UN NETWORKS
ಉಳ್ಳಾಲ: ಇಂದಿನ ಆಧುನಿಕತೆಯ ಜೀವನದಲ್ಲಿ ದೈಹಿಕ, ಬೌದ್ಧಿಕ, ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆ ಅತೀ ಮುಖ್ಯ. ಆ ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಕ್ರೀಡೆಗೆ ಭಾಗವಹಿಸುವಂತೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹೇಳಿದ್ದಾರೆ.
ಅವರು ಉಚ್ಚಿಲ ಬೋವಿ ವಿದ್ಯಾಸಂಸ್ಥೆಯ ಶತಮಾನೋತ್ಸವದ ಸವಿ ನೆನಪಿಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ (ಆಡಳಿತ) ಇದರ ಸಹಯೋಗದೊಂದಿಗೆ ಉಚ್ಚಿಲ ಬೋವಿ ಶಾಲೆಯ ಕ್ರೀಡಾಂಗಣದಲ್ಲಿ ಜರಗಿದ ದಕ್ಷಿಣ ಕನ್ನದ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ ಮಣ್ಣಿನ ಕ್ರೀಡೆ ಎಂದರೆ ಕಬಡ್ಡಿ. ಈ ಪಂದ್ಯಾಟದಲ್ಲಿ ದೇಶದ ಸಾಧನೆ ಕೂಡ ಮೆಚ್ಚ ತಕ್ಕದ್ದು. ಇಂತಹ ಕ್ರೀಡೆಯನ್ನು ಪ್ರೋತ್ಸಾಹಿಸುವುದರೊಂದಿಗೆ ಬೆಳೆಸಬೇಕಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೋಮೇಶ್ವರ ಗ್ರಾಮ ಪಂಚಾಯತ್ನ ಅಧ್ಯಕ್ಷರಾದ ರಾಜೇಶ್ ಉಚ್ಚಿಲ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ಮಹಮ್ಮದ್ ಮೋನು, ಜಿಲ್ಲಾ ಪಂಚಾಯತ್ ಸದಸ್ಯರಾದ ಧನಲಕ್ಷ್ಮಿ ಗಟ್ಟಿ, ತಾಲೂಕು ಪಂಚಾಯತ್ ಸದಸ್ಯರಾದ ರವಿಶಂಕರ್, ಸುರೇಖ ಚಂದ್ರಹಾಸ್ ಹಾಗೂ ಪುರುಷೋತ್ತಮ ಪೂಜಾರಿ, ಮೂರೂರ ಬೋವಿ ಮೋಯ ಮಹಾಸಭಾ ಅಧ್ಯಕ್ಷರಾದ ಚಿದಾನಂದ ಆರ್. ಉಚ್ಚಿಲ್, ಸಂಚಾಲಕರಾದ ದೇವಿದಾಸ್ ಟಿ. ಉಚ್ಚಿಲ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ರಘುನಾಥ್, ತಾಲೂಕು ಪರಿವೀಕ್ಷಣಾಧಿಕಾರಿ ವಿಷ್ಣು ಹೆಬ್ಬಾರ್, ಯುವಜನ ಸೇವಾ ಕ್ರೀಡಾಧಿಕಾರಿ ಲಿಲ್ಲಿ ಪಾಯ್ಸ, ಜೀವನ್ದಾಸ್ ಶೆಟ್ಟಿ, ರಾಧಕೃಷ್ಣ ಶೆಟ್ಟಿ, ತಾರಾನಾಥ ರೈ, ಗುರುನಾಥ್ ಬಾಗೇವಾಡಿ, ಲೋಕನಾಥ ರೈ, ಉರ್ಬನ್ ಮಸ್ಕರೇನಸ್, ತುಕಾರಾಮ, ಗ್ರಾಮ ಪಂಚಾಯತ್ ಸದಸ್ಯರಾದ ಅರುಣ್, ಸಚಿನ್ ಉಪಸ್ಥಿತರಿದ್ದರು.
ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ತ್ಯಾಗಂ ಹರೇಕಳ ಸ್ವಾಗತಿಸಿದರು. ಶಿಕ್ಷಕಿ ರಮಿತ ಮತ್ತು ಮೋಹನ್ ಶಿರ್ಲಾಲ್ ನಿರೂಪಿಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಮೋಹನ್ದಾಸ್ ರೈ ಧನ್ಯವಾದ ಸಲ್ಲಿಸಿದರು.
ಫಲಿತಾಂಶ: ಜಿಲ್ಲಾ ಮಟ್ಟದ ಪಂದ್ಯಾಟದಲ್ಲಿ 17 ವರ್ಷ ವಯೋಮಿತಿಯೊಳಗಿನ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆ ವಗ್ಗ ಬಂಟ್ವಾಳ ತಾಲೂಕು, ದ್ವಿತೀಯ ಸರಕಾರಿ ಪ್ರೌಢಶಾಲೆ ಎಣ್ಮೂರು ಸುಳ್ಯ ತಾಲೂಕು, ಬಾಲಕಿಯರ ವಿಭಾಗದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಂಟ್ವಾಳ ತಾಲೂಕು ಪ್ರಥಮ, ಭಗವತಿ ಆಂಗ್ಲ ಮಾಧ್ಯಮ ಶಾಲೆ ಮಂಗಳೂರು ದಕ್ಷಿಣ ದ್ವಿತೀಯ ಸ್ಥಾನವನ್ನು, 14 ವರ್ಷ ವಯೋಮಿತಿಯೊಳಗಿನ ಬಾಲಕರ ವಿಭಾಗದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮುಂಡಾಜೆ, ಬೆಳ್ತಂಗಡಿ ತಾಲೂಕು ಪ್ರಥಮ, ತೌಹಿದ್ ಆಂಗ್ಲ ಮಾಧ್ಯಮ ಶಾಲೆ ಬಂಟ್ವಾಳ ದ್ವಿತೀಯ ಸ್ಥಾನವನ್ನು, ಬಾಲಕಿಯರ ವಿಭಾಗದಲ್ಲಿ ಸ್ಟೆಲ್ಲಾ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆ ಮಂಗಳೂರು ದಕ್ಷಿಣ ಪ್ರಥಮ, ಲಿಟ್ಲ ಪ್ಲವರ್ ಆಂಗ್ಲ ಮಾಧ್ಯಮ ಶಾಲೆ ಪುತ್ತೂರು ದ್ವಿತೀಯ ಸ್ಥಾನವನ್ನು ಪಡೆದರು.


