ಉಳ್ಳಾಲ ನ್ಯೂಸ್ ನೆಟ್ವರ್ಕ್
ತಲಪಾಡಿ:ತಲಪಾಡಿ ಟೋಲ್ಗೇಟ್ ವಿರುದ್ಧ ಕಾಂಗ್ರೆಸ್ ಪ್ರೇರಿತ ಗಡಿನಾಡು ರಕ್ಷಣಾ ವೇದಿಕೆ ಪ್ರತಿಭಟನೆ ಕೈಬಿಡುತ್ತಿದ್ದಂತೆ ಇದೀಗ ತಲಪಾಡಿಯ ನಾಗರಿಕ ಹಿತರಕ್ಷಣಾ ಸಮಿತಿ ಹಾಗೂ ಕೇರಳದ ಎಲ್ ಡಿವೈಎಫ್ ಮಂಜೇಶ್ವರ ಹಾಗೂ ಉಳ್ಳಾ¯ ಬ್ಲಾಕ್ ಡಿವೈಎಫ್ ಐ ನೇತೃತ್ವದಲ್ಲಿ ಭಾನುವಾರ ಟೋಲ್ ಗೇಟಿನ ಎರಡು ಭಾಗಗಳಲ್ಲಿ ಪ್ರತಿಭಟನೆ ನಡೆದು, ಕಂಪೆನಿ ಬೇಡಿಕೆಗಳಿಗೆ ಸ್ಪಂಧಿಸದೇ ಇದ್ದಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ಮುಂದಿಟ್ಟಿದ್ದಾರೆ.
ತಲಪಾಡಿಯ ನಾಗರಿಕ ಹಿತರಕ್ಷಣಾ ಸಮಿತಿ, ಖಾಸಗಿ ಬಸ್ಸು ಮಾಲಕರ ಸಂಘ , ಎಸ್ ಎಸ್ ಎಫ್ ತಲಪಾಡಿ ಸೆಕ್ಟರ್, ತಲಪಾಡಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸ್ಥಳೀಯ ಮಹಿಳಾ ಸಂಘಟನೆಗಳು ಹಾಗೂ ಕೇರಳ ಭಾಗದ ಎಲ್ ಡಿವೈಎಫ್ ಮಂಜೇಶ್ವರ ಹಾಗೂ ಉಳ್ಳಾಲ ಬ್ಲಾಕ್ ಡಿವೈ ಎಫ್ ಐ ಎರಡು ಕಡೆಗಳಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು.
ಕೆ.ಸಿ.ರೋಡಿನಿಂದ ನಾಗರಿಕ ಹಿತರಕ್ಷಣಾ ಸಮಿತಿ ರ್ಯಾಲಿ ಮೂಲಕ ಟೋಲ್ ತಲುಪಿದರೆ, ಕೇರಳದ ಎಲ್ ಡಿವೈ ಎಫ್ ನೇತೃತ್ವದ ಪ್ರತಿಭಟನಾಕಾರರು ಮೇಲಿನ ತಲಪಾಡಿಯಿಂದ ಟೋಲ್ ವರೆಗೆ ರ್ಯಾಲಿ ಮೂಲಕ ಬಂದಾಗ ಪೊಲೀಸರು ತಡೆದರು. ಈ ವೇಳೆ ಪ್ರತಿಭಟನಾಕಾರರ ಮತ್ತು ಪೊಲೀಸರ ಮಧ್ಯೆ ವಾಗ್ವಾದ ನಡೆದು ಎರಡು ಕಡೆಗಳಲ್ಲಿ ಪ್ರತಿಭಟನಾ ನಿರತರು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು.
ನಾಗರಿಕ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿನಯ ನಾಯ್ಕ್ ತಲಪಾಡಿ ಮಾತನಾಡಿ ನವಯುಗ್ ಅವೈಜ್ಞಾನಿಕವಾಗಿ ಟೋಲ್ ನಿರ್ಮಿಸಿದ್ದಾರೆ. ತಲಪಾಡಿಯನ್ನು ಇಬ್ಭಾಗ ನಡೆಸುವ ಟೋಲ್ ಇದಾಗಿದೆ. 200 ಮೀ ನವರು ಟೋಲ್ ನೀಡಿ ಹೋಗುವಂತಹ ವ್ಯವಸ್ಥೆ ಆಗಿದೆ. ಶಾಲೆ, ದೇವಸ್ಥಾನ, ಮಸೀದಿ ಚರ್ಚುಗಳಿಗೆ ಹೋಗಬೇಕಾದರೂ ಟೋಲ್ ನೀಡುವ ಸ್ಥಿತಿ ಇದೆ. ಟೋಲಿನ ಉತ್ತರಭಾಗದಲ್ಲಿ ಅನೇಕ ಶೈಕ್ಷಣಿಕ ಸಂಸ್ಥೆಗಳಿದ್ದು, ಅಲ್ಲಿಗೆ ಬರಬೇಕಾದರೆ ಟೋಲ್ ನೀಡಿಯೇ ಬರುವ ಅನಿವಾರ್ಯತೆ ಎದುರಾಗಿದೆ. ರಾಜ್ಯದ ಸಚಿವರಿಗೆ, ಸಂಸದರಿಗೆ ಮನವಿ ನೀಡಿದ್ದೇವೆ. ಅವರು ಸ್ಪಂಧಿಸುವ ಮೂಲಕ ಸಿಟಿ ಬಸ್ಸುಗಳಿಗೆ ಟೋಲ್ ಪಡೆಯದೆ ಉಚಿತವಾಗಿ ಬಿಡಬೇಕು. ಸ್ಥಳೀಯ ಕಮರ್ಷಿಯಲ್ ವಾಹನಗಳಿಗೆ ಶೇ.50 ರಿಯಾಯಿತಿ ನೀಡಬೇಕು. ಬಲವಂತವಾಗಿ ದಬ್ಬಾಳಿಕೆಯ ಮೂಲಕ ಟೋಲ್ ಸಂಗ್ರಹಿಸುವವರು ತಲಪಾಡಿ, ಕೆ.ಸಿ.ರೋಡು, ಕೋಟೆಕಾರು, ಕೊಲ್ಯ, ತೊಕ್ಕೊಟ್ಟು, ಕಲ್ಲಾಪು , ಜೆಪ್ಪಿನಮೊಗರು ಜಂಕ್ಷನ್ನುಗಳಲ್ಲಿ ಸರ್ವಿಸ್ ರಸ್ತೆಯನ್ನು ನಿರ್ಮಿಸಲಿ ಎಂದು ಆಗ್ರಹಿಸಿದ ಅವರು, ಇದು ಸಾಂಕೇತಿಕ ಮುಂದೆ ಉಗ್ರ ಹೋರಾಟ ಎದುರಿಸಬೇಕಾದೀತು ಎಂದರು.
ನಾಗರಿಕ ಹಿತರಕ್ಷಣಾ ಸಮಿತಿಯಲ್ಲಿ ತಲಪಾಡಿ ಪಂಚಾಯತ್ ಅಧ್ಯಕ್ಷ ಸುರೇಶ್ ಆಳ್ವ, , ಉಪಾಧ್ಯಕ್ಷ ಅಬ್ಬಾಸ್ ಉಚ್ಚಿಲ, ಬಂಟರ ಸಂಘ ತಲಪಾಡಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಬಸ್ಸು ಮಾಲಕರ ಸಂಘದ ತಲಪಾಡಿ ವಲಯ ಅಧ್ಯಕ್ಷ ಶರತ್ ಮರೋಳಿ, ಎಸ್.ಎಸ್ ಎಫ್ ತಲಪಾಡಿ ವಲಯದ ಹಕೀಂ, ಅಲ್ತಾಫ್, ನಾಗರಿಕ ಸಮಿತಿ , ಟ್ಯಾಕ್ಸಿ ಚಾಲಕ ಮಾಲಕ ಸಂಘದ ಅಧ್ಯಕ್ಷ ದಿನೇಶ್ ಕುಂಪಲ, ತುಳುನಾಡು ರಕ್ಷಣಾ ವೇದಿಕೆಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಮೊದಲಾದವರು ಉಪಸ್ಥಿತರಿದ್ದರು.
ಪ್ರತಿಭಟನಾಕಾರರನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಹಿಂದೆ ಪ್ರತಿಭಟನೆ ನಡೆಸಿದ್ದವರಿಗೆ ಸುಳ್ಳು ಭರವಸೆಗಳನ್ನು ನೀಡಿ ಅವರ ಪ್ರತಿಭಟನೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿದೆ. ಆದರೆ ಎಲ್ ಡಿವೈಎಫ್ ಸೂಕ್ತ ಬೇಡಿಕೆಗಳನ್ನು ಈಡೇರಿಸುವವರೆಗೆ ಪ್ರತಿಭಟನೆಯನ್ನು ಮುಂದುವರಿಸಲಿದೆ.
ಜೀವನರಾಜ್ ಕುತ್ತಾರ್
ಡಿವೈಎಫ್ ಐ ಕಾರ್ಯದರ್ಶಿ ಉಳ್ಳಾಲ ವಲಯ
ಕೇರಳ-ಕರ್ನಾಟಕ ಮಧ್ಯಭಾಗದಲ್ಲಿ ಇರುವ ಟೋಲ್ ಗೇಟ್ ಎರಡು ಭಾಗದ ಜನರನ್ನು ಕೊಳ್ಳೆ ಹೊಡೆಯುವ ಪ್ರಯತ್ನದಲ್ಲಿದೆ. ಕೇರಳದ ಒಂದು ಕಿ.ಮೀವರೆಗೆ ನಡೆಸಿದ ರಾ.ಹೆ.ಕಾಮಗಾರಿಯೂ ಸರಿಯಾಗಿ ಆಗಿಲ್ಲ. ಆದರೂ ಟೋಲ್ ಸಂಗ್ರಹ ಮಾಡುವ ಮೂಲಕ ಪ್ರಮುಖವಾಗಿ ಕೇರಳದ ಬಡಜನರ ಹೊಟ್ಟೆಗೆ ಹೊಡೆಯುವ ಪ್ರಯತ್ನದಲ್ಲಿ ಕಂಪೆನಿ ನಿರತವಾಗಿದೆ.
ಮಣಿಕಂಠನ್
ಡಿವೈಎಫ್ ಐ ಕಾಸರಗೋಡು ಜಿಲ್ಲಾಧ್ಯಕ್ಷ








