ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕುತ್ತಾರು: ಕೈಬೆರಳುಗಳೆಲ್ಲಾ ಸವೆಯುತ್ತದೆ, ಹಸಿವು ಆದರೂ ತಿನ್ನಲು ಆಗುವುದಿಲ್ಲ, ಜನರ ಕಣ್ಣಲ್ಲಿ ಅದು ಸ್ವರ್ಗ ಅನಿಸಿದರೂ ನಮ್ಮ ಪಾಲಿಗೆ ಅದು ಅಕ್ಷರಶ: ನರಕ.ಇದು ಇತ್ತೀಚೆಗೆ ಸಿಯಾಚೀನ್ ನಲ್ಲಿ ಮಂಜಿನಡಿ ಸಿಲುಕಿ ಮೃತಪಟ್ಟ ಯೋಧರಿಗೆ ಕುತ್ತಾರು ಬಾಲಸಂರಕ್ಷಣಾ ಕೇಂದ್ರದಲ್ಲಿ ಭಾನುವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾಜಿ ಯೋಧರೊಬ್ಬರು ಹಂಚಿಕೊಂಡ ಅನುಭವದ ಮಾತು.
ಸೈನ್ಯಕ್ಕೆ ಸೇರಿದ ಅದೆಷ್ಟೋ ಟ್ಯಾಂಕರ್ಗಳು ಮಂಜಿನಡಿ ಹೂತುಹೋಗಿವೆ. ಪ್ರದೇಶದಲ್ಲಿ ವಾಸವಿದ್ದರೆ 10 ವರ್ಷ ಆಯಸ್ಸು ಕಡಿಮೆಯಾಗುವುದು ಖಚಿತ. ಸಿಯಾಚಿನ್ ದುರಂತದಲ್ಲಿ ಹನುಮಂತಪ್ಪ ಬದುಕಿ ಸಿಕ್ಕಿದ್ದರಿಂದ ದೇಶಾದ್ಯಂತ ಅಲ್ಲಿನ ವಿಚಾರ ಗೊತ್ತಾಯಿತು. ಅಲ್ಲದೆ ಸಾವಿನ ವಿಷಯ ಹೊರಜಗತ್ತಿಗೆ ತಿಳಿಯಿತು. ಇಲ್ಲವಾದಲ್ಲಿ ಸರಿಯಾದ ಮೃತರ ಸಂಖ್ಯೆಯೂ ಮಾಧ್ಯಮಗಳಲ್ಲಿ ಉಲ್ಲೇಖವಾಗುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕುತ್ತಾರು ಬಾಲಸಂರಕ್ಷಣಾ ಕೇಂದ್ರದ ಸಂಚಾಲಕ ಡಾ.ಪಿ.ಅನಂತಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಸೇನಾಧಿಕಾರಿ ಅಪ್ಪು ಶೆಟ್ಟಿ, ವಿಶ್ವ ಹಿಂದುಪರಿಷತ್ ಉಳ್ಳಾಲ ಪ್ರಖಂಡದ ಅಧ್ಯಕ್ಷ ಹರಿದಾಸ್ ಮಾಡೂರು ಮುಖ್ಯ ಅತಿಥಿಗಳಾಗಿದ್ದರು.
ವಿ.ಹಿಂ.ಪ ಪ್ರಖಂಡ ಕಾರ್ಯದರ್ಶಿ ನಾರಾಯಣ ಕುಂಪಲ ಸ್ವಾಗತಿಸಿದರು. ವಿ.ಹಿಂ.ಪ ಜಿಲ್ಲಾ ಕಾರ್ಯದರ್ಶಿ ಗೋಪಾಲ್ ಕುತ್ತಾರ್ ವಂದಿಸಿದರು. ಕುಮಾರಿ ಅರ್ಪಿತಾ ಕಾರ್ಯಕ್ರಮ ನಿರೂಪಿಸಿದರು.