ದೇರಳಕಟ್ಟೆ : ದೇರಳಕಟ್ಟೆಯಿಂದ ಅಡ್ಕರೆಪಡ್ಪು ಮೂಲಕ ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯ ತಲುಪುವ ರಸ್ತೆಯ ಡಾಮರೀಕರಣಕ್ಕೆ ಆಗ್ರಹಿಸಿ ತುಳುನಾಡ ರಕ್ಷಣಾ ವೇದಿಕೆ ಹಾಗೂ ಅಡ್ಕರೆಪಡ್ಪು, ಮಾರಿಯಮ್ಮಗೋಳಿ, ಬೆಲ್ಮ ಬರಿಕೆ(ಪೆಲತ್ತಡಿ), ಬದ್ಯಾರ್, ಕೊಣಾಜೆ ಸೈಟ್ನ ನಾಗರಿಕರು, ರಿಕ್ಷಾ ಚಾಲಕರು ಹಾಗೂ ಮಾಲಕರು ಜಂಟಿಯಾಗಿ ದೇರಳಕಟ್ಟೆಯಲ್ಲಿ ನಡೆಸಿದ ಪ್ರತಿಭಟನೆ ಕೆಲಕಾಲ ಬಿಗುವಿನ ವಾತಾವರಣ ನಿರ್ಮಿಸಿತು.
ಸಚಿವರು ಹೆಚ್ಚಿನ ಒಲವು ತೋರಿಸುವ ಮೂಲಕ ಬೆಳ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದಾರೆ, ಏಳಿಗೆಯನ್ನು ಸಹಿಸಲಾಗದವರು ರಾಜಕೀಯ ದುರುದ್ದೇಶ ಇಟ್ಟುಕೊಂಡು ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದು ಬೆಳ್ಮ ಪಂಚಾಯಿತಿ ಉಪಾಧ್ಯಕ್ಷ ಅಬ್ದುಲ್ ಸತ್ತಾರ್ ಹೇಳಿದ್ದಾರೆ. ಬೆಳ್ಮ ಗ್ರಾಮಸ್ಥರು ಗ್ರಾಮದಲ್ಲಿ ಅಭಿವೃದ್ಧಿ ನಡೆಯುತ್ತಲೇ ಇದೆ. ಕೊಣಾಜೆಯ ಸಮಸ್ಯೆಯನ್ನು ಮುಂದಿಟ್ಟುಕೊಂಡು ಬೆಳ್ಮ ವ್ಯಾಪ್ತಿಯಲ್ಲಿ ಪ್ರತಿಭಟನೆ ನಡೆಸಬಾರದು ಎಂದು ತಡೆಯೊಡ್ಡಲು ಯತ್ನಿಸಿದರು. ಅಲ್ಲದೆ ಧಿಕ್ಕಾರಗಳನ್ನು ಕೂಗಿ ಪ್ರತಿಭಟನೆಗೆ ತಡೆಯೊಡ್ಡಲು ಮುಂದಾದಾಗ ಕೊಣಾಜೆ ಪೊಲೀಸರು ಮಧ್ಯಪ್ರವೇಶಿಸಿ ಸಮಾಧಾನಪಡಿಸಲು ಯತ್ನಿಸಿದರು. ಆದರೂ ಪ್ರತಿಭಟನೆಯನ್ನು ನಿಲ್ಲಿಸಿಯೇ ಸಿದ್ಧ ಎಂದು ತಂಡವೊಂದು ಮುನ್ನುಗ್ಗುತ್ತಿದ್ದಂತೆ ಕೊಣಾಜೆ ಎಸ್.ಐ ಸುಧಾಕರ್ ಅವರು ಸಮಾಧಾನಿಸಿ ಸ್ಥಳದಿಂದ ಎಲ್ಲರನ್ನು ತೆರಳುವಂತೆ ಮಾಡಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ತು.ರ.ವೇ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಮಾತನಾಡಿ ಅಧಿಕಾರಿಗಳ ಉದಾಸೀನತೆಯಿಂದ ಕಾಮಗಾರಿಗಳು ವಿಳಂಬವಾಗುತ್ತಿದೆ. ರಾಜಕೀಯ ಮತ್ತು ವ್ಯಕ್ತಿಯ ವಿರುದ್ಧ ಹೋರಾಟವಲ್ಲ, ವ್ಯವಸ್ಥೆ ವಿರುದ್ಧ ಹೋರಾಟವಾಗಿದೆ. ಅಧಿಕಾರಿಗಳ ಬೇಜವಾಬ್ದಾರಿತನದಿಂದ ಜನ ತೊಂದರೆಗೀಡಾಗುತ್ತಿದ್ದು, ಶೀಘ್ರವೇ ತೀರಾ ನಾದುರಸ್ತಿಯಲ್ಲಿರುವ ರಸ್ತೆಯ ಡಾಮರೀಕರಣಕ್ಕೆ ಸಂಬಂಧಪಟ್ಟವರು ಮುಂದಾಗಬೇಕು ಎಂದು ಒತ್ತಾಯಿಸಿದರು.
ಗ್ರಾಮಸ್ಥರೋರ್ವರು ಮಾತನಾಡಿ ಹಲವು ವರ್ಷಗಳಿಂದ ಹೊಂಡಗುಂಡಿಗಳಿಂದ ಕೂಡಿರುವ ರಸ್ತೆಯಲ್ಲೇ ಎಲ್ಲರಿಗೂ ಪ್ರಯಾಣಿಸುವ ಅನಿವಾರ್ಯತೆ ಇದೆ. ಇದರಿಂದ ಹಲವು ಜೀವಹಾನಿಯೂ ಇಲ್ಲಿ ಸಂಭವಿಸಿದೆ. ಮನವಿ ಮಾಡಿ ಪ್ರಯೋಜನವಿಲ್ಲದೇ ಇರುವುದರಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಯಿತು. ತಿಂಗಳೊಳಗೆ ಡಾಮರೀಕರಣ ಆಗದೇ ಇದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆಯನ್ನು ನೀಡಿದರು.
ಈ ಸಂದರ್ಭ ತು.ರ.ವೇ ಮಹಿಳಾ ಘಟಕದ ಜ್ಯೋತಿಕಾ ಜೈನ್, ಯುವಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿರಾಜ್ ಅಡ್ಕರೆ, , ಕೊಣಾಜೆ ಘಟಕದ ಅಧ್ಯಕ್ಷ ಮಹಮ್ಮದ್ ನಿಯಾಝ್, ರಹೀಂ, ದೇವದಾಸ್, ರಾಘವ್ ಮಾಸ್ತರ್, ಗುರುಪ್ರಸಾದ್, ಇಸ್ಮಾಯಿಲ್, ಉಸ್ಮಾನ್, ಶರೀಫ್, ಮುಸ್ತಾಫ ಮೊದಲಾದವರು ಉಪಸ್ಥಿತರಿದ್ದರು.
