ಉಳ್ಳಾಲ : ಇಸ್ಲಾಮ್ ಧರ್ಮವು ಒಂದು ಸಂಪೂರ್ಣ ಬದುಕು ಬಾಳುವ ಶಿಸ್ತುಬದ್ಧ ವ್ಯವಸ್ಥೆಯಾಗಿದ್ದು, ಅದರ ತತ್ವ ಹಾಗೂ ಮಾರ್ಗದರ್ಶನಗಳು ಮಾನವ ಜೀವನದ ಪ್ರತಿಯೊಂದು ಹಂತದಲ್ಲಿಯೂ ಮಾರ್ಗದರ್ಶಕವಾಗಿ ಕಾರ್ಯನಿರ್ವಹಿಸುತ್ತವೆ. ಆದ್ದರಿಂದ, ಇಸ್ಲಾಮಿನ ತತ್ತ್ವಗಳನ್ನು ಅರಿತುಕೊಳ್ಳುವುದು, ಅಧ್ಯಯನ ಮಾಡುವುದು ಮತ್ತು ಅವುಗಳನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದು ಪ್ರತಿಯೊಬ್ಬ ಮುಸ್ಲಿಮನ ಕರ್ತವ್ಯವಾಗಿದೆ ಎಂದು ಡಾ.ಹುಸೈನ್ ಸಖಾಫಿ ಚುಳ್ಳಿಕೋಡು ಹೇಳಿದರು.
ಅವರು ಉಳ್ಳಾಲ ದರ್ಗಾ ದ 22 ಪಂಚವಾರ್ಷಿಕ ಉರೂಸ್ ಪ್ರಯುಕ್ತ ಮಂಗಳವಾರ ದರ್ಗಾ ವಠಾರದಲ್ಲಿ ನಡೆದ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಪ್ರವಾದಿ ಮುಹಮ್ಮದ್ (ಸ.ಅ.) ಅವರ ಜೀವನ ಮತ್ತು ಸಂದೇಶಗಳು ಎಲ್ಲ ಮನುಕುಲಕ್ಕೂ ಶ್ರೇಷ್ಠ ಮಾದರಿಯಾಗಿದೆ. ಅವರು ಸಾರಿದ ಹಾದಿಯಲ್ಲಿ ನಡೆಯುವುದು ಶ್ರದ್ಧೆಯಿಂದ ಅನುಸರಿಸಬೇಕಾದ ದಾರಿಯಾಗಿದೆ. ಅವರ ನುಡಿಮುತ್ತುಗಳು ಧರ್ಮನಿಷ್ಠೆಯ ಜೊತೆಗೆ ನೈತಿಕತೆಯ, ಸಹಾನುಭೂತಿಯ ಹಾಗೂ ಸಾಮಾಜಿಕ ಜವಾಬ್ದಾರಿಯ ಪ್ರಜ್ಞೆಯನ್ನು ಬೆಳೆಸುತ್ತವೆ. ಧಾರ್ಮಿಕ ಚಟುವಟಿಕೆಗಳನ್ನು ಏಕತೆಯಿಂದ ಮತ್ತು ಸಹಭಾಗಿತ್ವದಿಂದ ಆಯೋಜಿಸುವುದು, ಸಮಾಜದಲ್ಲಿ ಧರ್ಮದ ಮೌಲ್ಯಗಳನ್ನು ಪ್ರತಿಷ್ಠಾಪಿಸುವ ಮಾರ್ಗವಾಗಿದೆ. ಇಂತಹ ಕಾರ್ಯಕ್ರಮಗಳು ಸಾಮೂಹಿಕ ಜವಾಬ್ದಾರಿಯ ಬಾಳನ್ನು ರೂಪಿಸಲು, ಸಂಸ್ಕೃತಿ ಹಾಗೂ ಆಧ್ಯಾತ್ಮಿಕತೆಯನ್ನು ಸದೃಢಗೊಳಿಸಲು ನೆರವಾಗುತ್ತವೆ. ಇವೆಲ್ಲದರ ಮಧ್ಯೆ, ಶಿಕ್ಷಣಕ್ಕೆ ನೀಡಬೇಕಾದ ಆದ್ಯತೆ ಅತ್ಯಂತ ಮಹತ್ವದ್ದಾಗಿದೆ. ಇಸ್ಲಾಮ್ ಶಿಕ್ಷಣವನ್ನು ಒಂದು ಪವಿತ್ರ ಕರ್ತವ್ಯವೆಂದು ಪರಿಗಣಿಸುತ್ತದೆ. ಪ್ರಥಮ ವೈಖರಿಯಾಗಿ ಇಳಿದ ‘ಇಕ್ರಾ’ ಎಂಬ ಪವಿತ್ರ ಪಠ್ಯವೇ ಓದು ಮತ್ತು ಜ್ಞಾನಕ್ಕೆ ನೀಡಲ್ಪಟ್ಟ ಮಹತ್ವವನ್ನು ತೋರಿಸುತ್ತದೆ. ಸಮರ್ಥ ಸಮಾಜ ನಿರ್ಮಾಣಕ್ಕೆ, ಯುವ ಪೀಳಿಗೆಯ ಭವಿಷ್ಯ ರೂಪಿಸಲು, ಹಾಗೂ ಜಗತ್ತಿನಲ್ಲಿ ಶಾಂತಿ ಮತ್ತು ಪ್ರಗತಿಯ ಸ್ಥಾಪನೆಗೆ ಶಿಕ್ಷಣವೇ ಮೂಲಶಕ್ತಿಯಾಗಿದೆ.
ಅಂತೆಯೇ, ಇಸ್ಲಾಮಿನ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಜೊತೆಗೆ ಶಿಕ್ಷಣದ ಬೆಳಕನ್ನು ಸಮಸ್ತ ಸಮುದಾಯಕ್ಕೂ ತಲುಪಿಸುವ ದಿಸೆಯಲ್ಲಿ ನಾವು ಎಲ್ಲರೂ ಒಗ್ಗಟ್ಟಿನಿಂದ ಮುಂದಡೆಯುವುದು ಅತ್ಯಗತ್ಯವಾಗಿದೆ ಎಂದರು.
ಯು.ಕೆ. ಮುಹಮ್ಮದ್ ಸ ಅದಿ ವಳವೂರು ಧಾರ್ಮಿಕ ಪ್ರವಚನ ನೀಡಿದರು. ಸಯ್ಯಿದ್ ಜಲಾಲುದ್ದೀನ್ ತಂಙಳ್ ಅಳೇಕಲ ದುಆ ನೆರವೇರಿಸಿದರು. ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದರ್ಗಾ ಮಾಜಿ ಅಧ್ಯಕ್ಷ ಕಣಚೂರು ಮೋನು,ಬೊಟ್ಟು ಮಸೀದಿ ಅಧ್ಯಕ್ಷ ಮುಹ್ ಯಿದ್ದೀನ್, ಇಮಾಮ್ ನೌಫಲ್ ಮದನಿ, ದಾರಂದ ಬಾಗಿಲು ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಹಮೀದ್, ಇಮಾಮ್ ಜಾಬಿರ್ ಫಾಳಿಲಿ , ಮಿಲ್ಲತ್ ನಗರ ಮಸೀದಿ ಅಧ್ಯಕ್ಷ ಇಬ್ರಾಹೀಮ್ ಖಲೀಲ್, ಇಮಾಮ್ ಅಬೂಬಕ್ಕರ್ ಸಿದ್ದೀಕ್ ನಿಝಾಮಿ, ಕಣಚೂರು ಮೆಡಿಕಲ್ ಕಾಲೇಜು ನಿರ್ದೇಶಕ ಅಬ್ದುಲ್ ರಹ್ಮಾನ್, ದರ್ಗಾ ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಕಾರ್ಯದರ್ಶಿ ಮುಸ್ತಫಾ ಮದನಿಗರ, ಕೋಶಾಧಿಕಾರಿ ನಾಝೀಮ್ ಮುಕಚೇರಿ, ಸದಸ್ಯ ಝೈನುದ್ದೀನ್ ಮೇಲಂಗಡಿ, ಝಿಯಾದ್ ತಂಙಳ್, ಇಮ್ತಿಯಾಝ್,ಮೊಯ್ದಿನ್ ಪಟ್ಲ, ಅಬೂಬಕ್ಕರ್ ಹೈದರಲಿ ನಗರ,ಅರೆಬಿಕ್ ಕಾಲೇಜು ಪ್ರೊಫೆಸರ್ ಇಬ್ರಾಹಿಂ ಅಹ್ಸನಿ, ಆಝಾದ್ ಇಸ್ಮಾಯಿಲ್ ,ಕೇಂದ್ರ ಜುಮ್ಮಾ ಮಸೀದಿ ಖತೀಬ್ ಹಾಫಿಳ್ ಅಬ್ದುಲ್ ಮಜೀದ್ ಫಾಳಿಲಿ ಕಾಮಿಲ್ ಸಖಾಫಿ ಮತ್ತಿತರರು ಉಪಸ್ಥಿತರಿದ್ದರು.
ದರ್ಗಾ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಸ್ವಾಗತಿಸಿದರು.