Site icon Ullalavani

ದರ್ಗಾ ಕಚೇರಿಗೆ ಬೀಗ ಜಡಿಯುವ ಹಂತಕ್ಕೆ ತಲುಪಿದ ಅಧ್ಯಕ್ಷರ ವಿವಾದ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ದ.ಕ. ಜಿಲ್ಲೆಯ ಅಜ್ಮೀರ್ ಎಂದು ಖ್ಯಾತಿ ಪಡೆದಿರುವ ಉಳ್ಳಾಲ ದರ್ಗಾ ಅಧ್ಯಕ್ಷರ ಆಯ್ಕೆಯ ವಿಚಾರದಲ್ಲಿ ಎರಡು ಪಂಗಡಗಳ ನಡುವೆ ವಾಗ್ದಾಳಿ ನಡೆದು  ತಾರಕಕ್ಕೇರಿ ದರ್ಗಾ ಕಚೇರಿಗೆ ವಕ್ಫ್‍ಬೋರ್ಡ್ ಬೀಗ ಜಡಿದ ಘಟನೆ ಗುರುವಾರ ರಾತ್ರಿ ನಡೆದಿದೆ.

ಘಟನೆಯ ವಿವರ:

ಉಳ್ಳಾಲ ದರ್ಗಾ ಸಮಿತಿಯ ನೂತನ ಸದಸ್ಯರ ಸಭೆಯನ್ನು ಮಂಗಳವಾರ ಕರೆಯಲಾಗಿತ್ತು. ಮಂಗಳವಾರ ಒಂದು ಪಂಗಡದ ಸದಸ್ಯರು ಹಾಜರಾದರೆ, ಉಳ್ಳಾಲ ಖಾಝಿ, ಮಾಜಿ ಅಧ್ಯಕ್ಷ ಹಂಝ ಸೇರಿದಂತೆ ಹಲವು ಮಂದಿ ಗೈರುಹಾಜರಾಗಿದ್ದರು. ಇದರಿಂದ ಬೇಸತ್ತ ಸಭೆ ಸೇರಿದ ಸದಸ್ಯರು ಅಬ್ದುಲ್ ರಶೀದ್‍ರವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದರು. ಬಳಿಕ ಅದೇ ದಿನ ಸಂಜೆ ಉಳ್ಳಾಲ ಖಾಝಿಯವರ ನೇತೃತ್ವದಲ್ಲಿ ಸಭೆ ಸೇರಿದ ಉಳಿದ ಸದಸ್ಯರು ಬುಖಾರಿಯವರನ್ನು ಅಧ್ಯಕ್ಷರನ್ನಾಗಿ ಆರಿಸಿದ್ದರು. ಆದರೆ ಅಬ್ದುಲ್ ರಶೀದ್‍ರವರು ಅಧ್ಯಕ್ಷರ ಕುರ್ಚಿ ಬಿಟ್ಟು ಕೊಡಲು ನಿರಾಕರಿಸಿದ್ದು, ನನಗೆ ಸ್ಪಷ್ಟ ಬಹುಮತವಿದ್ದು, ಬಹುಮತದಿಂದ ಆಯ್ಕೆಯಾಗಿದ್ದೇನೆ ಎಂದಿದ್ದರು.

ಇದೇ ವಿಚಾರದಲ್ಲಿ ಎರಡು ಪಂಗಡಗಳ ನಡುವೆ ಜಟಾಪಟಿ ನಡೆದಿದೆ. ರಶೀದ್‍ರವರನ್ನು ಅಧ್ಯಕ್ಷಪೀಠದಿಂದ ಇಳಿಸಲೇಬೇಕೆಂದು ಇನ್ನೊಂದು ಬಣ ಹೋರಾಟ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಅಬ್ದುಲ್‍ರಶೀದ್‍ರವರ ಬಣ ಹೋರಾಟ ನಡೆಸಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ಹದಗೆಟ್ಟಿತ್ತು. ಅಬ್ದುಲ್ ರಶೀದ್ ಅಧ್ಯಕ್ಷರಾಗಬಾರದು ಎಂದು ಪಟ್ಟು ಹಿಡಿದ ಗುಂಪೊಂದು ವಕ್ಫ್‍ಬೋರ್ಡ್‍ಗೆ ಮಾಹಿತಿ ನೀಡಿದ್ದರು. ಅಧ್ಯಕ್ಷರ ವಿಚಾರದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಆಗಮಿಸಿದ ವಕ್ಫ್‍ಬೋರ್ಡ್ ದರ್ಗಾ ಕಚೇರಿಗೆ ಬೀಗ ಜಡಿದು ಹೋಗಿದೆ. ಅಬ್ದುಲ್ ರಶೀದ್‍ರವರು ಅಧ್ಯಕ್ಷರಾಗಬೇಕೆಂಬುದು ಎಸ್ಕೆಎಸ್‍ಎಸ್‍ಎಫ್ ಬಣದ ಒತ್ತಾಯವಾದರೆ ಬುಖಾರಿ ಅಧ್ಯಕ್ಷರಾಗಬೇಕೆಂಬುದು ಎಸ್ ಎಸ್ ಎಫ್ ಬಣದ ನಿರ್ಧಾರವಾಗಿತ್ತು. ಆದರೆ ಉಳ್ಳಾಲ ಖಾಝಿಯವರು ಆಯ್ಕೆ ಮಾಡಿದ ಬುಖಾರಿಯವರನ್ನು ಅಧ್ಯಕ್ಷ ಪೀಠದಲ್ಲಿ ಕೂರಲು ರಶೀದ್‍ರವರ ಬಣ ಬಿಡದ ಕಾರಣದಿಂದ ಗದ್ದಲ ಸೃಷ್ಟಿಯಾಗಿ ದರ್ಗಾ ಕಚೇರಿಗೆ  ವಕ್ಫ್ ಬೋರ್ಡ್ ಬೀಗ  ಹಾಕಿದೆ.

ಸಚಿವರ ತಾಯಿಯ ಖಬರ್ ಗೋರಿಯನ್ನು ಕೆಡವಿದ ದುಷ್ಕರ್ಮಿಗಳು
ಮಾಜಿ ಶಾಸಕ ದಿ. ಯು.ಟಿಫರೀದ್ ಅವರ ಧರ್ಮಪತ್ನಿ ಹಾಗೂ ಹಾಲಿ ಆರೋಗ್ಯ ಮತ್ತು  ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅವರ ತಾಯಿ ದಿ.ಯು.ಟಿ.ನಸೀಮಾ ಅವರ ಉಳ್ಳಾಲ ದರ್ಗಾ ವಠಾರದಲ್ಲಿದ್ದ  ಖಬರ್ ಗೋರಿಯನ್ನು ದುಷ್ಕರ್ಮಿಗಳ ಗುಂಪೊಂದು ಕೆಡವಿದೆ. ದರ್ಗಾ ಅಧ್ಯಕ್ಷರ ವಿವಾದಕ್ಕೆ ಸಂಬಂಧಿಸಿ ಗುಂಪೊಂದು ಈ ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ.

Exit mobile version