ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು:ಯುವಕರು ತಮ್ಮ ಬಿಡುವಿನ ಸಮಯದಲ್ಲಿ ಆಧ್ಯಾತ್ಮ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿದಲ್ಲಿ ದುಷ್ಟಟ ಮತ್ತು ಸಮಾಜದ್ರೋಹಿ ಚಟುವಟಿಕೆಗಳಿಂದ ದೂರವಿರಲು ಸಾಧ್ಯ ಎಂದು ಆರೋಗ್ಯ ಸಚಿವ ಯು.ಟಿ ಖಾದರ್ ಅಭಿಪ್ರಾಯ ಪಟ್ಟರು .
ತೊಕ್ಕೊಟ್ಟು ಕಾಪಿಕಾಡು ಗಾಂಧಿನಗರದ ಶ್ರೀ ಸ್ವಾಮಿ ಈಶ್ವರಾನಂದ ಭಜನಾ ಮಂಡಳಿಯ ನಲ್ವತ್ತೊಂದನೇ ವಾರ್ಷಿಕ ಭಜನಾ ಮಂಗಳೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಯು.ಟಿ ಖಾದರ್ ಅವರು ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು .ಭಜನಾ ಮಂಗಳೋತ್ಸವವು ಊರಿನಲ್ಲಿ ಪರಸ್ಪರ ಒಗ್ಗಟ್ಟು ಮತ್ತು ಸಾಮರಸ್ಯತೆ ತರುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ .ಒಬ್ಬರಿಗೊಬ್ಬರು ಮುನಿಸಿಕೊಂಡವರು ಪರಸ್ಪರ ಕ್ಷಮಿಸಿ ಮತ್ತೆ ಸಹಬಾಳ್ವೆ ನಡೆಸಲು ಸೇತುವಾಗುತ್ತದೆ .ಮುಖ್ಯವಾಗಿ ಹದಿಹರೆಯದ ಯುವಕರು ಇಂದಿನ ದಿವಸಗಳಲ್ಲಿ ಕಾಲಹರಣಕ್ಕೆಂದು ದುಷ್ಟಟಗಳಿಗೆ ಬಲಿಯಾಗಿ ,ಕೊನೆಗೆ ಸಮಾಜಘಾತುಕ ಚಟುವಟಿಕೆಗಳಲ್ಲಿ ಭಾಗಿಯಾಗಿ ಸಮಾಜಕ್ಕೆ ಮಾರಕವಾಗುತ್ತಿದ್ದಾರೆ.ಯುವಕರು ಕಲಿಕೆಯ ಜೊತೆಗೆ ತಮ್ಮನ್ನು ಆಧ್ಯಾತ್ಮದೆಡೆ ತೊಡಗಿಸಿಕೊಂಡಾಗ ಸಮಾಜದಲ್ಲಿ ಅವರು ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಸಾಧ್ಯ ಎಂದು ಹೇಳಿದರು .
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ ಅಧ್ಯಕ್ಷತೆ ವಹಿಸಿದ್ದರು , ತುಳು ಜನಪದ ವಿದ್ವಾಂಸ ಕೆ.ಕೆ ಪೇಜಾವರ ,ಉಳ್ಳಾಲ ಪುರಸಭಾ ಮಾಜಿ ಉಪಾಧ್ಯಕ್ಷೆ ಕು.ಭವಾನಿ .ಸ್ವಾಮಿ ಈಶ್ವರಾನಂದ ಭಜನಾ ಮಂಡಳಿ ಅಧ್ಯಕ್ಷ ಯು .ಹರಿಶ್ಚಂದ್ರ , ಮಹಿಳಾ ಮಂಡಳದ ಅಧ್ಯಕ್ಷೆ ಶ್ರೀಮತಿ ವಿದ್ಯಾ , ಜಯರಾಜ್ ಮೊದಲಾದವರು ಉಪಸ್ಥಿತರಿದ್ದರು .
ವಿಶ್ವೇಶ್ವರ ಉಳ್ಳಾಲ್ ವಾರ್ಷಿಕ ವರದಿ ವಾಚಿಸಿದರು . ಶ್ರೀಧರ್ ಉಳ್ಳಾಲ್ ಸ್ವಾಗತಿಸಿ ,ಸಂದೀಪ್ ಎಸ್ ವಂದಿಸಿದರು.ಸುದರ್ಶನ್ ಮತ್ತು ಪುಷ್ಪ ಜಗನ್ನಾಥ್ ನಿರೂಪಿಸಿದರು .