವ ಪ್ರಯತ್ನ ಸೇನೆಯಿಂದ ಆಗಿತ್ತು. ಸೇನೆಯ ಸದಸ್ಯರು ಪ್ರಮುಖವಾಗಿ ತಮ್ಮನ್ನು ಕೆಲಸಗಳಲ್ಲಿ ತೊಡಗಿಸಿಕೊಂಡು ಆನಂತರ ಸಮಾಜದ ಚಿಂತನೆಗೆ ಒಳಪಡಿಸಬೇಕಿದೆ. ಪ್ರತಿ ಮನೆ ಬಲಿಷ್ಠವಾದಾಗ ಹಿಂದೂ ಸಮಾಜ ಗಟ್ಟಿಯಾಗಲು ಸಾಧ್ಯ ‘
ಭಾಸ್ಕರ ಚಂದ್ರ ಶೆಟ್ಟಿ
ಕೇಂದ್ರೀಯ ಮಂಡಳಿ ಸದಸ್ಯರು
ಹಿಂದೂ ಯುವಸೇನೆ


