Site icon Ullalavani

ಕಾರ್ಮಿಕ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಸಿಐಟಿಯು ಪ್ರತಿಭಟನೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ತೊಕ್ಕೊಟ್ಟು: ರಾಜ್ಯದ ಕಾರ್ಮಿಕ ಸಚಿವ ಪರಮೇಶ್ವರ್ ನಾಯಕ್ ಕಂಪೆನಿ ಮಾಲೀಕರ ಜತೆಗೆ ಶಾಮೀಲಾಗಿ ಅವರ ಹಿತಾಸಕ್ತಿಯನ್ನು ಕಾಪಾಡುವುದರಿಂದ ಕಾರ್ಮಿಕರು ವಂಚನೆಗೊಳಗಾಗುತ್ತಿದ್ದು, ಇಂತಹ ಸಚಿವರನ್ನು ಸಂಪುಟದಿಂದ ಕೂಡಲೇ ಕೈಬಿಡಬೇಕು ಎಂದು ಸಿಐಟಿಯುನ ಉಳ್ಳಾಲ ವಲಯದ ಪ್ರಧಾನ ಕಾರ್ಯದರ್ಶಿ ಯು.ಜಯಂತ್ ನಾಯ್ಕ್ ಹೇಳಿದ್ದಾರೆ.

ರಾಜ್ಯ ಕಾರ್ಮಿಕ ಸಚಿವ ಪರಮೇಶ್ವರ್ ನಾಯಕ್ ಅವರ ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ ತೊಕ್ಕೊಟ್ಟಿನ ನಾಡ ಕಛೇರಿ ಮುಂಭಾಗದಲ್ಲಿ ಸೋಮವಾರ ಸಿಐಟಿಯು ನೇತೃತ್ವದಲ್ಲಿ ಹಮ್ಮಿಕೊಂಡ ಪ್ರತಿಭಟನಾ ಪ್ರದರ್ಶನದಲ್ಲಿ ಭಾಗವಹಿಸಿ ಮಾತನಾಡಿದರು.

ರಾಜ್ಯ ಕಾರ್ಮಿಕ ಸಚಿವರು ಬೀಡಿ ಮಾಲೀಕರೊಂದಿಗೆ ಶಾಮೀಲಾಗಿ ಈ ಭಾರಿಯ ತುಟ್ಟಿ ಭತ್ಯೆ ಕಾರ್ಮಿಕರಿಗೆ ನೀಡದಂತೆ ತಡೆಹಿಡಿದಿದ್ದಾರೆ. ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗಿರುವ ಈ ದಿನಗಳಲ್ಲಿ ಕಾರ್ಮಿಕರಿಗೆ ವೇತನ ಏರಿಕೆಯಾಗದಿದ್ದಲ್ಲಿ ಅವರ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ ಎಂದು ಸರಕಾರವನ್ನು ಪ್ರಶ್ನಿಸಿದರು.

ಸಿಐಟಿಯು ಮುಖಂಡ ಬಾಬು ಪಿಲಾರ್ ಮಾತನಾಡಿ ಸರಕಾರವು ಸಾರಿಗೆ ರಂಗದ ಕಾರ್ಮಿಕರ ಕಾನೂನುಬಧ್ಧ ಹಕ್ಕುಗಳನ್ನು ಹತ್ತಿಕ್ಕಲು ಎಸ್ಮಾ ಕಾಯಿದೆಯನ್ನು ಜನತೆಯ ಮೇಲೆ ಹೇರಿದೆ.ಗುತ್ತಿಗೆ ಕಾರ್ಮಿಕರನ್ನು ಎಲ್ಲಾ ಕಡೆ ಉಪಯೋಗಿಸಿ ಮಾಲೀಕರಿಗೆ ಲಾಭಗಳಿಸಲು ಅವಕಾಶ ಕಲ್ಪಿಸುತ್ತಿದೆ.ಅವರಿಗೆ ಇರುವ ಚಿಕ್ಕಪುಟ್ಟ ಕಾನೂನು ಬದ್ದ ಸವಲತ್ತುಗಳನ್ನು ನೀಡಲು ನಿರಾಕರಣೆ ಮಾಡಲಾಗಿದ್ದು ,ಅವರುಗಳನ್ನು ಖಾಯಂ ಕಾರ್ಮಿಕರನ್ನಾಗಿಸಲು ಶಾಸನವನ್ನು ತರಬೇಕೆಂದು ಒತ್ತಾಯಿಸಿದರು.

ಈ ವೇಳೆ ಪಕ್ಷದ ಮುಖಂಡರಾದ ಕೆ.ಕೃಷ್ಣಪ್ಪ ಸಾಲಿಯಾನ್ ,ಇಬ್ರಾಹಿಂ ಮದಕ ,ವಿಲಾಸಿನಿ ತೊಕ್ಕೊಟ್ಟು ಮುಂತಾದವರು ಭಾಗವಹಿಸಿದ್ದರು.

Exit mobile version