Site icon Ullalavani

ಮಹಿಳೆ ಆತ್ಮಹತ್ಯೆ, ಆರೋಪಿ ಜೈಲಿಗೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ಮಾನಸಿಕ, ದೈಹಿಕ, ವರದಕ್ಷಿಣೆಗಾಗಿ ಕಿರುಕುಳ ನೀಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಆರೋಪ ಹೊಂದಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದು ನ್ಯಾಯಾಂಗ ಬಂಧನಕ್ಕೊಳಗಾಗಿದ್ದಾನೆ.

ಘಟನೆಯ ವಿವರ:

ಕೊಣಾಜೆ ಗ್ರಾಮದ ಅಡ್ಕರೆಪಡ್ಪು ನಿವಾಸಿ ಹಸನಬ್ಬ ಎಂಬವರ ಮಗಳು ರಮ್ಲತ್ ಅವರಿಗೆ ನಡಾರ್-ಮಾಡೂರು ನಿವಾಸಿ ಅಬೂಬಕ್ಕರ್ ಸಿದ್ದೀಕ್ ಎಂಬಾತನ ಜೊತೆ 15 ವರ್ಷಗಳ ಹಿಂದೆ ವಿವಾಹವಾಗಿದ್ದು ಅವರಿಗೆ ಮೂರು ಮಕ್ಕಳಿದ್ದಾರೆ. ಕಳೆದ ಐದು ವರ್ಷಗಳ ಹಿಂದೆ ಅಬೂಬಕ್ಕರ್ ಸಿದ್ದೀಕ್, ಅತ್ತೆ ನೆಬಿಸಾ, ನಾದಿಯರಾದ ಮುಮ್ತಾಜ್, ಅಸ್ಮಾ. ಆಕೆಯ ಗಂಡ ಯೂನುಸು ಸೇರಿಕೊಂಡು ರಮ್ಲತ್‍ಗೆ ಮಾನಸಿಕ, ದೈಹಿಕ ಹಿಂಸೆ ನೀಡಿ ಐದು ಲಕ್ಷ ರೂಪಾಯಿ ಮತ್ತು ಚಿನ್ನಾಭರಣ ತರುವಂತೆ ಪೀಡಿಸುತ್ತಾ ಬಂದಿದ್ದರು.

ಈ ಹಿನ್ನೆಲೆಯಲ್ಲಿ ಎರಡು ಬಾರಿ ಮುಖಂಡರ ಸಮ್ಮುಖದಲ್ಲಿ ರಾಜಿ ಪಂಚಾಯಿತಿಗೆ ನಡೆದಿದ್ದು ನಿಷ್ಪ್ರಯೋಜಕವಾಗಿತ್ತು. ಇದರಿಂದ ಬೇಸತ್ತ ರಮ್ಲತ್ ಕಳೆದ ತಿಂಗಳು 13ರಂದು ತವರಿಗೆ ಬಂದು ಗಂಡನ ಮನೆಯಲ್ಲಿ ಹಿಂಸೆ ತಾಳಲಾಗುತ್ತಿಲ್ಲ ಎಂದು ಅಲವತ್ತುಕೊಂಡು ಮರುದಿನ ಆತ್ಮಹತ್ಯೆಗೆ ಶರಣಾಗಿದ್ದರು. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಕೇಸು ದಾಖಲಿಸಲಾಗಿದ್ದು ಬಳಿಕ ಉಳ್ಳಾಲ ಠಾಣೆಗೆ ವರ್ಗಾಯಿಸಲಾಗಿತ್ತು.

ಪ್ರಕರಣದ ಬಳಿಕ ಅಬೂಬಕ್ಕರ್ ಸಿದ್ದೀಕ್ ತಲೆಮರೆಸಿಕೊಂಡಿದ್ದಲ್ಲದೆ, ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ. ಆದರೆ ಜಾಮೀನು ಲಭ್ಯವಾಗಿರಲಿಲ್ಲ. ಆತನ ಬಂಧನಕ್ಕೆ ಬಲೆ ಬೀಸಿದ್ದ ಉಳ್ಳಾಲ ಪೊಲೀಸರು ಶನಿವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

Exit mobile version