Site icon Ullalavani

ಪಜೀರ್‍ನಲ್ಲಿ ಕ್ರಿಸ್‍ಮಸ್ ಸಂದೇಶ ವಾಹನ ಜಾಥಾ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಪಜೀರ್‍: ಏಸು ಕ್ರಿಸ್ತ ಹುಟ್ಟು ಹಬ್ಬದ ಪ್ರಯುಕ್ತ ಪಜೀರ್ ಮೆರ್ಸಿಯಮ್ಮನವರ ಇಗರ್ಜಿ ವತಿಯಿಂದ ನಡೆದ ಕ್ರಿಸ್‍ಮಸ್ ಸೌಹಾರ್ದ ಸಂದೇಶ ವಾಹನ ಜಾಥಾ ಗುರುವಾರ ಸಮಾಪನಗೊಂಡಿತು.

ಪಜೀರು ಇಗರ್ಜಿಯ ಧರ್ಮಗುರು ವಂದನೀಯ ರೆ.ಫಾ.ವಲೇರಿಯನ್ ಪಿಂಟೋ ಬುಧವಾರ ಪಜೀರ್ ಚರ್ಚ್ ವಠಾರದಲ್ಲಿ ಜಾಥಾ ಉದ್ಘಾಟಿಸಿದರು. ಕ್ರಿಸ್ಮಸ್ ಪ್ರಯುಕ್ತ ಸಂದೇಶ ಸಾರುವ ಮೂಲಕ ಸಮಾಜದಲ್ಲಿ ಶಾಂತಿ ಸ್ಥಾಪಿಸುವ ಉದ್ದೇಶದಿಂದ ಜಾಥಾ ಹಮ್ಮಿಕೊಳ್ಳಲಾಗಿದೆ. ಕಳೆದ ವರ್ಷ ಒಂದು ದಿನ ಜಾಥಾ ನಡೆದಿದ್ದರೆ, ಈ ಬಾರಿ ಎರಡು ದಿನ ನಡೆಸಲಾಗಿದೆ ಎಂದು ಹೇಳಿದರು.

ಇನೋಳಿ, ಧರ್ಮನಗರ, ಮಲಾರ್ ಪದವು, ಗ್ರಾಮಚಾವಡಿ, ಪಾವೂರು ಕಡವಿನ ಬಳಿ, ಅಸೈಗೋಳಿ, ಕೊಣಾಜೆ, ಬೆಂಗೋಡಿಪದವು, ಮುಡಿಪು ಜಂಕ್ಷನ್ ಹಾಗೂ ಬೋಳಿಯಾರ್ ಜಂಕ್ಷನ್‍ನಲ್ಲಿ ಎರಡು ದಿನ ವಾಹನ ಜಾಥಾ ನಡೆದು ಕೊನೆಗೆ ಚರ್ಚ್‍ನಲ್ಲಿ ಸಮಾಪನಗೊಂಡಿತು. ನಿಗದಿತ ಪ್ರದೇಶದಲ್ಲಿ ಸರ್ವ ದರ್ಮದ ಮುಖಂಡರು ಸಂದೇಶ ನೀಡಿದರು. ಕ್ರಿಸ್ತ ಜನನದ ಶುಭ ಸಂದೇಶ ಸಾರುವ ಹಾಡು, ನೃತ್ಯ ರೂಪಕ ಪ್ರದರ್ಶನ ವಾಹನದಲ್ಲೇ ಹಮ್ಮಿಕೊಳ್ಳಲಾಗಿತ್ತು.

ಪ್ರಮುಖರಾದ ನೆಲ್ಸನ್ ಲೋಬೋ, ವಲೇರಿಯನ್ ಡಿಸೋಜ, ಹಿಲರಿ ಡಿಸೋಜ, ನೆಲ್ಸನ್ ಲೋಬೋ, ಪಾವ್ಲ್ ಡಿಸೋಜ, ವಿಕ್ಟರ್ ಮೊಂತೆರೋ, ಸಂತೋಷ್ ಡಿಸೋಜ, ಫೆಲಿಕ್ಸ್ ಮೊಂತೆರೋ, ಲವಿನಾ ದಾಂತಿ ಭಾಗವಹಿಸಿದ್ದರು. ವಿವಿಧ ಕಡೆಗಳಲ್ಲಿ ಮುಖಂಡರಾದ ಗೋಪಾಲ ಶೆಟ್ಟಿ ಬಾರ್ಲ ಇನೋಳಿ, ಐ.ಅಬ್ದುಲ್ ಖಾದರ್, ಸುಭಾಷ್ ಧರ್ಮನಗರ, ಮಹಮ್ಮದ್ ಮೋನು, ಚಂದ್ರಹಾಸ ಪೂಂಜ ಕಿಲ್ಲೂರು, ಫಿರೋಜ್ ಮಲಾರ್, ನಾರಾಯಣ ಪೂಜಾರಿ, ಅಬ್ದುಲ್ ಲತೀಫ್, ಮಹಮ್ಮದ್ ಮುಸ್ತಫಾ ಹರೇಕಳ, ವಾಮನ್ ರಾಜ್ ಪಾವೂರು, ಅಬ್ದುಲ್ ರಹಿಮಾನ್ ಕೋಡಿಜಾಲ್, ಸೀತಾರಾಮ ಶೆಟ್ಟಿ, ಉಮ್ಮರ್ ಪಜೀರ್, ಅಬ್ದುಲ್ ಜಲೀಲ್, ಜಗದೀಶ್ ಆಳ್ವ, ಅಬ್ದುಲ್ ಜಬ್ಬಾರ್ ಮೊದಲಾದವರು ಮಾತನಾಡಿದರು. ವಿನ್ಸೆಂಟ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

Exit mobile version