
ಉಳ್ಳಾಲ : ದರ್ಗಾಗಳು ಇಸ್ಲಾಮ್ ಧರ್ಮದ ಆಧ್ಯಾತ್ಮಿಕ ಪರಂಪರೆಯಲ್ಲಿ ಮಹತ್ವಪೂರ್ಣ ಸ್ಥಾನವನ್ನು ಹೊಂದಿವೆ. ಇವು ಅಲ್ಲಾಹನ ಅನುಗ್ರಹ ಹಾಗೂ ಕೃಪೆಯ ಕೇಂದ್ರಗಳಾಗಿದ್ದು, ಶ್ರದ್ಧಾಭಕ್ತಿಯಿಂದ ದರ್ಗಾ ಝಿಯಾರತ್ ಮಾಡುವವರಿಗೆ ದೈವಿಕ ಅನುಭವ ಹಾಗೂ ಆಧ್ಯಾತ್ಮಿಕ ಶಾಂತಿ ಲಭಿಸುತ್ತವೆ ಎನ್ನುವುದು ಸಹಸ್ರಾರು ಭಕ್ತರ ನಂಬಿಕೆಯಾಗಿದೆ. ಈ ಪವಿತ್ರ ಕ್ಷೇತ್ರಗಳು ಲೋಕದ ವಿವಿಧ ಭಾಗಗಳಲ್ಲಿ ವಿಸ್ತಾರಗೊಂಡಿದ್ದು, ಪ್ರತಿ ದರ್ಗಾ ತನ್ನದೇ ಆದ ಐತಿಹಾಸಿಕತೆ, ಆಧ್ಯಾತ್ಮಿಕ ತಾತ್ಪರ್ಯ ಹಾಗೂ ಪಾವಿತ್ರ್ಯತೆಯನ್ನು ಹೊಂದಿರುವುದು ಗಮನಾರ್ಹವಾಗಿದೆ ಎಂದು ಅಹ್ಮದ್ ಸಖಾಫಿ ಕಾಶಿಪಟ್ನ ಹೇಳಿದರು.
ಅವರು ಉಳ್ಳಾಲ ದರ್ಗಾ ದ 22 ಪಂಚವಾರ್ಷಿಕ ಉರೂಸ್ ಪ್ರಯುಕ್ತ ಸೋಮವಾರ ದರ್ಗಾ ವಠಾರದಲ್ಲಿ ನಡೆದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ದರ್ಗಾಕ್ಕೆ ವಿವಿಧ ಕಡೆಗಳಿಂದ ಭಕ್ತಾದಿಗಳು ಬಂದು ಝಿಯಾರತ್ ಮಾಡುತ್ತಾರೆ. ಇದು ಭಕ್ತಾದಿಗಳು ದರ್ಗಾಕ್ಕೆ ಕೊಡುವ ಗೌರವ ಆಗಿದೆ ಎಂದು ಹೇಳಿದರು.
ಪ್ರಸಿದ್ಧ ದರ್ಗಾಗಳ ಪೈಕಿ ಉಳ್ಳಾಲ ದರ್ಗಾ ಒಂದು ಪ್ರಮುಖ ಕ್ಷೇತ್ರವಾಗಿದ್ದು, ವರ್ಷಪೂರ್ತಿ ಸಾವಿರಾರು ಭಕ್ತರು ಇಲ್ಲಿ ಆಗಮಿಸುತ್ತಾರೆ. ದಕ್ಷಿಣ ಭಾರತದಲ್ಲಿ ಇದ್ದರೂ ಈ ದರ್ಗಾ ಆಕರ್ಷಣೆ ಜಾಗತಿಕ ಮಟ್ಟದಾಗಿದ್ದು, ಭಕ್ತಾದಿಗಳು ವಿವಿಧ ರಾಜ್ಯಗಳು ಮತ್ತು ರಾಷ್ಟ್ರಗಳಿಂದ ಆಗಮಿಸಿ ಝಿಯಾರತ್ ಮಾಡುತ್ತಾರೆ. ಇದು ಆ ಸ್ಥಳದ ಪಾವಿತ್ರ್ಯತೆಗೆ, ಆಧ್ಯಾತ್ಮಿಕ ಮಹತ್ವಕ್ಕೆ ಭಕ್ತರು ನೀಡುವ ಗೌರವ ಮತ್ತು ಶ್ರದ್ಧೆಯ ಸಾಕ್ಷಿಯಾಗಿದೆ. ಇದಲ್ಲದೆ, ಇಸ್ಲಾಮ್ ಧರ್ಮದ ಪ್ರಾರಂಭಿಕ ಯುಗದಲ್ಲಿ, ಪ್ರವಾದಿ ಮುಹಮ್ಮದ್ (ಸ.ಅ.) ಅವರ ಆಶಯದಂತೆ, ಧರ್ಮದ ತತ್ವಗಳನ್ನು ಹರಡುವ ಸಲುವಾಗಿ ಹಲವು ಪಂಡಿತರು, ಸಂತರು ಮತ್ತು ಆಲಿಮರು ಭಾರತಕ್ಕೆ ಆಗಮಿಸಿದರು. ಅವರು ತಮ್ಮ ಜೀವನವನ್ನು ಇಸ್ಲಾಮ್ ಧರ್ಮದ ಮೌಲ್ಯಗಳನ್ನು ಸಾರುವ ಕಾರ್ಯಕ್ಕೆ ಅರ್ಪಿಸಿದರು. ಇವರು ತಂಗಿದ್ದ ಸ್ಥಳಗಳಲ್ಲಿ ಕೆಲವೊಂದು ಇಂದು ದರ್ಗಾಗಳಾಗಿ ಪರಿವರ್ತನೆಯಾಗಿದ್ದು, ಸಮಾಜದ ಆಧ್ಯಾತ್ಮಿಕ ಬೆಳವಣಿಗೆಗೆ ಪೂರಕವಾಗಿವೆ. ಈ ದರ್ಗಾಗಳು ಇವತ್ತು ಕೇವಲ ಧಾರ್ಮಿಕ ಕೇಂದ್ರಗಳಷ್ಟೇ ಅಲ್ಲದೆ, ಸಹಿಷ್ಣುತೆ, ಸಹಬಾಳ್ವೆ, ಶಾಂತಿ ಮತ್ತು ಭಕ್ತಿಯ ನಿದರ್ಶನಗಳಾಗಿವೆ. ಇವುಗಳ ಬಗೆಗೆ ಧರ್ಮದ ಭಾಗವಾಗಿ ನಂಬಿಕೆ, ಗೌರವ ಹಾಗೂ ಆಳವಾದ ಶ್ರದ್ಧೆ ಇರಬೇಕು. ಈ ನಂಬಿಕೆ ಆಧ್ಯಾತ್ಮಿಕ ಬಾಳನ್ನು ಬಲಪಡಿಸಲು ಮತ್ತು ಸಮಾಜದಲ್ಲಿ ಪರಸ್ಪರ ಸೌಹಾರ್ದತೆಯನ್ನು ಬೆಳೆಸಲು ಸಹಾಯಕವಾಗುತ್ತದೆ. ಇದರಿಂದ, ದರ್ಗಾಗಳ ಮಹತ್ವವನ್ನು ಅರಿತು, ಅವುಗಳ ಪಾವಿತ್ರ್ಯತೆಯನ್ನು ಉಳಿಸಿಕೊಳ್ಳುವುದು ಹಾಗೂ ಶ್ರದ್ಧೆಯಿಂದ ಝಿಯಾರತ್ ಮಾಡುವ ಸಂಸ್ಕೃತಿಯನ್ನು ಮುಂದುವರಿಸುವುದು ಇವತ್ತಿನ ನಾವೀನ್ಯತೆಯ ಸಮಾಜದ ಜವಾಬ್ದಾರಿ ಕೂಡಾ ಆಗಿದೆ ಎಂದರು.
ಅಲವಿ ಸಖಾಫಿ ಕೊಳತ್ತೂರ್ ಧಾರ್ಮಿಕ ಪ್ರವಚನ ನೀಡಿದರು. ಪೆರ್ನೆ ಅಬ್ಬಾಸ್ ಸಅದಿ ಉಸ್ತಾದ್ ದುಆ ನೆರವೇರಿಸಿದರು. ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕುಂಪಲ ಜುಮಾ ಮಸೀದಿ ಅಧ್ಯಕ್ಷ ಇಕ್ಬಾಲ್ ಹಾಜಿ, ಖತೀಬ್ ಅಬ್ದುಲ್ ರಹ್ಮಾನ್ ಅಹ್ಸನಿ,ಪಟ್ಲ ತಖ್ವಾ ಜುಮಾ ಮಸೀದಿ ಅಧ್ಯಕ್ಷ ಪಿ.ಎಚ್.ಮಹ್ಮೂದ್ ಹಾಜಿ, ಉಳ್ಳಾಲ ಬೈಲ್ ಮಸೀದಿ ಅಧ್ಯಕ್ಷ ಅಮೀರ್ ಅಲಿ, ಕಾರ್ಯದರ್ಶಿ ಬಶೀರ್, ಪಿಲಾರ್ ಮಸೀದಿ ಖತೀಬ್ ಜಬ್ಬಾರ್ ಸಖಾಫಿ,ದರ್ಗಾ ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಕಾರ್ಯದರ್ಶಿ ಮುಸ್ತಫಾ ಮದನಿಗರ, ಕೋಶಾಧಿಕಾರಿ ನಾಝೀಮ್ ಮುಕಚೇರಿ, ಚಾರಿಟೇಬಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್ ಪಿಲಾರ್,ಸದಸ್ಯ ಝೈನುದ್ದೀನ್ ಮೇಲಂಗಡಿ, ಮೊಯ್ದಿನ್ ಪಟ್ಲ, ಅಬೂಬಕ್ಕರ್ ಹೈದರಲಿ ನಗರ,ಅರೆಬಿಕ್ ಕಾಲೇಜು ಪ್ರೊಫೆಸರ್ ಇಬ್ರಾಹಿಂ ಅಹ್ಸನಿ, ಆಝಾದ್ ಇಸ್ಮಾಯಿಲ್ ಮತ್ತಿತರರು ಉಪಸ್ಥಿತರಿದ್ದರು.
ದರ್ಗಾ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಸ್ವಾಗತಿಸಿದರು.