ಕಲ್ಲಾಪು: ಮೂವರು ಯುವಕರ ಮೇಲೆ ದುಷ್ಕರ್ಮಿಗಳ ತಂಡವೊಂದು ತಲವಾರು ದಾಳಿ ನಡೆಸಿದ ಕೆಲವು ಗಂಟೆಗಳ ಮಧ್ಯೆ ಬಸ್ಸಿನಿಂದ ಇಳಿದು ಕಲ್ಲಾಪು ಪಟ್ಲದ ಮನೆಗೆ ತೆರಳುತ್ತಿದ್ದ ಬಾಳೆಹಣ್ಣು ವ್ಯಾಪಾರಿಗೆ ಎರಡು ಬೈಕುಗಳಲ್ಲಿ ಬಂದ ಐದು ಮಂದಿಯ ತಂಡ ತಲವಾರಿನಿಂದ ದಾಳಿ ನಡೆಸಿರುವ ಘಟನೆ ಮಂಗಳವಾರ ಸಂಜೆ ಕಲ್ಲಾಪು ಪಟ್ಲ ಎಂಬಲ್ಲಿ ಸಂಭವಿಸಿದೆ.
ಸೋಮವಾರ ನಸುಕಿನ ಜಾವ ಮಂಗಳೂರಿನ ಧಕ್ಕೆಗೆ ಕೆಲಸಕ್ಕೆಂದು ತೆರಳುತ್ತಿದ್ದ ಇಕ್ಬಾಲ್ ನಫ್ಸಾನ್ ಎಂಬವರಿಗೆ ದುಷ್ಕರ್ಮಿಗಳು ತಲವಾರು ದಾಳಿ ನಡೆಸಿದ್ದರೆ, ಅಂದೇ ತಡರಾತ್ರಿ ಕ್ಯಾಟರಿಂಗ್ ಮುಗಿಸಿ ಮನೆ ಕಡೆಗೆ ತೆರಳುತ್ತಿದ್ದ ಮೂವರು ಯುವಕರ ಮೇಲೆ ದುಷ್ಕರ್ಮಿಗಳ ತಂಡ ತಲವಾರು ದಾಳಿ ನಡೆಸಿ ಕೊಲೆಗೆ ಯತ್ನಿಸಿದೆ. ಮಂಗಳವಾರ ಸಂಜೆ ಮತ್ತೆ ಅಂತಹದ್ದೇ ಘಟನೆ ಪುನರಾವರ್ತನೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉಳ್ಳಾಲ ಠಾಣಾ ವ್ಯಾಪ್ತಿಯ ಸರಹದ್ದಿನಲ್ಲಿ ಇಂದು ಸಂಜೆ 6 ಗಂಟೆಯಿಂದ ನಾಳೆ ಬೆಳಗ್ಗಿನ 6 ಗಂಟೆಯವರೆಗೆ ಸೆಕ್ಷನ್ 144 ಜಾರಿಗೊಳಿಸಲಾಗಿದೆ.