ಉಳ್ಳಾಲ : ದೇರಳಕಟ್ಟೆಯ ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಝುಲೇಖಾ ಯೆನೆಪೋಯ ಗ್ರಂಥಿ ಮತ್ತು ಆಂಕೋಲಾಜಿ ಸಂಸ್ಥೆಯಲ್ಲಿ 7 ವರ್ಷದ ಬಾಲಕಿ ಥೈರಾಯ್ಡ್ ಕ್ಯಾನ್ಸರ್ ನಿವಾರಣೆಗೆ ಸುಪ್ರಮೇಜರ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಲಾಗಿದೆ. ಅತ್ಯಂತ ಸೂಕ್ಷ್ಮತೆಯಿಂದ ಕೂಡಿದ್ದ ಈ ಶಸ್ತ್ರಚಿಕಿತ್ಸೆಯಲ್ಲಿ ಹೊಸತಂತ್ರಜ್ಞಾನ ಉಪಯೋಗಿಸಿ ವೈದ್ಯರ ತಂಡ ಯಶಸ್ವಿಗೊಂಡಿದ್ದು, ಬಾಲಕಿಯೂ ಗುಣಮುಖಳಾಗಿದ್ದಾಳೆ ಎಂದು ಝುಲೇಖಾ ಯೇನೆಪೊಯ ಆಂಕೋಲಜಿ ವಿಭಾಗದ ಮುಖ್ಯಸ್ಥ ಡಾ.ಜಲಾಲುದ್ದೀನ್ ಅಕ್ಬರ್ ಹೇಳಿದರು.


ದೇರಳಕಟ್ಟೆ ಝುಲೇಖಾ ಯೆನೆಪೋಯ ಗ್ರಂಥಿ ಮತ್ತು ಆಂಕೋಲಾಜಿ ಸಂಸ್ಥೆಯಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು
ಕಳೆದ 30 ವರ್ಷಗಳ ವೈದ್ಯಕೀಯ ವೃತ್ತಿಯಲ್ಲಿ ಮೊದಲ ಬಾರಿ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಪೋಷಕರು ಮಗುವಿನ ಕುತ್ತಿಗೆಯಲ್ಲಿನ ಊತವನ್ನು ಗಮನಿಸಿ ಆಸ್ಪತ್ರೆಗೆ ಕರೆತಂದಿದ್ದರು. ಸರಣಿ ಪರೀಕ್ಷೆಗಳ ನಂತರ ಥೈರಾಯ್ಡ್ ಗ್ರಂಥಿಯ ವ್ಯಾಪಿಲ್ಲರಿ ಕಾರ್ಸಿನೋಮ ಇರುವುದು ಧೃಡವಾಗಿದ್ದು ಕುತ್ತಿಗೆಯ ಮಧ್ಯ ಹಾಗೂ ಎರಡೂ ಭಾಗಕ್ಕೆ ಹರಡಿತ್ತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ಅರ್ಬುದ ಶಸ್ತ್ರಚಿಕಿತ್ಸಾ ತಂಡದಲ್ಲಿರುವ ಡಾ.ಎಚ್.ಟಿ.ಅಮರ್ ರಾವ್, ಡಾ.ನೂರ್ಮೊಹಮ್ಮದ್, ಅರಿವಳಿಕೆ ತಜ್ಞೆ ಡಾ.ಪ್ರೀತಿ ಇವರ ಜೊತೆಗೂಡಿ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಿದೆವು ಎಂದರು.
ಪ್ಯಾರಥೈರಾಯ್ಡ್ ಕ್ಯಾನ್ಸರ್ ಎನ್ನುವುದು ಜಟಿಲ ಸಮಸ್ಯೆಯಾಗಿದ್ದು ಕುತ್ತಿಗೆಯಲ್ಲಿ ಹರಡಿದ್ದರಿಂದ ನರಗಳನ್ನು ಉಳಿಸಿಕೊಳ್ಳಬೇಕಿತ್ತು. ಅಲ್ಲದೆ ಧ್ವನಿ ಪೆಟ್ಟಿಗೆಯ ನರ ಉಳಿಸಬೇಕಿದ್ದರಿಂದ ಈ ಶಸ್ತ್ರಚಿಕಿತ್ಸೆ ಸವಾಲಾಗಿತ್ತು. ಭುಜದ ನರ ಉಳಿಸದಿದ್ದರೆ ಕತ್ತು ಅಲ್ಲಾಡಿಸುವ ಸಮಸ್ಯೆ ಬರುವ ಕಾರಣ ಈ ಎಲ್ಲಾ ಸವಾಲನ್ನು ಸೂಕ್ಷ್ಮವಾಗಿ ನಿಭಾಯಿಸಬೇಕಿತ್ತು. ಇವೆಲ್ಲಾ ವಿಷಯಗಳ ಬಗ್ಗೆ ಚರ್ಚಿಸಿದ ಬಳಿಕ ಆಸ್ಪತ್ರೆಯಲ್ಲಿರುವ ಅತ್ಯಾಧುನಿಕ ಯಂತ್ರ ಬಳಸಿ ಸುರಕ್ಷಿತವಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಪ್ರಸ್ತುತ ಮಗು ಶೇ.99 ಗುಣಮುಖವಾಗಿದ್ದು, ರೇಡಿಯೋ ಅಯೋಡಿನ್ ಎನ್ನುವ ಇನ್ನೊಂದು ಚಿಕಿತ್ಸೆ ಬಳಿಕ ಸಂಪೂರ್ಣ ಗುಣವಾಗಿರುವ ಬಗ್ಗೆ ತೀರ್ಮಾನಿಸಲಾಗುತ್ತದೆ. ಈ ಚಿಕಿತ್ಸೆಯ ಬಳಿಕ ಮಗು ಮುಂದಿನ ದಿನಗಳಲ್ಲಿ ಶೇ.100ರಷ್ಟು ಸಾಮಾನ್ಯ ಜೀವನ ನಡೆಸಬಹುದು. ಈ ಚಿಕಿತ್ಸೆಗೆ 2ರಿಂದ 3ಲಕ್ಷ ಖರ್ಚಿದೆ, ಆದರೆ ಮಗುವಿಗೆ ಆಯುಶ್ಮಾನ್ ವ್ಯವಸ್ಥೆಯಡಿ ಉಚಿತ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದರು.
ಡಾ.ನೂರ್ಮಹಮ್ಮದ್ ಮಾತನಾಡಿ, ಥೈರಾಯ್ಡ್ ಕ್ಯಾನ್ಸರ್ ಚಿಕಿತ್ಸೆ ವಯಸ್ಕರಿಗಿಂತಲೂ ಮಕ್ಕಳ ಶಸ್ತ್ರಚಿಕಿತ್ಸೆ ನೀಡುವುದು ಸವಾಲಾಗಿತ್ತು. ಈ ಹಿನ್ನೆಲೆಯಲ್ಲಿ ಮಗುವಿನ ಶಸ್ತ್ರಚಿಕಿತ್ಸೆಗೆ ಒಂಭತ್ತು ಗಂಟೆ ಹಿಡಿದಿದೆ. ಶಸ್ತ್ರಚಿಕಿತ್ಸೆ ನಡೆಸಿದ ಮರುದಿನವೇ ಮಗು ಆರಾಮವಾಗಿತ್ತು. ಸರಿಯಾದ ಸಮಯದಲ್ಲೇ ಮಗುವನ್ನು ಆಸ್ಪತ್ರೆಗೆ ತಂದಿರುವುದರಿಂದ ಚಿಕಿತ್ಸೆ ನೀಡಲು ಸಾಧ್ಯವಾಗಿದೆ ಎಂದು ಹೇಳಿದರು.
ಆಸ್ಪತ್ರೆಯ ಅಧೀಕ್ಷಕ ಹಬೀಬ್ ರಹಮಾನ್ ಮಾತನಾಡಿ, ಥೈರಾಯ್ಡ್ ಕ್ಯಾನ್ಸರ್ ಕಾಯಿಲೆಯನ್ನು ನಿರ್ಧರಿಸಲು ವಿವಿಧ ವಿಭಾಗ, ಶಸ್ತ್ರಚಿಕಿತ್ಸಾ ತಂಡದ ಪರಿಶ್ರಮದಿಂದ ಸಾಧ್ಯವಾಗಿದೆ. ಆಸ್ಪತ್ರೆಯಲ್ಲಿ ನುರಿತ ವೈದ್ಯರು, ಅತ್ಯಾಧುನಿಕ ಮೂಲ ಸೌಕರ್ಯಗಳಿವೆ. ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳನ್ನು ನಿರಂತರ ನಡೆಸಲಾಗುತ್ತಿದೆ ಎಂದರು.
ಈ ಸಂದರ್ಭ ಡಾ.ಎಚ್.ಟಿ.ಅಮರ್ ರಾವ್, ಸಹಾಯಕ ವೈದ್ಯಕೀಯ ಅಧೀಕ್ಷಕ ಡಾ.ನಾಗರಾಜ್, ಮಕ್ಕಳ ವಿಭಾಗದ ಡಾ.ಅನಿತಾ ಪ್ರಭು, ಶುಶ್ರೂಷ ವಿಭಾಗದ ಅಧೀಕ್ಷಕಿ ಸತ್ಯವತಿ ದೇವಿ, ಸಹಾಯಕ ವೈದ್ಯಕೀಯ ನಿರ್ದೇಶಕ ಡಾ.ಬೋನಿ ಪೌಲ್, ಮೊಹಮ್ಮದ್ ಸಾಬಿತ್ ಉಪಸ್ಥಿತರಿದ್ದರು.
`ಆಯುಷ್ಮಾನ್ ಯೋಜನೆ ಜಾರಿಯಲ್ಲಿ ಪರಿಷ್ಕರಣೆ ಅಗತ್ಯ’
ಆಯುಷ್ಮಾನ್ ಯೋಜನೆ ಜ್ಯಾರಿಯಲ್ಲಿದ್ದರೂ ಆಯಾಯ ಜಿಲ್ಲೆಗಳ ಸರಕಾರಿ ಆಸ್ಪತ್ರೆಗಳ ಸೂಚನಾ ಪತ್ರವನ್ನು ತಾರದೇ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವಂತಿಲ್ಲ. ಇದರಿಂದ ಯೆನೆಪೋಯ ಆಸ್ಪತ್ರೆಗೆ ದೂರದ ಜಿಲ್ಲೆಗಳಿಂದ ಬರುವ ಮಂದಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಶಿವಮೊಗ್ಗ, ದಾವಣಗೆರೆಯಿಂದ ಬರುವ ಮಂದಿ ಮಾಹಿತಿಯ ಕೊರತೆಯಿಂದ ಸೂಚನ ಪತ್ರಗಳನ್ನು ತರದೇ ಮತ್ತೆ ಆಯುಷ್ಮಾನ್ ಯೋಜನೆ ಬೇಕಾದಲ್ಲಿ ಅಲ್ಲಿನ ಜಿಲ್ಲಾ ಆಸ್ಪತ್ರೆಗೆ ತೆರಳಬೇಕಾಗಿರುವುದರಿಂದ ಬಹಳಷ್ಟು ತೊಂದರೆಗಳಾಗುತ್ತಿವೆ. ಕೇಂದ್ರದ ಆರೋಗ್ಯ ಸಚಿವಾಲಯ ಬಿಪಿಎಲ್ ಕಾರ್ಡದಾರರ ಅನುಕೂಲಕ್ಕಾಗಿ ಆಯುಷ್ಮಾನ್ ಫಲಾನುಭವಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಯಲು ಸರಳೀಕೃತ ನೀತಿ ಜಾರಿಗೊಳಿಸಬೇಕಿದೆ.
ಡಾ| ನಾಗರಾಜ್
ಸಹಾಯಕ ವೈದ್ಯಕೀಯ ಅಧೀಕ್ಷಕ
ಯೆನೆಪೋಯ ಆಸ್ಪತ್ರೆ ದೇರಳಕಟ್ಟೆ

ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಮೋರ್ಛಾ ನೇತಾರೆ
ಗುಣಮುಖರಾಗಿಸಿದ ವೈದ್ಯ ಡಾ| ಜಲಾಲುದ್ದೀನ್ ಅಕ್ಬರ್
ತನ್ನ 16 ನೇ ವಯಸ್ಸಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾಗುವ ಮುನ್ನ ಗಂಟಲು ಭಾಗದಲ್ಲಿ ಊತ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವೈದ್ಯರ ಬಳಿ ಆರೋಗ್ಯ ಪರೀಕ್ಷೆಗೆ ತೆರಳಿದ ರಾಜ್ಯ ಅಲ್ಪಸಂಖ್ಯಾತ ಮೋರ್ಛಾ ರಾಜ್ಯ ಕಾರ್ಯದರ್ಶಿ ಜೆಸ್ಸೆಲ್ ಡಿಸೋಜಾ ಅವರಲ್ಲಿ ಥೈರಾಯ್ಡ್ ಕ್ಯಾನ್ಸರ್ ಪತ್ತೆಯಾಗಿತ್ತು. ಆದರೆ ಕುಟುಂಬಿಕರಲ್ಲಿ ವಿಚಲಿತರಾಗದೇ, ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುವಂತೆ ಪ್ರೋತ್ಸಾಹಿಸಿದ ಡಾ. ಜಲಾಲುದ್ದೀನ್ ಅಕ್ಬರ್ ಅವರು ಥೈರಾಯ್ಡ್ ಶಸ್ತ್ರಚಿಕಿತ್ಸೆ ನಡೆಸಿ ಸಂಪೂರ್ಣ ಗುಣಮುಖರಾಗಿಸಿದ್ದರು. ಹಾಗಾಗಿ ಕ್ಯಾನ್ಸರ್ ಬಂತೆಂದು ಭಯಭೀತರಾಗದಿರಿ ,2-3 ಸ್ಟೇಜ್ ಗಳಲ್ಲಿ ಗುರುತಿಸಿ ಗುಣಮುಖರಾಗಿಸಿದ್ದಾರೆ. ತನ್ನ ಬಾಳಿಗೆ ಮರುಜೀವನ ಕೊಟ್ಟಂತಹ ವೈದ್ಯರಿಗೆ ಸದಾ ಚಿರಋಣಿ ಎನ್ನುತ್ತಾರೆ ಜಸ್ಸೆಲ್ ಡಿಸೋಜಾ.
