UN NETWORKS
ಉಳ್ಳಾಲ: ಮಳೆಗಾದಲ್ಲಿ ಜಿಲ್ಲೆಯಾದ್ಯಂತ ಸಮುದ್ರ ರಭಸವಾಗಿರುವುದರಿಂದ ಪ್ರವಾಸಿಗರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಈ ನಿಟ್ಟಿನಲ್ಲಿ ಜಿಲ್ಲಾಡಳಿತದ ಆದೇಶದಂತೆ ಜಿಲ್ಲೆಯ ಎಂಟು ಸಮುದ್ರ ಕಿನಾರೆಗಳಲ್ಲಿ 24 ಗೃಹರಕ್ಷಕ ಸಿಬ್ಬಂದಿ ಬೀಚ್ ಗಾರ್ಡ್ಗಳಾಗಿ ಕಾರ್ಯಾಚರಿಸುತ್ತಿದ್ದಾರೆ. ಅದರಲ್ಲಿ ಮೂವರು ಉಳ್ಳಾಲ ಸಮುದ್ರ ತೀರದಲ್ಲೂ ಕಾರ್ಯಾಚರಣೆಯನ್ನು ಭಾನುವಾರದಿಂದ ಆರಂಭಿಸಿದ್ದಾರೆ.
ಜೀವರಕ್ಷಕದಳ ಹಾಗೂ ಸ್ಥಳೀಯ ಮೀನುಗಾರರ ಸಹಕಾರದೊಂದಿಗೆ ಗೃಹರಕ್ಷಕ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2017ರ ಜೂನ್ ತಿಂಗಳಿನಲ್ಲಿ ಜಿಲ್ಲಾಡಳಿತ ನೀಡಿದ ಆದೇಶದಂತೆ ಗೃಹರಕ್ಷಕ ಸಿಬ್ಬಂದಿಯನ್ನು ಸಮುದ್ರ ಕಿನಾರೆಗೆ ನೇಮಿಸಲಾಗಿತ್ತು. ಇದೀಗ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರ ಆದೇಶದಂತೆ ಇಂದಿನಿಂದ ಸಮುದ್ರ ಕಿನಾರೆಗಳಲ್ಲಿ ಸೇವೆಯನ್ನು ಆರಂಭಿಸಿದ್ದಾರೆ. ಸೋಮೇಶ್ವರ, ಉಳ್ಳಾಲ, ತಣ್ಣೀರುಬಾವಿ 1,2, ಪಣಂಬೂರು, ಸಸಿಹಿತ್ಲು, ಸುರತ್ಕಲ್, ಮುಕ್ಕ ಭಾಗಗಳಲ್ಲಿ ತಲಾ ಮೂರರಂತೆ ಗೃಹರಕ್ಷಕ ಸಿಬ್ಬಂದಿ ಸೇವೆ ನಡೆಸುತ್ತಿದ್ದಾರೆ. ಹೆಚ್ಚು ಪ್ರವಾಸಿಗರು ಬರುವ ಸ್ಥಳವನ್ನು ಗುರುತಿಸಿ ಅವರಿಗೆ ಎಚ್ಚರಿಕೆ ನೀಡುವ ಕೆಲಸವನ್ನು ಗಾರ್ಡ್ಗಳು ಮಾಡುತ್ತಿದ್ದಾರೆ. ಮಳೆಗಾಲದ ಸಮುದ್ರ ತೀರದಲ್ಲಿ ಅಲೆಗಳ ರಭಸ ಹೆಚ್ಚಿರುತ್ತದೆ. ಅದೇ ಸಮಯದಲ್ಲಿ ಪ್ರವಾಸಿಗರು ಜಾಸ್ತಿ ಬರುತ್ತಾರೆ. ಸಮುದ್ರದ ಅಪಾಯದ ಅರಿವು ಪ್ರವಾಸಿಗರಿಗೆ ಇರುವುದಿಲ್ಲ. ಇದರಿಂದಾಗಿ ಅಪಾಯವನ್ನು ಎದುರಿಸುತ್ತಿದ್ದರು. ಪ್ರವಾಸೋದ್ಯಮ ಅಭಿವೃದ್ಧಿಯ ಹಾಗೂ ಜನರ ರಕ್ಷಣೆಯ ಉದ್ದೇಶದಿಂದ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಈ ಬಾರಿ ಪ್ರವಾಸಿಗರಿಗೆ ಸೂಚನೆ ನೀಡುವ ಸಲುವಾಗಿ
8 ಮೆಗಾಫೋನ್ ಗಳನ್ನು ನೀಡಲಾಗಿದೆ. ಎರಡು ದಿನಗಳಲ್ಲಿ ಅದನ್ನು ಹಿಡಿದುಕೊಂಡು ಪ್ರವಾಸಿಗರಿಗೆ (ದೊಡ್ಡ ಮೈಕ್) ಮೆಘಾಫೋನ್ ಮೂಲಕ ಎಚ್ಚರಿಕೆಯನ್ನು ನೀಡಲಾಗುವುದು. ಜೀವರಕ್ಷಕದವರು ಪ್ರವಾಸಿಗರಿಗೆ ಎಚ್ಚರಿಕೆ ನೀಡಿದರೂ, ಅವರು ಸಮವಸ್ತ್ರದಲ್ಲಿ ಇರದೇ ಇರುವುದರಿಂದ ಅವರನ್ನು ದಿಕ್ಕರಿಸಿ ಹೋಗುವ ಪ್ರವಾಸಿಗರೇ ಹೆಚ್ಚು. ಅದಕ್ಕಾಗಿ ಲಾಠಿ ಮತ್ತು ಸಮವಸ್ತ್ರ ಧರಿಸಿಕೊಂಡ ಗೃಹರಕ್ಷಕ ಸಿಬ್ಬಂದಿ ಎಚ್ಚರಿಕೆ ನೀಡಿದಲ್ಲಿ ಪ್ರವಾಸಿಗ ಸೂಚನೆ ಪಾಲಿಸುತ್ತಾನೆ.
ಬೀಚ್ ಗಳ 50 ಮೀ. ದೂರದಲ್ಲಿ ಡೇಂಜರ್ ಝೋನ್ ಅನ್ನುವ ನಾಮಫಲಕವನ್ನು ಅಳವಡಿಸಲಾಗಿದೆ. ಅದನ್ನು ದಾಟಿದಲ್ಲಿ ಅಪಾಯ ಆಗುವ ಸಾಧ್ಯತೆಗಳಿರುವ ಮುನ್ನೆಚ್ಚರಿಕೆಯ ಕ್ರಮವಾಗಿ ಗೃಹರಕ್ಷಕ ಸಿಬ್ಬಂದಿ ಕಾರ್ಯಾಚರಿಸುತ್ತಾರೆ. ಜೀವರಕ್ಷಕದವರು ಸಮವಸ್ತ್ರದಲ್ಲಿ ಇರದೇ ಇರುವುದರಿಂದ ಪ್ರವಾಸಿಗರು ಅವರ ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಲಾಠಿ ಹಿಡಿದುಕೊಂಡು ಸಮವಸ್ತ್ರ ಹಾಕಿಕೊಂಡಾಗ ಪ್ರವಾಸಿಗರಿಗೆ ಎಚ್ಚರಿಕೆ ನೀಡಲು ಸಹಕಾರಿಯಾಗುತ್ತದೆ.ಜಿಲ್ಲಾಡಳಿತದ ಸೂಚನೆಯನ್ನು ಪಾಲಿಸಲಾಗಿದೆ. ಜೀವರಕ್ಷಕ ಹಾಗೂ ಗೃಹರಕ್ಷಕ ಸಿಬ್ಬಂದಿ ಕೊಡು-ಕೊಳ್ಳುವಿಕೆ ರೀತಿಯಲ್ಲಿ ಕಾರ್ಯಾಚರಿಸುತ್ತಾರೆ. ಗಾರ್ಡ್ಗಳು ಎಲ್ಲಾ ತರಬೇತಿಯನ್ನು ಪಡೆದವರಾದರೂ, ರಭಸದಿಂದ ಕೂಡಿದ ಸಮುದ್ರದಲ್ಲಿ ಈಜುವುದು ಕಷ್ಟಕರ. ಅದಕ್ಕಾಗಿ ಸ್ಥಳೀಯ ಜೀವರಕ್ಷಕ ದಳ ದ ಸಹಾಯದ ಜತೆಗೆ ಕಾರ್ಯಾಚರಣೆ ನಡೆಯುತ್ತಿದೆ.
ಡಾ| ಮುರಲೀ ಮೋಹನ್ ಚೂಂತಾರು
ಕಮಾಂಡೆಂಟ್
ಜಿಲ್ಲಾ ಗೃಹರಕ್ಷದಳ


