UN NETWORKS
ಕೊಣಾಜೆ: ಮಂಗಳೂರು ವಿಶ್ವವಿದ್ಯಾಲಯದ ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಸುವರ್ಣ ಮಹೋತ್ಸವದ ಅಂಗವಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈ ಹಿನ್ನೆಲೆಯಲ್ಲಿ `ಅರಿವಿನ ಅಲೆ’ ಸಂಶೋಧನಾ ಚಾವಡಿಯ ನಾಲ್ಕನೇ ಪ್ರಬಂಧ ಮಂಡನೆಯು ಗುರುವಾರ ನಡೆಯಿತು.
`ಕಾರಂತರ ಮೂಕಜ್ಜಿಯ ಕನಸುಗಳು ಕಾದಂಬರಿಯಲ್ಲಿ ಅತೀಂದ್ರಿಯ ಪ್ರಕಟ-ಒಂದು ಟಿಪ್ಪಣಿ’ ಎನ್ನುವ ವಿಚಾರದ ಕುರಿತು ಕನಕದಾಸ ಸಂಶೋಧನಾ ಕೇಂದ್ರದ ಸಂಶೋಧನಾ ಸಹಾಯಕರಾದ ಆನಂದ ಎಂ.ಕಿದೂರು ಅವರು ಮಾತನಾಡಿ,ಭೂತ, ವರ್ತಮಾನ ಭವಿಷ್ಯತ್ಗಳ ಕಥನ ಪ್ರತಿಬಿಂಬವನ್ನು ಮೂಕಜ್ಜಿಯ ಪಾತ್ರ ಮುಂದಿಡುತ್ತದೆ ಎಂದರು.
ಕಾರಂತರ ಜೀವನದೃಷ್ಟಿ ಪರಂಪರೆಯೊಂದರ ಕೊಂಡಿಯಂತೆಯೂ ಕಲಾಸೃಷ್ಟಿಯ ಆಯಾಮವನ್ನು ಮುಂದಿಡುತ್ತದೆ. ಮೂಕಜ್ಜಿಯ ಮೂಲಕ ಪರಂಪರೆಯೊಂದರ ತರ್ಕಕ್ಕೆ ನಿಲುಕದ ಕಥನಗಳ ಅನಾವರಣ ಮಾಡಿಸಿದ್ದು ಕಾರಂತರ ಶ್ರೇಷ್ಟವಾದ ಕೃತಿಸೃಷ್ಟಿಯೇ ಸರಿ ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರೊ.ಸೋಮಣ್ಣ ಅವರು, ಮುಂದಿನ ದಿನಗಳಲ್ಲಿ ವಿಭಾಗದ ಸಂಶೋಧನಾ ಚಟುವಟಿಕೆ ಚುರುಕಾಗಬೇಕಿದೆ. ಸಂಶೋಧಕರ ಜೊತೆಗೆ ವಿದ್ಯಾರ್ಥಿಗಳು ಸಹಭಾಗಿತ್ವದ ಪ್ರಬಂಧಗಳನ್ನು ಮಂಡಿಸುವ ಉತ್ತಮ ವೇದಿಕೆ `ಅರಿವಿನ ಅಲೆ’ ಎಂದು ಅಭಿಪ್ರಾಯಪಟ್ಟರು. ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಧನಂಜಯ ಕುಂಬ್ಳೆ ಅವರು ಸಂವಾದದಲ್ಲಿ ಭಾಗವಹಿಸಿದ್ದರು. ಸಂಶೋಧನಾ ವಿದ್ಯಾರ್ಥಿ ಮೈತ್ರಿಭಟ್ ಅವರು ಕಾರ್ಯಕ್ರಮ ನಿರೂಪಿಸಿದರು.


