ತೊಕ್ಕೊಟ್ಟು: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಔಷಧಿ ಖರೀದಿಯಲ್ಲಿ 1,463 ಕೋಟಿ ರೂ ಔಷಧ ಹಗರಣದಲ್ಲಿ ಭಾಗಿಯಾಗಿರುವ ಆರೋಗ್ಯ ಸಚಿವ ಯು.ಟಿ.ಖಾದರ್ ಹಗರಣಗಳಲ್ಲಿ ನಂ.1 ಅನಿಸಿಕೊಂಡಿದ್ದು, ಶೀಘ್ರವೇ ರಾಜೀನಾಮೆಗೆ ಒತ್ತಾಯಿಸಿ ಮೇ.23 ರಂದು ಬಿಜೆಪಿ ಮಂಗಳೂರು ವಿಧಾನಸಭೆಯ ವತಿಯಿಂದ ತೊಕ್ಕೊಟ್ಟು ಬಸ್ ಇಲ್ದಾಣದಲ್ಲಿ ಸಂಜೆ 4.00 ಗಂಟೆಗೆ ಪ್ರತಿಭಟನೆ ನಡೆಯಲಿದೆ ಎಂದು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್ ಹೇಳಿದ್ದಾರೆ.
ಜಿಲ್ಲೆಯ ಜೀವನದಿ ನೇತ್ರಾವತಿ ತಿರುವು ಯೋಜನೆಗೆ ಜಿಲ್ಲೆಯ ಜನರ ವಿರೋಧದನಡುವೆಯೂ ಜಿಲ್ಲೆಯವರೇ ಆಗಿರುವ ಸಚಿವ ಖಾದರ್ ಯೋಜನೆಯನ್ನು ಬೆಂಬಲಿಸಿ ಹೇಳಿಕೆ ನೀಡಿರುವುದು ಖಂಡನೀಯ. ಜಿಲ್ಲೆಗೆ ಆಗಿರುವ ಅನ್ಯಾಯ ಹಾಗೂ ನಷ್ಟದ ಬಗ್ಗೆ ಈಗಾಗಲೇ ಹಲವು ತಜ್ಞರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರೂ ರಾಜ್ಯ ಸರ್ಕಾರ ನಿರ್ಜೀವವಾಗಿದೆ. ಅದಕ್ಕೆ ಪೂರಕವಾಗಿ ಸಚಿವರು ಭ್ರಷ್ಟಾಚಾರದಲ್ಲಿ ತೊಡಗಿರುವುದು ಖಂಡನೀಯ. ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ನಾಳೆ ಪ್ರತಿಭಟನೆ ನಡೆಯಲಿದೆ ಎಂದರು.
ಈ ಸಂದರ್ಭ ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಕಾರ್ಯದರ್ಶಿ ಸಂಜೀವ ಶೆಟ್ಟಿ ಅಂಬ್ಲಮೊಗರು ಮುಖಂಡರುಗಳಾದ ಯಶವಂತ ಅಮೀನ್ ಹಾಗೂ ಬಾಬು ಬಂಗೇರ ಉಪಸ್ಥಿತರಿದ್ದರು.