ಕಿನ್ಯಾ : ಟೆಂಪೋ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕಿನಲ್ಲಿದ್ದ ಸಹಸವಾರ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಿನ್ಯಾ ಸಮೀಪ ಸೋಮವಾರ ಮಧ್ಯಾಹ್ನ ವೇಳೆ ಸಂಭವಿಸಿದೆ.
ಸೋಮೇಶ್ವರ ಉಚ್ಚಿಲದ ಅಜ್ಜಿನಡ್ಕ ನಿವಾಸಿ ಅಬೂಬಕರ್ ಎಂಬವರ ಪುತ್ರ ಇಬ್ರಾಹಿಂ ಖಲೀಲ್ (15) ಮೃತ ಬಾಲಕ. ಬೈಕ್ ಚಲಾಯಿಸುತ್ತಿದ್ದ ಸಂಬಂಧಿ ಸೊಹೈಲ್ ಸಾದಿಕ್ ಗಾಯಗೊಂಡು ತೊಕ್ಕೊಟ್ಟು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇರಳಕ್ಟಟ್ಟೆಯ ಆಸ್ಪತ್ರೆಯಲ್ಲಿ ಅನಾರೋಗ್ಯಕ್ಕೀಡಾಗಿ ದಾಖಲಾಗಿದ್ದ ತಂದೆ ಅಬೂಬಕರ್ ಅವರನ್ನು ನೋಡಲೆಂದು ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಉಚ್ಚಿಲ ಕಡೆಯಿಂದ ದೇರಳಕಟ್ಟೆಗೆ ತೆರಳುವ ಸಂದರ್ಭ ಎದುರಿನಿಂದ ನಾಟೆಕಲ್ ಕಡೆಯಿಂದ ತಲಪಾಡಿಗೆ ತೆರಳುತ್ತಿದ್ದ ಟೆಂಪೋ ವಾಹನ ಮುಖಾಮುಖಿ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ರಸ್ತೆಗೆಸೆಯಲ್ಪಟ್ಟ ಇಬ್ರಾಹಿಂ ಖಲೀಲ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕಿನ್ಯಾ ಫಲಾಹ್ ಶಾಲೆಯಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಯಾಗಿದ್ದ ಈತ ಪ್ರತಿಭಾವಂತನಾಗಿದ್ದ.
ಮೃತ ಖಲೀಲ್ ತಂದೆ ತಾಯಿ ಮತ್ತು ಸಹೋದರಿಯನ್ನು ಅಗಲಿದ್ದಾನೆ. ಉಳ್ಳಾಲ ಠಾಣೆಯಲ್ಲಿ ಟೆಂಪೋ ಚಾಲಕ ಗಿರೀಶ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.