UN NETWORKS
ಕುಂಪಲ: ಕುಂಪಲದ ಗುರುನಗರ ಶ್ರೀ ಕೃಷ್ಣ ಮುಖ್ಯಪ್ರಾಣ ದೇವಸ್ಥಾನದ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಜರಗಿದ ಮೊಸರುಕುಡಿಕೆ ಉತ್ಸವ ಸಂದರ್ಭ ಶ್ರೀ ಕೃಷ್ಣ ದೇವರ ವಿಶೇಷ ಪೂಜೆಯನ್ನು ಗೋವು ಬಂದು ನಿಂತು ವೀಕ್ಷಿಸಿದ ವಿಚಿತ್ರ ಪ್ರಸಂಗದ ಚಿತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದೆ.
ಎರಡು ದಿನಗಳ ಕಾಲ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನಮಾಷ್ಟಮಿ ಪ್ರಯುಕ್ತ ಪೂಜೆ ನಡೆಯುತಿತ್ತು. ಮೊದಲ ದಿನದ ರಾತ್ರಿ ಪೂಜೆಯ ಸಂದರ್ಭ ಗೋವು ದೇವಸ್ಥಾನದ ಅಂಗಳದಲ್ಲಿ ಹಾಕಲಾಗಿದ್ದ ರಂಗವಲ್ಲಿಯಲ್ಲಿ ನಿಂತು ಪೂಜೆಯನ್ನು ನೋಡಲು ನಿಂತಿತ್ತು. ಕೆಲ ನಿಮಿಷಗಳವರೆಗೆ ನಡೆದ ಪೂಜೆಯನ್ನು ನೋಡಿದ ಗೋವು ಬಳಿಕ ಪ್ರಸಾದ ವಿತರಣೆ ಬಳಿಕ ವಾಪಸ್ಸಾಗಿದೆ. ಗೋಪಾಲಕನ ಪೂಜೆಯನ್ನು ಕಣ್ತುಂಬಿಕೊಳ್ಳಲು ಗೋವೊಂದು ಬಂದಿತ್ತು. ಶ್ರೀಕೃಷ್ಣನಿಗೆ ಪೂಜೆ ನೆರವೇರಿಸಿ ಮಹಾ ಮಂಗಳಾರತಿ ನಡೆಯುವವರೆಗೂ ದೇವಾಲಯದ ಗರ್ಭಗುಡಿಯ ಹೊರಗೆ ನಿಂತು ಶ್ರೀಕೃಷ್ಣನ ಬಿಂಬವನ್ನು ಕಣ್ತುಂಬಿಕೊಂಡಿಕೊಂಡಿರುವುದು ವಿಶೇಷವಾಗಿತ್ತು ಎಂಬುದು ಭಕ್ತರೋರ್ವರ ಅಭಿಪ್ರಾಯವಾಗಿದೆ.
ಈ ಹಿಂದೆ ದೇವಸ್ಥಾನದಲ್ಲಿ ಮಧ್ಯಾಹ್ನ ಪೂಜೆಯ ವೇಳೆ ಗರುಡವೊಂದು ದೇವಸ್ಥಾನದ ಸುತ್ತ ತಿರುಗಿ ಭಕ್ತರನ್ನು ಬೆರಗುಗೊಳಿಸಿದ್ದರೆ, ನಾಗರಹಾವೊಂದು ದೇವಸ್ಥಾನದ ಸಮೀಪ ಪೂಜೆಯ ವೇಳೆ ಆಗಮಿಸಿರುವ ವಿಶೇಷ ಲಕ್ಷಣಗಳು ಇಲ್ಲಿ ನಡೆದಿವೆ ಎಂಬುದು ದೇವಸ್ಥಾನದ ಪ್ರಮುಖ ರಾಜೇಶ್ ಪೂಜಾರಿ ಅವರ ಅಭಿಪ್ರಾಯವಾಗಿದೆ. ಇದೀಗ ಪೂಜೆ ವೇಳೆ ಗೋವು ಬಂದು ನಿಂತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ತಿರುಗಾಡುತ್ತಿದೆ.



