Site icon Ullalavani

ವೈದ್ಯಕೀಯ ಕ್ಷೇತ್ರ ವ್ಯಾಪಾರಿಕರಣವಾಗುವುದರಿಂದ ಹಣವಿದ್ದವರು ವೈದ್ಯರಾಗುತ್ತಿದ್ದಾರೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ದೇರಳಕಟ್ಟೆ: ವೈದ್ಯಕೀಯ ಕ್ಷೇತ್ರ ವ್ಯಾಪಾರಿಕರಣವಾಗುವುದರಿಂದ ಹಣವಿದ್ದವರು ವೈದ್ಯರಾಗುತ್ತಿದ್ದು, ಇದರಿಂದ ಅಮಾಯಕ ರೋಗಿಗಳು ಬಲಿಯಾಗುವ ಸ್ಥಿತಿ ಎದುರಾಗಿದೆ ಎಂದು ಭಾರತ್ ಮಾತಾ ಪೌಂಡೇಶನ್ ಹಾಗೂ ಬೆಥನಿ ಚ್ಯಾರಿಟೇಬಲ್ ಟ್ರಸ್ಟಿನ ಉಪಾಧ್ಯಕ್ಷೆ ಹಾಗೂ ವಕೀಲೆ ಫ್ಲೋರೆನ್ಸ್ ಮೆಂಡಿಸ್ ಅಭಿಪ್ರಾಯಪಟ್ಟರು.

ಅವರು ದೇರಳಕಟ್ಟೆ ಕೆ.ಎಸ್ ಹೆಗ್ಡೆ ಕಾಲೇಜಿನ ಫಿಸಿಯೋತೆರಫಿ ವಿಭಾಗದ ಕ್ಷೇಮ ಆಡೊಟೋರಿಯಂನಲ್ಲಿ ಬುಧವಾರ ಜರುಗಿದ ವಾರ್ಷಿಕ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.

ಪ್ರಸುತ್ತ ಕಾಲದಲ್ಲಿ ಯಾವುದು ಉದಾತ್ತವಲ್ಲ. ವೈದ್ಯ ವೃತ್ತಿಯು ವ್ಯವಹಾರಿಕವಾಗಿ ಮಾರ್ಪಡಾಗಿದೆ. ಇದು ವೈದ್ಯಕೀಯ ಕ್ಷೇತ್ರಕ್ಕೆ ತೀರ ಕಳವಳಕಾರಿ ಸಂಗತಿ. ಹಣವಿದ್ದವರು ಫ್ಯಾಷನ್‍ಗಾಗಿ ವೈದ್ಯರಾಗುತ್ತಿದ್ದು, ಇದರಿಂದ ಜ್ಞಾನವಿಲ್ಲದವರು ಬೇಜವಾಬ್ದಾರಿತನದಿಂದ ವರ್ತಿಸಿ ಜೀವವನ್ನು ಉಳಿಸುವ ಬದಲು ಜೀವವನ್ನು ತೆಗೆಯುವವರಾಗಿದ್ದಾರೆ.

ಸಮರ್ಪಣಾಭಾವ ಕೌಶಲ್ಯ ಆಸಕ್ತಿ ಮಾನವೀಯತೆ ಉಳ್ಳವರು ಮಾತ್ರ ಉತ್ತಮ ವೈದ್ಯರಾಗಲು ಸಾಧ್ಯ. ರೋಗಿಗಳ ಭಾವನೆಯನ್ನು ಅರ್ಥೈಸಿ ಸೇವೆಯನ್ನು ಮುಂದುವರಿಸಿ ಎಂದ ಅವರು ಪ್ರಸುತ್ತ ಕಾಲಘಟ್ಟದಲ್ಲಿ ಪ್ರೀತಿ ಮಾಯವಾಗುತ್ತಿದ್ದು, ನಾನು ನನ್ನದು ಎಂಬ ಸ್ವಾರ್ಥ ಭಾವನೆಯಿಂದಾಗಿ ಸುಂದರ ಸಮುದಾಯವನ್ನು ನಿರ್ಮಿಸಲು ಆಸಾಧ್ಯವಾಗುತ್ತಿದೆ ಎಂದರು.

ಈ ಸಂದರ್ಭ ಪ್ರೊ.ಪುರುಷೋತ್ತಮ್ ಚಿಪ್ಪಲ, ಸ್ಟೂಡೆಂಟ್ ಕೌನ್ಸಿಲ್‍ನ ಕಾರ್ಯದರ್ಶಿ ಸುಶ್ಮಿತ ಎಸ್ ಶೆಟ್ಟಿ ಉಪಸ್ಥಿತರಿದ್ದರು.
ಪ್ರಾಂಶುಪಾಲ ಪ್ರೊ.ಧಣೇಶ್ ಕುಮಾರ್ ಕೆ.ಯು ಸ್ವಾಗತಿಸಿದರು. ಡಾ. ಜಾಯ್ನರ್ ಮಿಸ್ಕಿತ್ ಕಾರ್ಯಕ್ರಮ ನಿರ್ವಹಿಸಿದರು. ಸಹಾಯಕ ಪ್ರೊ. ಅಜೀತ್ ಎಸ್ ವಂದಿಸಿದರು.
ಈ ವೇಳೆ ವಾರ್ಷಿಕ ಪತ್ರಿಕೆ ಆಕಾಂಕ್ಷ-2016 ಮತ್ತು ನಿಟ್ಟೆ ಫಿಸಿಯೋಕಾನ್ 2016 ಅಂತರಾಷ್ಟ್ರೀಯ ಸಮ್ಮೇಳನದ ಲಾಂಛನವನ್ನು ಬಿಡುಗಡೆಗೊಳಿಸಲಾಯಿತು.

Exit mobile version