Site icon Ullalavani

ಕೊಣಾಜೆ-ಪುರುಷಕೋಡಿ ರಸ್ತೆ ಅವ್ಯವಸ್ಥೆ: ಚುನಾವಣಾ ಬಹಿಷ್ಕಾರಕ್ಕೆ ತೀರ್ಮಾನ

ಉಳ್ಳಾಲ ನ್ಯೂಸ್ ನೆಟ್ ವರ್ಕ್

ಮುಡಿಪು: ಕೊಣಾಜೆ-ಪುರುಷಕೋಡಿ ರಸ್ತೆಯ ಅವ್ಯವಸ್ಥೆಯ ಬಗ್ಗೆ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷವನ್ನು ಖಂಡಿಸಿ ಪುರುಷಕೋಡಿ ನಾಗರಿಕರು ಸೋಮವಾರ ಪುರುಷಕೋಡಿ ಬಳಿ ಪ್ರತಿಭಟನೆ ನಡೆಸಿ ಜನಪ್ರತಿನಿಧಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಆದರೆ ಪ್ರತಿಭಟನೆಗೆ ಮುನ್ನ ಚುನಾವಣಾ ಬಹಿಷ್ಕಾರಕ್ಕೆ ಸಂಬಂಧಿಸಿದಂತೆ ಪ್ರತಿಭಟನಾಕಾರರಲ್ಲಿ ಭಿನ್ನಮತ ಸ್ಪೋಟಗೊಂಡು ವಾಗ್ವಾದ ನಡೆದು ಬಳಿಕ ಒಂದು ಗುಂಪು ಚುನಾವಣಾ ಬಹಿಷ್ಕಾರ ತೀರ್ಮಾಣಕ್ಕೆ ಒಪ್ಪದೆ ಪ್ರತಿಭಟನೆಯನ್ನು ನಡೆಸಿದರೆ ಇನ್ನೊಂದು ಗುಂಪು ಚುನಾವಣೆಯನ್ನು ಬಹಿಷ್ಕರಿಸುವ ತೀರ್ಮಾಣವನ್ನು ಕೈಗೊಂಡು ರಸ್ತೆಯಲ್ಲಿ ಪ್ರತಿಭಟನೆಯನ್ನು ನಡೆಸಿದರು.

ಮಂಗಳೂರು ವಿವಿ ಬಳಿಯಿಂದ ಪುರುಷಕೋಡಿಯ ಸುಮಾರು ಎರಡು ಕಿ.ಮೀ ವ್ಯಾಪ್ತಿಯ ರಸ್ತೆಯು ಕಳೆದ ಹಲವಾರು ವರ್ಷದಿಂದ ಹದಗೆಟ್ಟು ಹೋಗಿ ಈ ಭಾಗದ ಜನರು ಸಂಕಷ್ಟವನ್ನು ಎದುರಿಸುತ್ತಿದ್ದರು. ಅಲ್ಲದೆ ಈ ರಸ್ತೆಯ ಒಂದು ಕಿ.ಮೀ ವ್ಯಾಪ್ತಿಗೆ ಡಾಂಬಾರು ಹಾಕಿದ್ದು ಅದೀಗ ಎದ್ದು ಹೋಗಿ ನಡೆದಾಡಲೂ ಜನರು ತೊಂದರೆ ಎದುರಿಸುವಂತಾಗಿತ್ತು. ಇದರಿಂದ ಬೇಸತ್ತ ಪುರುಷಕೋಡಿಯ ನಾಗರಿಕರು ಚುನಾವಣೆ ಬಹಿಷ್ಕರಿಸಿ ಪ್ರತಿಭಟನೆ ನಡೆಸುವ ತೀರ್ಮಾನವನ್ನು ಕಳೆದ ವಾರ ತೆಗೆದುಕೊಂಡಿದ್ದರು. ಇದರಂತೆ ಸೋಮವಾರದಂದು ಬೆಳಿಗ್ಗೆ ಕೊಣಾಜೆ ಪುರುಷಕೋಡಿ ರಸ್ತೆಯ ರುದ್ರಭೂಮಿ ಬಳಿ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಸೇರಿದಂತೆ ನಾಗರಿಕರು ಸೇರಿದ್ದರು. ಆದರೆ ಇಲ್ಲಿ ಸೇರಿದ್ದವರಲ್ಲಿ ಒಂದು ಗುಂಪು ನಾವು ಪ್ರತಿಭಟನೆಗೆ ಸಿದ್ದರಿದ್ದೇವೆ ಆದರೆ ಚುನಾವಣೆಯನ್ನು ಬಹಿಷ್ಕರಿಸುವುದಿಲ್ಲ ಎಂದು ಹೇಳಿದಾಗ ಇನ್ನೊಂದು ಗುಂಪಿನ ನಾಗರಿಕರ ನಡುವೆ ಮಾತಿನ ಚಕಮಕಿ ನಡೆದು ವಾಗ್ವಾದ ನಡೆಯಿತು.

ಎರಡು ಗುಂಪುಗಳ ಪ್ರತಿಭಟನೆ
ಚುನಾವಣಾ ಬಹಿಷ್ಕಾರಕ್ಕೆ ಸಂಬಂಧಿಸಿದಂತೆ ಅಲ್ಲಿ ಸೇರಿದ ನಾಗರಿಕರಲ್ಲಿ ಭಿನ್ನಮತ ಇದ್ದುದರಿಂದ ಸೇರಿದ್ದವರಲ್ಲಿ ಒಂದು ಗುಂಪು ನಾವು ರಸ್ತೆಯ ಅವ್ಯವಸ್ಥೆಯನ್ನು ಖಂಡಿಸಿ ಚುನಾವಣೆಯನ್ನು ಬಹಿಷ್ಕರಿಸಿಯೇ ಸಿದ್ದ ಎಂದು ಹೇಳಿ ಜನಪ್ರತಿನಿಧಿಗಳ ವಿರುದ್ದ ಘೋಷನೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ರಸ್ತೆ ಅಭಿವೃದ್ದಿ ಆದ ನಂತರವೇ ನಾವು ಮುಂದಿನ ಚುನಾವಣೆಯಲ್ಲಿ ಭಾಗವಹಿಸಿ ರಸ್ತೆ ಅಭಿವದ್ದಿಯನ್ನು ಮಾಡಿದ ಪಕ್ಷವನ್ನು ನಾವು ಬೆಂಬಲಿಸುತ್ತೇವೆ ಎಂದರು.
ಒಂದು ಗುಂಪಿನ ಪ್ರತಿಭಟನೆಯ ಬಳಿಕ ಇನ್ನೊಂದು ಗುಂಪಿನ ನಾಗರಿಕರು ಪ್ರತಿಭಟನೆಯನ್ನು ನಡೆಸಿ ಮತದಾನ ನಮ್ಮ ಹಕ್ಕು. ಅದನು ಕಸಿಯುವ ಹಕ್ಕು ಯಾರಿಗೂ ಇಲ್ಲ. ಆದರೆ ನಾವು ರಸ್ತೆಯ ಅಭಿವದ್ದಿಗಾಗಿ ನಡೆಯುವ ಪ್ರತಿಭಟನೆಗೆ ನಮ್ಮ ಸಹಕಾರ ಇದೆ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥ ವರದರಾಜ್, ಜಯರಾಮ ಶೆಟ್ಟಿ ಅವರು ಶಾಸಕರಾಗಿದ್ದ ಸಂದರ್ಭದಲ್ಲಿ ಇಲ್ಲಿಯ ರಸ್ತೆಗೆ ಡಾಂಬಾರು ಹಾಕಲಾಗಿತ್ತು. ಆದರೆ ಬಳಿಕ ಬಂದ ಕಾಂಗ್ರೆಸ್ ಶಾಸಕರು ಇಲ್ಲಿಯ ರಸ್ತೆಯ ಗಮನವೇ ಹರಿಸಿಲ್ಲ. ಮನವಿ ಕೊಟ್ಟಾಗ ನಾವೇನು ಮ್ಯಾಜಿಕ್ ಮಾಡಬೇಕಾ ಎಂದು ಕೇಳಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಿಕ್ಕು ತಪ್ಪಿಸಲು ಯತ್ನ ಆರೋಪ
ಕಳೆದ ಒಂದು ವಾರದಿಂದ ಪ್ರತಿಭಟನೆಯ ಬಗ್ಗೆ ಸಿದ್ದತೆ ನಡೆಸಿ ಚುನಾವಣೆಯ ಬಹಿಷ್ಕರಿಸುವ ಬಗ್ಗೆ ಎಲ್ಲರು ತೀರ್ಮಾಣ ಕೈಗೊಂಡಿದ್ದರೂ ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ಈ ರಸ್ತೆಗೆ ಸಂಬಂಧಿಸದವರು ಬಂದು ಚುನಾವಣೆ ಬಹಿಷ್ಕರಿಸಿದರೆ ನಿಮ್ಮ ರೇಷನ್ ಕಾರ್ಡ್ ಹಾಗೂ ಇತರ ಸೌಲಭ್ಯಗಳು ವಾಪಸ್ಸಾಗುತ್ತದೆ ಎಂದು ಹೇಳಿ ಬೆದರಿಸಿ ಪ್ರತಿಭಟನಾಕಾರನ್ನು ಬೇರೆ ಬೇರೆ ಗುಂಪುಗಳಾನ್ನಾಗಿಸಿ ಪ್ರತಿಭಟನೆಯ ದಿಕ್ಕು ತಪ್ಪಿಸಲು ಯತ್ನಿಸಿದ್ದಾರೆ ಎಂದು ಒಂದು ಗುಂಪಿನ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

Exit mobile version