ತೊಕ್ಕೊಟ್ಟು: ಟ್ಯಾಂಕರ್ ಲಾರಿ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮಹಿಳೆಯೊಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಉಳ್ಳಾಲ ಪ್ರೆಸ್ ಕ್ಲಬ್ ಎದುರಿನ ತೊಕ್ಕೊಟ್ಟು – ಮಂಗಳೂರು ವಿಶ್ವವಿದ್ಯಾನಿಲಯ ರಸ್ತೆಯಲ್ಲಿ ಇಂದು ಸಂಜೆ ಸಂಭವಿಸಿದೆ. ರಸ್ತೆ ಅವ್ಯವಸ್ಥೆಯಿಂದ ಅಪಘಾತ ಸಂಭವಿಸಿದ ಹಿನ್ನೆಲೆಯಲ್ಲಿ ಉದ್ರಿಕ್ತ ಗುಂಪು ರಸ್ತೆಗೆ ಅಡ್ಡವಾಗಿ ಕಲ್ಲುಗಳನ್ನಿಟ್ಟು ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಒಂದು ಗಂಟೆಯ ಕಾಲ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ.
ದೇರಳಕಟ್ಟೆ ಯೆನೆಪೋಯ ಆಸ್ಪತ್ರೆ ಸಿಬ್ಬಂದಿ ರಶೀದ್ ಎಂಬವರ ಪತ್ನಿ ರೆಹಮತ್ (47) ಮೃತರು. ದೇರಳಕಟ್ಟೆ ಕಡೆಯಿಂದ ಸ್ಕೂಟರ್ ನಲ್ಲಿ ತೊಕ್ಕೊಟ್ಟು ಕಡೆಗೆ ದಂಪತಿ ತೆರಳುತ್ತಿದ್ದ ಸಂದರ್ಭ ರಸ್ತೆ ಹೊಂಡ ತಪ್ಪಿಸುವ ಹಂತದಲ್ಲಿ ಸ್ಕೂಟರ್ ಆಯತಪ್ಪಿ ರಸ್ತೆಗೆ ಉರುಳಿಬಿದ್ದಿದೆ. ಈ ಸಂದರ್ಭ ಹಿಂಬದಿಯಲ್ಲಿದ್ದ ಟ್ಯಾಂಕರ್ ಲಾರಿ ರಸ್ತೆಗೆ ಬಿದ್ದಿದ್ದ ರೆಹಮತ್ ಅವರ ಮೇಲೆ ಚಲಿಸಿದೆ. ಪರಿಣಾಮವಾಗಿ ರೆಹಮತ್ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ರಸ್ತೆ ಅವ್ಯವಸ್ಥೆಯಿಂದಾಗಿ ಘಟನೆ ನಡೆದಿರುವುದಾಗಿ ಆರೋಪಿಸಿದ ಉದ್ರಿಕ್ತ ಗುಂಪು ರಸ್ತೆಗೆ ಅಡ್ಡವಾಗಿ ಕಲ್ಲುಗಳನ್ನು ಇಟ್ಟು ಪ್ರತಿಭಟನೆ ನಡೆಸಿದೆ. ಇದರಿಂದಾಗಿ ತೊಕ್ಕೊಟ್ಟು ಕೊಣಾಜೆ ರಸ್ತೆ ಸಂಪೂರ್ಣ ಬಂದ್ ಆಗಿದ್ದು, ವಾಹನಗಳೆಲ್ಲವೂ ಸರತಿ ಸಾಲುಗಳಲ್ಲಿ ನಿಂತರೆ, ಹಲವು ವಾಹನಗಳು ಬೀರಿ ಮಾರ್ಗವಾಗಿ ಸಂಚರಿಸುತ್ತಿದೆ. ಉದ್ರಿಕ್ತ ಗುಂಪು ಹಾಗೂ ಉಳ್ಳಾಲ ಪೊಲೀಸರ ನಡುವೆ ತೀವ್ರ ವಾಗ್ದಾಳಿ ನಡೆದಿದೆ.