ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಚ್ಚಿಲ: ಲಾರಿ ಮತ್ತು ರಿಕ್ಷಾ ನಡುವೆ ಸಂಭವಿಸಿದ ಅಪಘಾತದಲ್ಲಿ ರಿಕ್ಷಾ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಉಚ್ಚಿಲಗುಡ್ಡೆ ಎಂಬಲ್ಲಿ ನಡೆದಿದೆ.
ಗುರುಪುರ ಪರಾರಿ ನಿವಾಸಿ ತಲಪಾಡಿ ಕೆ.ಸಿ.ರೋಡ್ನಲ್ಲಿ ವಾಸವಾಗಿರುವ ಮಹಮ್ಮದ್ ರಫೀಕ್(45) ಎಂಬವರಾಗಿದ್ದು, ಕೆ.ಸಿ.ರೋಡ್ನಿಂದ ಸೋಮೇಶ್ವರ ಕಡೆಗೆ ರಿಕ್ಷಾ ಬಾಡಿಗೆಗೆಂದು ಹೋಗುತ್ತಿದ್ದಾಗ ಘಟನೆ ನಡೆದಿದೆ.
ಘಟನೆಯ ವಿವರ :
ಮಹಮ್ಮದ್ ರಫೀಕ್ ಸೋಮೇಶ್ವರ ರೈಲ್ವೇ ನಿಲ್ದಾಣದ ರಿಕ್ಷಾ ಪಾರ್ಕ್ನಲ್ಲಿ ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಶುಕ್ರವಾರ ಬೆಳಗ್ಗೆ 4.30ರ ಸುಮಾರಿಗೆ ರಿಕ್ಷಾ ಬಾಡಿಗೆಗೆ ನಿಲ್ಲಿಸಲು ಸೋಮೇಶ್ವರ ಕಡೆಗೆ ಹೋಗುತ್ತಿದ್ದಾಗ ಉಚ್ಚಿಲ ಗುಡ್ಡೆ ಬಳಿ ಮಂಗಳೂರಿನಿಂದ ಕೇರಳ ಕಡೆಗೆ ಮೀನು ಸಾಗಿಸುತ್ತಿದ್ದ ಲಾರಿ ಬಡಿದಿದ್ದು, ರಿಕ್ಷಾ ಚಲಾಯಿಸುತ್ತಿದ್ದ ರಫೀಕ್ ಸ್ಥಳದಲ್ಲೇ ಮೃತಪಟ್ಟಿದ್ದ ಎನ್ನಲಾಗಿದೆ.
ಮನೆಯ ಆಧಾರ ಸ್ತಂಭವಾಗಿದ್ದರು :
ಮಹಮ್ಮದ್ ರಫೀಕ್ ಪತ್ನಿ , ಪುತ್ರ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದು, ಮನೆಯ ಆಧಾರ ಸ್ತಂಭವಾಗಿದ್ದರು. ಮೂಲತ: ಗುರುಪುರ ನಿವಾಸಿಯಾಗಿದ್ದ ರಫೀಕ್ ಕೆ.ಸಿ.ರೋಡ್ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ರಫೀಕ್ ಸಾವಿನಿಂದ ಕುಟುಂಭ ಅತಂತ್ರವಾಗಿದೆ.
ಅಡ್ಡಾದಿಡ್ಡಿ ಸಂಚರಿಸುವ ಮೀನಿನ ಲಾರಿಗಳು :
ಹೆದ್ದಾರಿಯಲ್ಲಿ ಮೀನಿನ ಲಾರಿಗಳದ್ದೇ ದೊಡ್ಡ ಸಮಸ್ಯೆಯಾಗಿದೆ, ಒಂದೆಡೆ ನೀರನ್ನು ಇಡೀ ರಸ್ತೆಗೆ ಚೆಲ್ಲಿಕೊಂಡು ಹೋದರೆ ಇನ್ನೊಂದೆಡೆ ಅತೀ ವೇಗ ಮತ್ತು ಆಜಾಗರುಕತೆಯಿಂದ ಲಾರಿಯನ್ನು ಚಲಾಯಿಸಿಕೊಂಡು ಹೋಗುವ ಮೂಲಕ ಅಪಘಾತಕ್ಕೆ ಕಾರಣವಾಗುತ್ತಿದ್ದಾರೆ.