ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕುತ್ತಾರು: ದಿನನಿತ್ಯ ವಾಹನ ಸವಾರರಿಗೆ ಅಲ್ಲಿಂದ ಹಾದುಹೋಗುವುದು ತೀರಾ ಕಷ್ಟ, ಪಾದಚಾರಿಗಳಿಗಂತೂ ಹೋಗುವುದೇ ಅಸಾಧ್ಯ. ಆದರೂ ಮೂಗುಮುಚ್ಚಿಕೊಂಡೇ ಮುಂದೆ ಸಾಗುವ ಅನಿವಾರ್ಯತೆ ಎಲ್ಲರಿಗೂ ಇದೆ.
ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಕುತ್ತಾರು ಪ್ರದೇಶದಲ್ಲಿ ವಸತಿ ಸಂಕೀರ್ಣಗಳು, ವಾಣಿಜ್ಯ ಕಟ್ಟಡಗಳು , ಅಂಗಡಿ, ಮನೆ ಎಲ್ಲವೂ ಅಧಿಕ ಸಂಖ್ಯೆಯಲ್ಲಿ ತಲೆ ಎತ್ತಿನಿಂತಿದೆ. ಆದರೆ ವಿಪರ್ಯಾಸವೆಂದರೆ ಅಷ್ಟೂ ಕಟ್ಟಡಗಳಲ್ಲಿನ ಜನ ಉಪಯೋಗಿಸಿ ಬಿಸಾಡಿದ ಸೊತ್ತುಗಳಿಗೆ ಮುಕ್ತಿ ದೊರಕಿಸಲು ಯಾವುದೇ ವ್ಯವಸ್ಥೆಯಿಲ್ಲ. ಸಂಬಂಧಪಟ್ಟ ಪಂಚಾಯಿತಿ ಕೂಡಾ ಸರಕಾರದ ಅನುದಾನವಿಲ್ಲವೆಂದು ಕೈಚೆಲ್ಲಿ ನಿಂತಿದೆ.
ಸದ್ಯ ಬೆಟ್ಟದಂತೆ ಇದ್ದ ಕಸದ ರಾಶಿಗೆ ಮುನ್ನೂರು ಪಂಚಾಯಿತಿ ಅಧ್ಯಕ್ಷೆ ರೂಪಾ.ಆರ್. ಶೆಟ್ಟಿ ಅವರು ಓರ್ವ ಯುವಕನ ಸಹಕಾರದೊಂದಿಗೆ ಸೇರಿಕೊಂಡು ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಗುಡಿಸಿ ಬೆಂಕಿ ಇಟ್ಟು ಪರಿಸರವನ್ನು ಶುಚಿಗೊಳಿಸಿದ್ದಾರೆ. ಜನ ಕಸದ ರಾಶಿಯಿಂದ ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಪಂಚಾಯಿತಿಗೆ ಬರುವ ಅನುದಾನದಲ್ಲಿ ವಿಲೇವಾರಿ ನಡೆಸಲು ಸಾಧ್ಯವಾಗುತ್ತಿಲ್ಲ. ಶಾಲಾ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಅದನ್ನು ಬೆಂಕಿ ಹಾಕಿದ್ದೇವೆ. ಮುಂದೆ ಜನ ಕಸಗಳನ್ನು ಇಲ್ಲಿ ಹಾಕದಂತೆ ಎಚ್ಚರವಹಿಸಿ, ಮನೆಯಲ್ಲೇ ಅದಕ್ಕೆ ಮುಕ್ತಿ ಕಾಣಿಸಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.