ಕೊಲ್ಯ: ಟೂರಿಸ್ಟ್ ವಾಹನ ಅಪಘಾತಕ್ಕೀಡಾಗಿ ವೃದ್ಧೆಯೊಬ್ಬರು ಮಗಳ ಎದುರಲ್ಲೇ ಸಾವನ್ನಪ್ಪಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೊಲ್ಯದಲ್ಲಿ ಬುಧವಾರ ಸಂಜೆ ಸಂಭವಿಸಿದೆ.
ಕೊಲ್ಯ ಸಾರಸ್ವತಿಕುಮೇರು ನಿವಾಸಿ ದಿ. ಮೋಹನ್ ಪೂಜಾರಿ ಎಂಬವರ ಪತ್ನಿ ನಾಗಮ್ಮ (70) ಮೃತರು. ಒಂಭತ್ತುಕೆರೆಯಲ್ಲಿ ನಡೆಯುತ್ತಿದ್ದ ಸಂಬಂಧಿಕರ ಸೀಮಂತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಾಗಮ್ಮ ಮಗಳನ್ನು ಕಾಸರಗೋಡು ಕಡೆಗೆ ಬಿಡಲೆಂದು ಕೊಲ್ಯ ಸಮೀಪ ರಾಷ್ಟ್ರೀಯ ಹೆದ್ದಾರಿ 66 ನ್ನು ದಾಟುವ ಸಂದರ್ಭ ಕೇರಳ ಕಡೆಯಿಂದ ಬರುತ್ತಿದ್ದ ಟೂರಿಸ್ಟ್ ವಾಹನ ಢಿಕ್ಕಿ ಹೊಡೆದು, ಅವರ ಮೇಲೆಯೇ ಚಲಿಸಿತ್ತು. ಪರಿಣಾಮ ನಾಗಮ್ಮ ಅವರ ದೇಹ ಛಿದ್ರಗೊಂಡು ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಾಗಮ್ಮ ಅವರು ಮೂವರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.
ಉಳ್ಳಾಲದ ಸಮ್ಮರ್ ಸ್ಯಾಂಡಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಸೀಮಂತ ಕಾರ್ಯಕ್ರಮಕ್ಕೆ ರಜೆಯನ್ನು ಪಡೆದಿದ್ದರು. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಸ್ತೆ ದಾಟುವಾಗ ನಾಗಮ್ಮ ಅವರ ಮಗಳ ಕೈಯನ್ನೇ ಹಿಡಿದು ದಾಟುತ್ತಿದ್ದರು. ಆದರೆ ಅಪಘಾತವೂ ಮಗಳ ಎದುರಲ್ಲೇ ನಡೆದು ಸಾವನ್ನಪ್ಪಿದ ಘಟನೆ ಹೃದಯವಿದ್ರಾವಕವಾಗಿತ್ತು.