Site icon Ullalavani

ಸಮಗ್ರ ಕೃಷಿ ಪದ್ದತಿಯಿಂದ ಅಧಿಕ ಲಾಭ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಬಾಳೆಪುಣಿ: ಆಧುನಿಕ ಕೃಷಿ ಪದ್ದತಿ, ಹೊಸ ಹೊಸ ತಂತ್ರಜ್ಞಾನ, ಅವಿಷ್ಕಾರಗಳನ್ನು ಬಳಸಿ ಒಂದು ಬೆಳೆಗೆ ಸೀಮಿತವಾಗದೆ ಕೃಷಿ, ತೋಟಗಾರಿಕೆ, ಮೀನುಗಾರಿಗೆ, ಹೈನುಗಾರಿಕೆಯನ್ನು ಸಮಗ್ರ ಕೃಷಿ ಪದ್ದತಿಯಲ್ಲಿ ಅಳವಡಿಸಿ ಕೃಷಿಯಲ್ಲಿ ಲಾಭವನ್ನು ಪಡೆಯಬಹುದು ಎಂದು ಬ್ರಹ್ಮಾವರದ ವಲಯ ಸಹ ಸಂಶೋಧನಾ ನಿರ್ದೇಶಕರಾದ ಡಾ.ಎಂ. ಹನುಮಂತಪ್ಪರವರು ಅಭಿಪ್ರಾಯಪಟ್ಟರು.

ಅವರು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗ ಇದರ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಉಳ್ಳಾಲ ಇದರ ವತಿಯಿಂದ ಬಾಳೆಪುಣಿ ಗ್ರಾಮ ಪಂಚಾಯತ್‍ನ ಅಂಬೇಡ್ಕರ್ ಸಭಾಭವನದಲ್ಲಿ ಹಮ್ಮಿಕೊಂಡ ಕೃಷಿ ಗ್ರಾಮ ದತ್ತು ಯೋಜನೆಯಡಿಯಲ್ಲಿ ಸಮಗ್ರ ಕೃಷಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆಯನ್ನು ಬ್ರಹ್ಮಾವರದ ಕೃಷಿ ವಿಸ್ತರಣಾ ಸಹ ನಿರ್ದೇಶಕರಾದ ಡಾ.ಎಸ್.ಯು.ಪಾಟೀಲ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಉಳ್ಳಾಲ ಇದರ ಮುಖ್ಯಸ್ಥರಾದ ಡಾ.ಲಕ್ಷ್ಮಣ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ.ಹೆಚ್.ಹನುಮಂತಪ್ಪ, ಬಾಳೆಪುಣಿ ಗ್ರಾಮ ಪಂಚಾಯತ್‍ನ ಅಭಿವೃದ್ದಿ ಅಧಿಕಾರಿ ರವಿಕುಮಾರ್, ಪ್ರಗತಿಪರ ಕೃಷಿಕರಾದ ರಮೇಶ್ ಶೇಣವ ಉಪಸ್ಥಿತರಿದ್ದರು.

ಸಮಗ್ರ ಕೃಷಿ ತರಬೇತಿ ಕಾರ್ಯಕ್ರಮದಲ್ಲಿ ಸಿಪಿಸಿಆರ್‍ಐ ಕಾಸರಗೋಡ್‍ನ ಪ್ರಧಾನ ವಿಜ್ಞಾನಿ ಡಾ.ರವಿ ಭಟ್, ಕೆವಿಕೆ ಮಂಗಳೂರಿನ ಡಾ.ಹರೀಶ್ ಶಣೈ, ಡಾ.ಅಣ್ಣಪ್ಪಸ್ವಾಮಿ ಟಿ.ಎಸ್., ಡಾ.ರವೀಂದ್ರ.ಆರ್.ಪಾಟೀಲ್, ಬ್ರಹ್ಮಾವರ ಸಂಶೋಧನಾ ಕೇಂದ್ರದ ಡಾ. ರಾಜಣ್ಣ ಇವರುಗಳು ಅಡಿಕೆ, ತೆಂಗು, ಭತ್ತ, ಬಾಳೆ, ಗೇರು, ತರಕಾರಿ ಬೆಳೆ, ಮೀನುಗಾರಿಕೆ, ಕೋಳಿ ಸಾಕಾಣಿಕೆಯ ಬಗ್ಗೆ ಮಾಹಿತಿ ನೀಡಿದರು.

ಉಳ್ಳಾಲ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಲಕ್ಷ್ಮಣ ಸ್ವಾಗತಿಸಿದರು, ಕೀಟಶಾಸ್ತ್ರ ವಿಜ್ಞಾನಿ ಎ.ಎಚ್.ತುಕರಾಮ್ ವಂದಿಸಿದರು, ಪ್ರವೀಣ್.ಎಸ್.ಕುಂಪಲ ಕಾರ್ಯಕ್ರಮ ನಿರೂಪಿಸಿದರು.

Exit mobile version