

ಉಳ್ಳಾಲ: ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಭಿವೃದ್ಧಿಯ ನಿಟ್ಟಿನಲ್ಲಿ ಮುಂದಿನ 30 ವರ್ಷಗಳ ದೂರದೃಷ್ಟಿಯನ್ನಿಟ್ಟುಕೊಂಡು ನಿರಂತರ ವಿದ್ಯುತ್ ನೀಡುವ ಯೋಜನೆ ರೂಪಿಸುತ್ತಿದ್ದು, ಇತರ ಜಿಲ್ಲೆ, ರಾಜ್ಯದವರು ಯಾವುದೇ ಭಾಗದಲ್ಲೂ ಬಂಡವಾಳ ಹಾಕುವ ಸಂದರ್ಭ ವಿದ್ಯುತ್ನ ಸಮಸ್ಯೆ ಈ ಪ್ರದೇಶದಲ್ಲಿ ಉದ್ಭವಿಸದ ರೀತಿಯಲ್ಲಿ ಅನುದಾನವನ್ನು ತರಲಾಗಿದೆ ಎಂದು ವಿಧಾನಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು.
ಮೆಸ್ಕಾಂ ವತಿಯಿಂದ ಸುಮಾರು 9 ಕೋಟಿ ರೂ. ವೆಚ್ಚದಲ್ಲಿ ಕೋಟೆಕಾರ್ ಗ್ರಾಮದಲ್ಲಿ ನಿರ್ಮಾಣಗೊಂಡಿರುವ 33/11ಕೆವಿ ಸಾಮರ್ಥ್ಯದ ಉಪಕೇಂದ್ರ ಮಂಗಳವಾರ ಪರೀಕ್ಷಾರ್ಥ ಚಾಲನೆ ನೀಡಿ ಮಾತನಾಡಿದರು.
ಮುಂದಕ್ಕೆ ಉಳ್ಳಾಲ ನಗರ, ಕೋಟೆಕಾರ್, ಕೊಣಾಜೆ, ಬೆಲ್ಮ, ಬೋಳಿಯಾರ್, ಕಿನ್ಯದಲ್ಲಿ ಸೆಕ್ಷನ್ ಕಚೇರಿ ನಿರ್ಮಾಣದ ಜೊತೆಗೆ ವಿದ್ಯುತ್ ಸಾಮರ್ಥ್ಯ ಹೆಚ್ಚಿಸುವ ಕಾರ್ಯ ಆಗಲಿದೆ. ಇದರಿಂದಾಗಿ ಉಳ್ಳಾಲ ತಾಲೂಕಿನಾದ್ಯಂತ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ಈ ಯೋಜನೆಯಿಂದ ಪ್ರಸ್ತುತ ಕಿನ್ಯಾ, ತಲಪಾಡಿ ಮತ್ತು ಮಾಡೂರು ಪ್ರದೇಶಗಳಿಗೆ 110ಕೆವಿ ವಿದ್ಯುತ್ ಕೊಣಾಜೆ ಉಪಕೇಂದ್ರದಿAದ ಮತ್ತು ಕೋಟೆಕಾರ್, ಸೋಮೇಶ್ವರ ಪುದೇಶಗಳಿಗೆ 33 ಕೆವಿ ವಿದ್ಯುತ್ ತೊಕೊಟ್ಟು ಉಪಕೇಂದ್ರದಿAದ ಸರಬರಾಜು ಮಾಡಲಾಗುತ್ತಿದೆ. ಉಪಕೇಂದ್ರಗಳ ಮತ್ತು ವಿದ್ಯುತ್ ಮಾರ್ಗಗಳ ಓವರ್ ಲೋಡ್ ನಿಂದಾಗಿ ಕೆಲವು ಸಂದರ್ಭಗಳಲ್ಲಿ ವಿದ್ಯುತ್ ಕಡಿತ ಉಂಟಾಗುತ್ತಿದ್ದು ಕೋಟೆಕಾರ್ ಉಪ ಕೇಂದ್ರ ಕಾರ್ಯಾರಂಭಗೊAಡರೆ ಕಿನ್ಯಾ, ತಲಪಾಡಿ, ಕೋಟೆಕಾರ್ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ತಿಳಿಸಿದರು.
ಮಂಗಳೂರು ಮೆಸ್ಕಾಂ ಕಚೇರಿಯ ವ್ಯವಸ್ಥಾಪಕ ನಿರ್ದೇಶಕ ಜಯಕುಮಾರ್ ಆರ್., ತಾಂತ್ರಿಕ ನಿರ್ದೇಶಕ ಕೆ.ಎಂ.ಮಹಾದೇವ ಸ್ವಾಮಿ, ಮೆಸ್ಕಾಂ ಆರ್ಥಿಕ ಅಧಿಕಾರಿ ಹರಿಶ್ಚಂದ್ರ ಬೋರ್ಕರ್, ಮುಖ್ಯ ಅಭಿಯಂತರ ರವಿಕಾಂತ್ ಕಾಮತ್, ಆಡಳಿತ ಕಚೇರಿಯ ಪ್ರಧಾನ ವ್ಯವಸ್ಥಾಪಕ ಉಮೇಶ್ ಗಟ್ಟಿ, ಅಧೀಕ್ಷಕ ಅಭಿಯಂತರ ಕೃಷ್ಣರಾಜ ಕೆ, ಕಾರ್ಯನಿರ್ವಾಹಕ ಅಭಿಯಂತರ ಲೋಹಿತ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ದಯಾನಂದ್, ಸಹಾಯಕ ಅಭಿಯಂತರರಾದ ಮಾರಪ್ಪ, ನಿತೇಶ್ ಹೊಸಗದ್ದೆ, ರಾಜೇಶ್ ಶೆಟ್ಟಿ, ವಿನೋದ್, ಮಿಥುನ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್, ಕೋಟೆಕಾರ್ ಪ.ಪಂ. ಅಧ್ಯಕ್ಷ ದಿವ್ಯಾ ಎಸ್.ಶೆಟ್ಟಿ, ಸ್ಥಾಯಿ ಸಮಿತಿಯ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ಸೋಮೇಶ್ವರ ಪುರಸಭೆಯ ಉಪಾಧ್ಯಕ್ಷೆ ರವಿಶಂಕರ್ ಸೋಮೇಶ್ವರ ಮತ್ತಿತರರು ಉಪಸ್ಥಿತರಿದ್ದರು.