ಚೆನ್ನೈ: ಕುಂಭದ್ರೋಣ ಮಳೆಯ ಪ್ರವಾಹಕ್ಕೆ ತತ್ತರಿಸಿದ ತಮಿಳುನಾಡು ಸಂಪೂರ್ಣ ಜಲಾವೃತಗೊಂಡಿದೆ. ಮನೆ, ಕಚೇರಿ, ಶಾಪಿಂಗ್ ಮಾಲ್ ಹೀಗೆ ಪ್ರಮುಖ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಅಪಾರ ಪ್ರಮಾಣದ ಆಸ್ತಿ-ಪಾಸ್ತಿಗಳು ನಷ್ಟಹೊಂದಿದೆ.
ಚೆನ್ನೈನಲ್ಲಿ ನಿರಂತರವಾಗಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದಾಗಿ ಇದುವರೆಗೂ 185 ಮಂದಿ ಜನ ಸಾವನ್ನಪ್ಪಿದ್ದು, ಅನೇಕ ಜನರು ಪ್ರವಾಹದಲ್ಲಿ ಸಿಲುಕಿಹಾಕಿಕೊಂಡಿದ್ದಾರೆ.
ಪ್ರಮುಖ ನಗರಗಳಲ್ಲಿ ತುಂಬಿ ಹರಿಯುತ್ತಿರುವ ನೀರಿನಿಂದಾಗಿ ಜಲಾವೃತಗೊಂಡಿರುವ ಮೆಟ್ರೋ ಸಿಟಿ ಇದೀಗ ದ್ವೀಪ ಪ್ರದೇಶವಾಗಿದ್ದು, ದೊಣಿ ಮತ್ತು ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯ ನಡೆಯುತ್ತಿದೆ. ಪ್ರವಾಹದಲ್ಲಿ ಸಿಲುಕಿ ಹಾಕಿರುವ ಜನರ ರಕ್ಷಣೆಗೆಂದು ನೌಕದಳ ಸಜ್ಜಾಗಿದೆ.
ದಶಕಗಳ ನಂತರ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದಾಗಿ ಪ್ರಮುಖ ನದಿಗಳು ತುಂಬಿ ಹರಿಯುತ್ತಿರುವ ಕಾರಣ ಪ್ರವಾಹದ ಭೀತಿಯನ್ನು ಎದುರಿಸಬೇಕಾಗುತ್ತದೆ ಎಂದು ಹವಾಮಾನ ವರದಿ ತಿಳಿಸಿದೆ. ಇನ್ನು ನಿರಂತರವಾಗಿ 24 ಗಂಟೆಗಳ ಕಾಲ ತಮಿಳುನಾಡಿನಾದ್ಯಂತ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಜನರು ನೀರು ಹಾಗೂ ಆಹಾರಕ್ಕಾಗಿ ಪರದಾಡುತ್ತಿದ್ದು,ಆಹಾರ ಹಾಗೂ ನೀರನ್ನು ಸರಬರಾಜು ಮಾಡುವ ಕೆಲಸ ನಡೆಯುತ್ತಿದೆ.
ವರುಣ ಆರ್ಭಟಕ್ಕೆ ಮಹಾನಗರಿ ಜಲಾವೃತಗೊಂಡಿರುವ ಹಿನ್ನಲೆಯಲ್ಲಿ ಚೆನೈನ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆಯನ್ನು ಮುಂದುವರಿಸಲಾಗಿದ್ದು, ರೈಲು ಹಾಗೂ ರಸ್ತೆ ಸಂಚಾರ ಸಂಪೂರ್ಣ ಬಂದ್ ಸ್ಥಗಿತಗೊಳಿಸಲಾಗಿದೆ., ಮೊಬೈಲು ನೆಟ್ವರ್ಕ್ಗಳ ಕಡಿತಗೊಳಿಸಿದ ಕಾರಣ , ಮನೆಯವರನ್ನು ಸ್ನೇಹಿತರನ್ನು, ಬಂಧುಗಳನ್ನು ಸಂಪರ್ಕಿಸಲಾಗದೇ ಜನರು ಒದ್ದಾಡುವ ಸ್ಥಿತಿ ನಿರ್ಮಾಣಗೊಂಡಿದೆ