ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಸಮುದ್ರ ತೀರದಲ್ಲಿ ನಾಡದೋಣಿಯವರು ಮೀನುಗಾರಿಕೆ ಮಾಡುವ ಪ್ರದೇಶದಲ್ಲಿ ದೊಡ್ಡ ಬೋಟಿನ `ಬುಲ್ ಟ್ರಾಲ್’ ಬಲೆ ಹಾಕಿ ಮೀನಿನ ಸಂತತಿಯನ್ನು ನಾಶ ಮಾಡಿ ಉಳ್ಳಾಲ ಪ್ರದೇಶದ ಮೀನುಗಾರರಿಗೆ ತೊಂದರೆ ನೀಡುತ್ತಿದ್ದು, ಈ ಬಗ್ಗೆ ಉಳ್ಳಾಲ ಮೊಗವೀರಪಟ್ನದ ನಾಡದೋಣಿ ಮೀನುಗಾರಿಕಾ ಒಕ್ಕೂಟದ ಮಾಲಕರು ಮತ್ತು ಕಾರ್ಮಿಕರು ಬುಲ್ ಟ್ರಾಲ್ ಅನ್ನು ನಿಷೇಧಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಇದರಿಂದ ನಾಡದೋಣಿ ಮೀನುಗಾರಿಕೆಯು ಸಂಪೂರ್ಣ ನಶಿಸಿಹೋಗುವ ಪರಿಸ್ಥಿತಿ ಎದುರಾಗಿದೆ. ನಾಡದೋಣಿಯವರು ಬಲೆ ಹಾಕಿದ ಸ್ಥಳದಲ್ಲಿ ಯಾವುದೇ ಮೀನು ಸಿಗದೆ ಬಹಳ ಕಷ್ಟವನ್ನು ಅನುಭವಿಸುತ್ತಿದ್ದಾರೆ. ನಾಡದೋಣಿಯವರು ಮೀನುಗಾರಿಕೆಗೆ ಉಪಯೋಗಿಸುವ ಬಲೆಯನ್ನು ದೊಟ್ಟ ಬೋಟಿನ ಬೋರ್ಡಿಗೆ ಹಾಕಿ ಎಳೆದುಕೊಂಡು ಹೋಗಿ ಮೀನುಗಾರಿಕೆಗೆ ಬಲೆ ಇಲ್ಲದ ಹಾಗೆ ಮಾಡುತ್ತಿದ್ದಾರೆ. ದೊಡ್ಡ ಬೋಟಿನವರಿಗೆ ಆ ಬಲೆ ಸಿಕ್ಕಿದಲ್ಲಿ ಅದನ್ನು ನೀರಿಗೆ ಎಸೆದು ಕಿಡಿಗೇಡಿ ಕೃತ್ಯ ಎಸಗುತ್ತಿದ್ದಾರೆ. ಇದರಿಂದ ಒಂದು ಕಡೆ ಮೀನುಗಾರಿಕೆ ಇಲ್ಲದೆ ಇನ್ನೊಂದು ಕಡೆ ಉಪಯೋಗಿಸುವ ಬಲೆಯನ್ನು ಕಳೆದುಕೊಂಡು ನಷ್ಟ ಅನುಭವಿಸಬೇಕಾಗಿದೆ.
ಉಳ್ಳಾಲ ಮೊಗವೀರಪಟ್ನದಲ್ಲಿ 12 ನಾದೋಣಿಗಳಿದ್ದು, ಅದನ್ನು ಅವಲಂಬಿತ ಕುಟುಂಬಗಳು ಮೀನು ಸಿಗದೆ ಅನ್ನಕ್ಕಾಗಿ ಪರದಾಡಬೇಕಾದ ಅನಿವಾರ್ಯತೆಯೂ ಮುಂದೆ ಎದುರಾಗಬಹುದು. ಬುಲ್ ಟ್ರಾಲ್ ನ ಹತ್ತು ಜೋಡಿ ಬೋಟಿನವರಲ್ಲಿ ಎಷ್ಟು ವಿನಂತಿಸಿದರೂ ಜಗಳ ಮಾಡಿ ಹಠ ಸಾಧಿಸಿ ಅವೈಜ್ಞಾನಿಕವಾಗಿ ಮೀನುಗಾರಿಕೆಯನ್ನು ಮುಂದುವರಿಸಿತ್ತಿದ್ದಾರೆ ಎಂಬ ಆರೋಪ ನಾಡದೋಣಿಯವರದ್ದಾಗಿದೆ.
ಇವರಿಂದಾಗಿ ಉಚ್ಚಿಲ ಸೋಮೇಶ್ವರದಿಂದ ಹೆಜಮಾಡಿಯವರೆಗೆ ಸುಮಾರು 1000 ನಾದೋಣಿಗಳು, 150 ಪರ್ಸಿನ್ ಬೋಟುಗಳು, 10 ಕೈರಂಪೂಣಿ ದೋಣಿಗಳು, 500 ಸಿಂಗಲ್ ಟ್ರಾಲ್ ಬೋಟುಗಳಲ್ಲಿ ದುಡಿಯುವ ಸುಮಾರು 10,000 ಮೀನುಗಾರರು ಉದ್ಯೋಗವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ.
ಬುಲ್ ಟ್ರಾಲ್ ಮೀನುಗಾರಿಕೆಗೆ ನಿರ್ಬಂಧವಿದ್ದರೂ ಅದನ್ನು ಲೆಕ್ಕಿಸದೆ ಮೀನುಗಾರಿಕೆ ಮಾಡುತ್ತಿದ್ದಾರೆ. ಮಲ್ಪೆ ಮತ್ತು ಕೇರಳದ ಗಡಿಪ್ರದೇಶದಲ್ಲಿ ಇದಕ್ಕೆ ಸಂಪೂರ್ಣ ನಿಷೇಧವಿದೆ, ಆದರೆಮಂಗಳೂರಿನಲ್ಲಿ ಮಾತ್ರ ಮೀನುಗಾರಿಕೆಯನ್ನು ನಡೆಸುತ್ತಲೇ ಇದ್ದಾರೆ. 2014 ರಲ್ಲಿ ಇವರ ವಿರುದ್ಧ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಮುಂದಿನ ದಿನಗಳಲ್ಲಾದರೂ ಇಂತಹ ಅವೈಜ್ಞಾನಿಕ ಮೀನುಗಾರಿಕೆಯನ್ನು ನಿಷೇಧಿಸಬೇಕೆಂಬ ಒತ್ತಾಯ ಒಕ್ಕೂಟದಿಂದ ಕೇಳಿಬಂದಿದೆ.
ಬುಲ್ ಟ್ರಾಲ್ ನಿಂದ ಆಗುವ ದುಷ್ಪರಿಣಾಮಗಳು
ಟ್ರಾಲಿಂಗ್ ನಿಂದ ಮೀನಿನ ಮೊಟ್ಟೆ, ಮೀನಿನ ಮರಿ ಸಂಪೂರ್ಣ ನಾಶ, ಸಮುದ್ರದಲ್ಲಿರುವ ಇತರ ಜಲಚರಗಳಾದ ಆಮೆ, ಕಡಲಹಂದಿ, ಡಾಲ್ಫಿನ್ ಗಳು ನಾಶ, ಮೀನುಗಾರಿಕೆಗೆ ಹೆದರಿ ಮೀನುಗಳು ದೂರದ ಸಮುದ್ರಕ್ಕೆ ಓಡುವುದರಿಂದ ಮೀನಿನ ಸಮೂಹ ತೆಪ್ಪವಾಗದೆ ಪರ್ಸಿನ್ ಮೀನುಗಾರರು ಉದ್ಯೋಗವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ, ಸಮುದ್ರದ ತಳಭಾಗದಿಂದ ಹಿಡಿದು ಮೇಲ್ಭಾಗದವರೆಗೆ ಬಲೆ ಹೋಗುವುದರಿಂದ ಮತ್ತು ಬುಲ್ ಟ್ರಾಲ್ ಬೋಟಿನವರು ಸಂಜೆಯಿಂದ ಸೂರ್ಯೋದಯದವರೆಗೆ ಟ್ರಾಲಿಂಗ್ ಮಡುವುದರಿಂದ ಬೆಳಿಗ್ಗೆಮೀನುಗಾರಿಕೆಗೆ ಬರುವ ನಾಡದೋಣಿ ಮತ್ತು ಸಿಂಗಲ್ ಟ್ರಾಲ್ ಬೋಟಿನವರಿಗೆ ಮೀನು ಸಿಗದೆ ನಷ್ಟ ಅನುಭವಿಸುವಂತಾಗಿದೆ,