UN NETWORKS
ಇನೋಳಿ : ಪ್ರತಿ ಧರ್ಮದಲ್ಲೂ ಜೀವ ಉಳಿಸಲು ಹೆಚ್ಚಿನ ಮಹತ್ವವಿದೆ. ಧರ್ಮಗ್ರಂಥಗಳಲ್ಲಿ ಅದರದೇ ಉಲ್ಲೇಖವಿದೆ. ಅದಕ್ಕಾಗಿ ರಕ್ತದಾನದಂತಹ ಶಿಬಿರಗಳು ಹೆಚ್ಚು ನಡೆಯಬೇಕಿದೆ ಎಂದು ಹೋಪ್ ಫೌಂಡೇಷನ್ನಿನ ಸ್ಥಾಪಕ ಸೈಫ್ ಸುಲ್ತಾನ್ ಹೇಳಿದ್ದಾರೆ.
ಅವರು ಇನೋಳಿ ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಹಾಗೂ ಯೆನೆಪೋಯ ಆಸ್ಪತ್ರೆ ದೇರಳಕಟ್ಟೆ ಇದರ ಜಂಟಿ ಆಶ್ರಯದಲ್ಲಿ ಬ್ಯಾರೀಸ್ ನಾಲೆಜ್ ಕ್ಯಾಂಪಸ್ಸಿನಲ್ಲಿ ಗುರುವಾರ ಜರಗಿದ ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಒಂದು ಯುನಿಟ್ ರಕ್ತ ಮೂರು ಜೀವಗಳನ್ನು ಉಳಿಸಬಹುದು. ಅದಕ್ಕಾಗಿ ಎಲ್ಲರೂ ಜಾಗೃತರಾಗಿ ರಕ್ತದಾನದಲ್ಲಿ ಪಾಲ್ಗೊಳ್ಳುವ ಮೂಲಕ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಿರುವಂತೆ ಇನ್ನೊಬ್ಬರ ಜೀವವನ್ನು ಉಳಿಸುವವರಂತಾಗಬೇಕಿದೆ ಎಂದರು.
ಇನೋಳಿ ಬ್ಯಾರಿಸ್ ತಾಂತ್ರಿಕ ಸಂಸ್ಥೆಯ ಹಿರಿಯ ಸಲಹೆಗಾರ ಡಾ|. ಎಸ್.ಕೆ.ರಾಯ್ಕರ್ ಮಾತನಾಡಿ ಬ್ಯಾರೀಸ್ ಶಿಕ್ಷಣ ಸಂಸ್ಥೆ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುತ್ತಾ ಬಂದಿದೆ. ರಕ್ತದಾನ ಶಿಬಿರದಲ್ಲಿಯೂ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಬ್ಯಾರಿಸ್ ತಾಂತ್ರಿಕ ಸಂಸ್ಥೆಯ ಪ್ರಾಂಶುಪಾಲ ಡಾ.ಅಂಥೋನಿ ಎ.ಜೆ , ಪ್ರೊ. ಮುಸ್ತಾಫ ಬಸ್ತಿಕೋಡಿ, ಡಾ.ಅಝೀಝ್ ಮುಸ್ತಾಫ, ಮುಸ್ತಾಫ ಅಡ್ಡೂರು, ಸಿರಾಜುದ್ದೀನ್ ಪರ್ಲಡ್ಕ, ಸಾಮಾಜಿಕ ಕಾರ್ಯಕರ್ತ ಶರೀಫ್ ಅಬ್ಬಾಸ್ ವಲಾಲ್, ನಾಸೀರ್ ಆರ್.ಬಿ ಉಪಸ್ಥಿತರಿದ್ದರು.
ಪ್ರೊ. ಮುಸ್ತಾಫ ಬಸ್ತಿಕೋಡಿ ಸ್ವಾಗತಿಸಿದರು. ಉರೂಸ ಖಾನ್ ಕಾರ್ಯಕ್ರಮ ನಿರೂಪಿಸಿದರು. ನಿತಿನ್ ಸ್ವಾಗತಿಸಿದರು.


