ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೊಣಾಜೆ: ಕಳೆದ ಒಂದು ದಶಕಗಳಿಂದ ನಾದುರಸ್ತಿಯಲ್ಲಿರುವ ರಸ್ತೆಯನ್ನು ದುರಸ್ತಿ ಪಡಿಸುವಂತೆ ಆಗ್ರಹಿಸಿ ನಾಗರಿಕರ ಬೇಡಿಕೆಯನ್ನು ಜನಪ್ರತಿನಿದಿಗಳು, ಸಚಿವರು ಕಡೆಗಣಿಸುತ್ತಿದ್ದು, ಇದರಿಂದ ಆಕ್ರೋಶಗೊಂಡ ನಾಗರಿಕರು ಅಡ್ಕರೆ ಪಡ್ಪು ನಾಗರಿಕ ಹಿತರಕ್ಷಣಾ ಸಮಿತಿಯ ಆಶ್ರಯದಲ್ಲಿ ಸೋಮವಾರ ರಾತ್ರಿಯೇ ಪ್ರತಿಭಟನೆ ನಡೆಸಿ ಚುನಾವಣಾ ಬಹಿಷ್ಕಾರ ಮಾಡಲು ನಿರ್ಧರಿಸಿದ ಘಟನೆ ದೇರಳಕಟ್ಟೆ ಸಮೀಪ ಅಡ್ಕರೆಪಡ್ಪುವಿನಲ್ಲಿ ನಡೆಯಿತು.
ಕೊಣಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳ ಪಡುವ ಅಡ್ಕರೆ ಪಡ್ಪು ಎಂಬ ಈ ಪ್ರದೇಶದಲ್ಲಿ ಶಾಲಾ ಕಾಲೇಜು, ಧಾರ್ಮಿಕ ಕೇಂದ್ರಗಳಿದ್ದು, ಹಾಗೂ ಎಲ್ಲಾ ಜಾತಿ ಧರ್ಮದ ಜನರು ಇಲ್ಲಿ ಅನ್ಯೋನ್ಯತೆಯಿಂದ ಬಾಳುತ್ತಿದ್ದು, ಹೆಚ್ಚಾಗಿ ಬಡ ಜನರೇ ಈ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ.
ಇಲ್ಲಿನ ಮುಖ್ಯ ರಸ್ತೆಯು ದೇರಳಕಟ್ಟೆ ಹಾಗೂ ಕೊಣಾಜೆಗೆ ಇಲ್ಲಿನ ಜನರ ಸಂಪರ್ಕ ರಸ್ತೆಯಾಗಿದ್ದು, ಕಳೆದ 16 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. ರಸ್ತೆಯಲ್ಲಿ ಹೊಂಡಗಳು ತುಂಬಿ ಸಂಪೂರ್ಣ ಹದಗೆಟ್ಟು ಹೋಗಿದ್ದರೂ ಜನಪ್ರತಿನಿಧಿಗಳು ಭರವಸೆಯ ಪಟ್ಟಿಯನ್ನು ಮಾತ್ರ ಮುಂದಿಡುತ್ತಿದ್ದಾರೆ. ಸುಗಮ ಸಂಚಾರ ಸಾಧ್ಯವಾಗದೇ ಇಲ್ಲಿನ ನಾಗರಿಕರು , ವೃದ್ಧರು, ವಿಧ್ಯಾರ್ಥಿಗಳು, ಮಹಿಳೆಯರು, ಹಿರಿಯರು ಹಾಗೂ ರೋಗಿಗಳು ಸಂಕಷ್ಟಕ್ಕೀಡಾಗಿದ್ದಾರೆ.ಈ ವಿಚಾರವನ್ನು ಜನಪ್ರತಿನಿಧಿಗಳ ಗಮನಸೆಳೆದರೆ ನಿಮ್ಮ ಮತವೇನು ನನಗೆ ಮಂತ್ರದ ದಂಡವಲ್ಲ ಎಂದು ಉಡಾಪೆಯ ಉತ್ತರವನ್ನು ನೀಡಿರುತ್ತಾರೆ. ಮತದಾನ ಸಮಯದಲ್ಲಿ ಮಾತ್ರ ನಮ್ಮ ಊರಿಗೆ ಕಾಳಿಡುವ ಈ ಜನಪ್ರತಿನಿಧಿಗಳು ಆ ಸಮಯದಲ್ಲಿ ರಸ್ತೆಯ ಅಳತೆಯನ್ನು ತೆಗೆದುಕೊಂಡು ಹೋಗಿ ಮತ್ತೆ ಮುಂದಿನ ಚುನಾವಣೆಗೆ ಮತ ಕೇಳಲು ಇದೇ ನಾಟಕವನ್ನು ಮಾಡುತ್ತಿದ್ದಾರೆ ಎಂದು ಆಪಾದಿಸಿದರು.
ಪ್ರತಿಭಟನಾ ಸಭೆಯಲ್ಲಿ ಸಮಾಜ ಸೇವಕರಾದ ಸಿರಾಜ್ ಅಡ್ಕರೆ, ಶರೀಫ್ ಅಡ್ಕರೆ, ಯೂನುಸು, ನಿಯಾಝ್ ಅಡ್ಕರೆ, ಉಸ್ಮಾನ್ ಸೈಟ್ ಸೇರಿದಂತೆ ಈ ಊರಿನ ನಾಗರಿಕರು ಭಾಗವಹಿಸಿದ್ದರು.