Site icon Ullalavani

ಮುಡಿಪು: ಬಸ್ಸುಗಳಿಗೆ ಕಲ್ಲು ತೂರಾಟ ಬ್ಯಾನರ್ ಗಳಿಗೆ ಹಾನಿ

ಉಳ್ಳಾಲ್ ನ್ಯೂಸ್ ಡೆಸ್ಕ್
ಉಳ್ಳಾಲ: ಟಿಪ್ಪು ಸುಲ್ತಾನ್ ಜಯಂತಿ ವಿಚಾರ ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಭುಗಿಲೆದ್ದ ಗಲಭೆಗೆ ಸಂಬಂಧಿಸಿ ಬಂಟ್ವಾಳದಲ್ಲಿ ಹತ್ಯೆಗೀಡಾದ ಹರೀಶ್ ಹತ್ಯೆಯನ್ನು ಖಂಡಿಸಿ ಹಿಂದು ಸಂಘಟನೆಗಳು ಕರೆ ನೀಡಿದ ಬಂದ್ ಹಿನ್ನೆಲೆಯಲ್ಲಿ ಅಲ್ಲಲ್ಲಿ ಗಲಭೆಗೆ ಪ್ರಚೋದಿಸುವ ಕೃತ್ಯ ನಡೆದಿದ್ದು, ಮುಡಿಪು ಸಮೀಪ ಎರಡು ಬಸ್ಸುಗಳಿಗೆ ಕಲ್ಲು ತೂರಾಟ, ಕುತ್ತಾರು ಸಮೀಪ ಅಳವಡಿಸಲಾದ ಬ್ಯಾನರುಗಳಿಗೆ ಹಾನಿ ಮಾಡಲಾಗಿದ್ದು, ಅಂಗಡಿ ಮುಗ್ಗಟ್ಟುಗಳು ಸಂಪೂರ್ಣ ಬಂದ್ ಆಗಿ ಬಿಗಿ ಬಂದೋಬಸ್ತ್ ಮುಂದುವರಿದಿದೆ.

Jpeg
Jpeg
Jpeg
Jpeg
Jpeg
Jpeg
Jpeg

 

Jpeg

ಮುಡಿಪು ಜಂಕ್ಷನ್ನಿನಲ್ಲಿ ನಿಲ್ಲಿಸಲಾಗಿದ್ದ ಎರಡು ಖಾಸಗಿ ಬಸ್ಸುಗಳಿಗೆ ಕಲ್ಲು ತೂರಾಟ ನಡೆಸಿರುವ ದುಷ್ಕರ್ಮಿಗಳು ಗಾಜು ಪುಡಿಗೈದು ಹಾನಿಗೊಳಿಸಿದ್ದಾರೆ. ಕುತ್ತಾರು ಜಂಕ್ಷನ್ನಿನಲ್ಲಿ ಟಿಪ್ಪು ಜಯಂತಿಗೆ ಶುಭಹಾರೈಸಿ ಹಾಕಲಾದ ಬ್ಯಾನರುಗಳನ್ನು ಬ್ಲೇಡಿನಿಂದ ಹರಿದು ಹಾನಿಗೊಳಿಸಲಾಗಿದೆ. ಮಾಡೂರು ಸಮೀಪ ರಸ್ತೆಯಲ್ಲಿ ಟಯರ್ ಗಳನ್ನು ಸುಟ್ಟು ಹಾಕಲಾಗಿದೆ.
ಮೆಡಿಕಲ್ ಅಂಗಡಿ- ಪೇಪರ್ ಸ್ಟಾಲ್ ಮುಚ್ಚಿದಕ್ಕೆ ವಿರೋಧ: ತೊಕ್ಕೊಟ್ಟುವಿನಲ್ಲಿ ಮೆಡಿಕಲ್ ಅಂಗಡಿಗಳನ್ನು ಮತ್ತು ಪೇಪರ್ ಸ್ಟಾಲನ್ನು ಮುಚ್ಚಿದ ಹಿನ್ನೆಲೆಯಲ್ಲಿ ಸಾರ್ವಜನಿಕರು ವಿರೋಧಿಸಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ತೊಕ್ಕೊಟ್ಟುವಿನಲ್ಲಿ ನಡೆಯಿತು. ಈವರೆಗೂ ಜಿಲ್ಲೆಯಲ್ಲಿ ನಡೆದಿರುವ ಬಂದ್ ವಾತಾವರಣದಲ್ಲಿ ಮೆಡಿಕಲ್ ಅಂಗಡಿಗಳನ್ನು ಮತ್ತು ಪೇಪರ್ ಸ್ಟಾಲುಗಳನ್ನು ತೆರೆದಿಡಲಾಗುತಿತ್ತು. ಆದರೆ ಈ ಬಾರಿ ಪೊಲೀಸರೇ ಅಂಗಡಿಗಳನ್ನು ಮುಚ್ಚಿ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದ್ದಾರೆಂದು ಆರೋಪಿಸಿದ ಸಾರ್ವಜನಿಕರು ಎಸಿಪಿ ಕಲ್ಯಾಣಿ ಶೆಟ್ಟಿ ಅವರನ್ನು ತರಾಟೆಗೆ ತೆಗೆದುಕೊಂಡರು. ನಾಳೆ ಮತ್ತೆ ಅಂಗಡಿಗಳನ್ನು ಪೊಲೀಸರೇ ಮುಚ್ಚಿದ್ದಾರೆಂದು ಆರೋಪಿಸಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ, ಎಸಿಪಿಯವರು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂಗಡಿಗಳನ್ನು ತೆರವುಗೊಳಿಸುವಂತೆ ಮಾಡುತ್ತೇನೆ ಎಂದರು. ಆದರೆ ಮಧ್ಯಾಹ್ನದವರೆಗೂ ಮೆಡಿಕಲ್ ಅಂಗಡಿಗಳು ಬಂದ್ ಆಗಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರು ಪರದಾಡುವಂತಾಗಿದೆ.
ಅಂಗಡಿ ಮುಗ್ಗಟ್ಟು ಸಂಪೂರ್ಣ ಬಂದ್ : ರಸ್ತೆಯಲ್ಲಿ ಬಸ್ ಸಂಚಾರ ಸಂಪೂರ್ಣ ಸ್ಥಗ್ಧವಾಗಿತ್ತು. ತೊಕ್ಕೊಟ್ಟು, ಕಲ್ಲಾಪು, ದೇರಳಕಟ್ಟೆ, ಅಸೈಗೋಳಿ, ಕುತ್ತಾರು, ಎಲಿಯಾರುಪದವು, ನಾಟೆಕಲ್, ಮುಡಿಪು, ಮಂಜನಾಡಿ, ನರಿಂಗಾನ, ಮೊಂಟೆಪದವು, ಹೂಹಾಕುವಕಲ್ಲು, ಮಡ್ಯಾರು, ಮಾಡೂರು, ಕಿನ್ಯಾ, ಬೆಳರಿಂಗೆ, ಕುಂಪಲ, ಬೀರಿ , ತಲಪಾಡಿ, ಕೋಟೆಕಾರು, ಉಳ್ಳಾ, ಸೋಮೇಶ್ವರ, ಉಚ್ಚಿಲ ಪ್ರದೇಶಗಳಲ್ಲಿ ಅಂಗಡಿ ಮುಗ್ಗಟ್ಟು ಸಂಪೂರ್ಣ ಬಂದ್ ಆಗಿತ್ತು.

Exit mobile version