ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ವಿಧಾನಸಭೆ: ರೈತರ ಆತ್ಮಹತ್ಯೆಯ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೀಡಿ ವಿವಾದದ ಕಿಡಿ ಹೊತ್ತಿಸಿದ್ದ ಶಾಸಕ ಅಶೋಕ್ ಖೇಣಿ ಇದೀಗ ಮತ್ತೊಮ್ಮೆ ಅದೇ ಹೇಳಿಕೆಯನ್ನು ಪುನರುಚ್ಚಿಸುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ.
ಬರ ಹಾಗೂ ರೈತರ ಆತ್ಮಹತ್ಯೆ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಖೇಣಿ, ಸಾಲ ಮತ್ತು ಬರ ರೈತರ ಆತ್ಮಹತ್ಯೆಗೆ ಕಾರಣವಲ್ಲ, ಕುಡಿತ ಜೂಜು, ಮಕ್ಕಳ ಮದುವೆಯಾಗದಿರುವುದೂ ಇವರ ಆತ್ಮಹತ್ಯೆಗೆ ಪ್ರಮುಖ ಕಾರಣ ಎಂದು ತಿಳಿಸಿದ್ದಾರೆ.
ಸದನದಲ್ಲಿ ಖೇಣಿ ಹೇಳೆಕೆಯ ಬಗ್ಗೆ ಆಕ್ರೋಶಗಳು ಬುಗಿಲೆದ್ದು ಜೆಡಿಎಸ್ ನಾಯಕರು ಖೇಣಿ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಮತ್ತು ರೈತರ ಆತ್ಮಹತ್ಯೆಯ ಬಗ್ಗೆ ಮಾತನಾಡಿದ ಕಾರಣ ಅವರು ಕ್ಷಮೆಯಾಚಿಸಬೇಕು ಎಂದು ಧರಣಿ ನಡೆಸಿದರು. ಸ್ಪೀಕರ್ ಪೀಠದಲ್ಲಿದ್ದ ಡಾ.ಮಾಲಕರೆಡ್ಡಿಯವರು ಖೇಣಿ ಅವರ ಮಾತುಗಳನ್ನು ಕಡತದಿಂದ ತೆಗೆಯಲು ಸೂಚನೆ ನೀಡಿದ್ದರಿಂದ ಜೆಡಿಎಸ್ ಸದಸ್ಯರು ಪ್ರತಿಭಟನೆ ಹಿಂಪಡೆದರು.
ಆದರೂ ಪಟ್ಟು ಬೀಡದ ಖೇಣಿ ನಾನೂ ಏನು ಮಾತನಾಡಿದರೂ ಅದನ್ನು ಜೆಡಿಎಸ್ ಒಪ್ಪುವುದಿಲ್ಲ ನಾನು ಪೂರ್ತಿ ಮಾತು ಮುಗಿಸಿದ ನಂತರ ತಪ್ಪಿದ್ದರೆ ಹೇಳಿ ರೈತರು ಎಂದರೆ ಗಾಡ್ ಇದ್ದಂತೆ. ನಾವು ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಪರಿಹಾರ ಕೊಡಬಾರದು. ಅದರಲ್ಲಿ ಶೇ.40 ರಷ್ಟು ಅಧಿಕಾರಿಗಳ ಕೈ ಸೇರುತ್ತದೆ. ಅದರ ಬದಲು ಆತ್ಮಹತ್ಯೆ ಮಾಡಿಕೊಂಡ ರೈತನ ಪತ್ನಿಗೆ ಕೊನೆವರೆಗೂ ಪಿಂಚಣಿ ಕೊಡಿ. ಆ ಮೊತ್ತ ಹೆಚ್ಚಿಸಿ. ಮಕ್ಕಳನ್ನು ದತ್ತು ಪಡೆದು ಉಚಿತ ಶಿಕ್ಷಣ ಕೊಡಿ. ಆ ಕುಟುಂಬ ಮಾಡಿರುವ ಎಲ್ಲ ರೀತಿಯ ಸಾಲ ತೀರಿಸಿ’ ಎಂದು ಸಲಹೆ ಕೊಟ್ಟರು.