Site icon Ullalavani

ಅನಂತ್,ಸಂತು ಕೊಲೆ ಆರೋಪಿ ಮಾಡೂರು ಇಸುಬು ಸಹಿತ ಇನ್ನೋರ್ವ ಖೈದಿ ಹತ್ಯೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಮಂಗಳೂರು: ಮೂವರು ಹಿಂದೂ ಸಂಘಟನೆ ಬೆಂಬಲಿತ ಪೊಳಲಿ ಅನಂತು, ಉಳ್ಳಾಲದ ನರಸಿಂಹ ಶೆಟ್ಟಿಗಾರ್, ಬಂಟ್ವಾಳದ ಕ್ಯಾಂಡಲ್ ಸಂತು ಮತ್ತು ಮುಸ್ಲಿಂ ವಿವಾಹಿತೆಯ ಕೊಲೆ ಸಹಿತ 30ಕ್ಕೂ ಅಧಿಕ ಪ್ರಕರಣಗಳಲ್ಲಿ ವಿಚಾರಣಾಧೀನ ಖೈದಿಯಾಗಿದ್ದ ಮಾಡೂರು ನಿವಾಸಿ ಇಸುಬು(42) ಸಹಿತ ವೆಲೆನ್ಶಿಯಾದಲ್ಲಿ ಬಿಜೈ ರಾಜಾ ಹತ್ಯೆಗೆ ಪ್ರತೀಕಾರವಾಗಿ ನಡೆದ ಪ್ರಶಾಂತ್ ಯಾನೆ ಪಚ್ಚು ಹತ್ಯೆಯಲ್ಲಿ ಭಾಗಿಯಾಗಿದ್ದ ಗಣೇಶ್ ಶೆಟ್ಟಿ ಎಂಬ ಖೈದಿಗಳನ್ನು ವಿಕ್ಕಿ ಶೆಟ್ಟಿ ತಂಡದ ಸಹಚರರೆನ್ನಲಾದ ಖೈದಿಗಳು ಜೈಲಿನಲ್ಲೇ ಹತ್ಯೆ ನಡೆಸಿದ್ದಾರೆ.

ಮುಖ ತೊಳೆಯುವಾಗ ಕೃತ್ಯ ಎಸಗಿದರು :

ಜೈಲೊಳಗೆ ಎರಡು ಬಣಗಳಿದ್ದು, ಅದರಲ್ಲಿ ಒಂದು ತಂಡವನ್ನು ಹಳೇ ಜೈಲಿನಲ್ಲಿರಿಸಲಾಗಿದ್ದರೆ, ಇನ್ನೊಂದು ತಂಡ ನೂತನ ಜೈಲಿನಲ್ಲಿದೆ. ಹಳೇ ಜೈಲಿನಲ್ಲಿ ಮಾಡೂರು ಇಸುಬು, ಸಹಿತ ವಳಚ್ಚಿಲ್ ಜಿಯಾ ಕೊಲೆ ಆರೋಪಿಗಳು ಮತ್ತು ಬಾಳಿಗಾ ಶೂಟೌಟ್ ಪ್ರಕರಣದಲ್ಲಿ ಬಂಧಿತ ಝೂಲ್ಫೀಕರ್ ಹಾಗೂ ಹಲವರು ಮುಸ್ಲಿಂ ಖೈದಿಗಳೇ ಜಾಸ್ತಿಯಾಗಿದ್ದು, ಜತೆಗೆ ಗಣೇಶ್ ಶೆಟ್ಟಿ ಕೂಡಾ ಇದ್ದರು. ಇಂದು ಬೆಳಿಗ್ಗೆ ಮಾಡೂರು ಇಸುಬು ಮುಖ ತೊಳೆಯಲೆಂದು ನಿಂತಿದ್ದ ಸಂದರ್ಭ ನೂತನ ಜೈಲಿನಲ್ಲಿದ್ದ ಖೈದಿಗಳ ತಂಡವೊಂದು ಮುಗಿಬಿದ್ದು ಕೋಳಿಬಾಳಿನಲ್ಲಿ ಮಾಡೂರು ಇಸುಬುವಿಗೆ ಇರಿಯುತ್ತಿದ್ದಂತೆ ಗಣೇಶ್ ಶೆಟ್ಟಿ ತಡೆಯಲು ಬಂದಿದ್ದರು. ಆದರೆ ಗಣೇಶ್ ಮೇಲೂ ಮುಗಿಬಿದ್ದ ತಂಡ ಆತನಿಗೂ ಇರಿದು ಗಂಭೀರವಾಗಿ ಗಾಯಗೊಳಿಸಿದೆ. ಅಷ್ಟಾಗುತ್ತಿದ್ದಂತೆ ಹಳೇ ಮತ್ತು ಹೊಸ ಜೈಲಿನಲ್ಲಿದ್ದ ಖೈದಿಗಳ ನಡುವೆ ಮಾರಾಮಾರಿ ನಡೆದು 12 ರಷ್ಟು ಮಂದಿ ಗಾಯಗೊಂಡರು. ಆದರೆ ಮಾಡೂರು ಇಸುಬುನನ್ನು ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಮೃತಪಟ್ಟರೆ, ಗಣೇಶ್ ಶೆಟ್ಟಿಯನ್ನು ವೆನ್ಲಾಕ್ ಆಸ್ಪತ್ರೆಯಿಂದ ಎ.ಜೆ ಆಸ್ಪತ್ರೆಗೆ ಕೊಂಡೊಯ್ಯುವ ಸಂದರ್ಭ ಸಾವನ್ನಪ್ಪಿದ್ದಾರೆ.

ಸಚ್ಚು ತಂಡದ ಕೃತ್ಯ :

ಜನವರಿಯಲ್ಲಿ ಕಿನ್ನಿಗೋಳಿಯಲ್ಲಿ ಕೇಶವ ಶೆಟ್ಟಿ ಹತ್ಯೆಗೈದ ಪ್ರಮುಖ ಸತೀಶ್ ಯಾನೆ ಸಚ್ಚು ತಂಡವೇ ಕೃತ್ಯ ಎಸಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಭೂಗತ ಪಾತಕಿ ವಿಕ್ಕಿ ಶೆಟ್ಟಿ ಸಹಚರರಾದ ಲಿತೇಶ್, ಶೋಭರಾಜ್, ಯುವರಾಜ್, ಕೃಷ್ಣ ಸಹಿತ ಹಲವರ ತಂಡ ಸೇರಿಕೊಂಡು ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ. ಕೊಲೆಗೆ ಒಂದು ದಿನದ ಹಿಂದೆ ಶಿವಮೊಗ್ಗ ಜೈಲಿಗೆ ಕರೆದೊಯ್ಯಲಾದ ನಟೋರಿಯಸ್ ಆಕಾಶಭವನ ಶರಣ್ ನಿರ್ದೇಶನ ನೀಡಿರುವ ವಿಚಾರ ಬೆಳಕಿಗೆ ಬಂದಿದೆ.

ಕೆಲ ಆರೋಪಿಗಳ ಶಿವಮೊಗ್ಗಕ್ಕೆ ವರ್ಗ :

ಜೈಲಿನಲ್ಲಿ ಗಲಭೆಗಳು ನಡೆಯುತ್ತಿದ್ದಂತೆ ಇತ್ತೀಚೆಗೆ ತೊಕ್ಕೊಟ್ಟುವಿನಲ್ಲಿ ರೌಡಿಶೀಟರ್ ವಿಕ್ಕಿ ಬೋಳಾರ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದ ನಟೋರಿಯಸ್ ಸೈಕೋ ವಿಕ್ಕಿ ಸೇರ್ಪಡೆಗೊಂಡಿದ್ದರು. ಇದರಿಂದ ಜೈಲಲೊಳಗೆ ಒಂದು ಬಣ ಬಲವಾಗಿದ್ದರಿಂದಾಗಿ ಜೈಲರ್ ಹಲವರನ್ನು ಶಿವಮೊಗ್ಗ ಜೈಲಿಗೆ ವರ್ಗಾಯಿಸಿದ್ದು, ಅದರಲ್ಲಿ ವಿಕ್ಕಿ ಬೋಳಾರ ಹತ್ಯೆಯಲ್ಲಿ ಭಾಗಿಯಾದ ಸೈಕೋ ವಿಕ್ಕಿ ಸಹಿತ ಆತನ ತಂಡ ಮತ್ತು ಆಕಾಶಭವನದ ಶರಣ್ ಎಂಬವರನ್ನು ಶಿವಮೊಗ್ಗ ಜೈಲಿಗೆ ಕಳುಹಿಸಲಾಗಿತ್ತು. ಆದರೆ ಹೋಗುವ ಮುನ್ನ ತನ್ನ ಬಣದವರೇ ಆಗಿದ್ದ ಯುವಕರಿಗೆ ಶರಣ್ ಇಸುಬುನನ್ನು ಹತ್ಯೆಗೈಯ್ಯಲು ನಿರ್ದೇಶಿಸಿದ್ದನೆನ್ನಲಾಗಿದೆ.

ಕೋಮುದ್ವೇಷದ ಹಿನ್ನೆಲೆಯಲ್ಲಿ ಉಳ್ಳಾಲದಲ್ಲಿ ರಿಕ್ಷಾ ಚಾಲಕ ನರಸಿಂಹ ಶೆಟ್ಟಿಗಾರ್, ಬಂಟ್ವಾಳದಲ್ಲಿ ಕ್ಯಾಂಡಲ್ ಸಂತು, ಪೊಳಲಿಯಲ್ಲಿ ಪೊಳಲಿ ಅನಂತು ಅವರನ್ನು ಪ್ರತೀಕಾರದ ಹತ್ಯೆ ನಡೆಸುವಲ್ಲಿ ಮಾಡೂರು ಇಸುಬು ಸಕ್ರಿಯನಾಗಿದ್ದ. ವಿದೇಶದಲ್ಲಿ ಕಳ್ಳಭಟ್ಟಿ ದಂಧೆಯಲ್ಲಿ ಸಿಕ್ಕಿಬಿದ್ದ ಮಾಡೂರು ಇಸುಬುವಿನನ್ನು ಬಳಿಕ ಇಂಟರ್‍ಪೋಲ್ ಮುಖೇನ ಮಂಗಳೂರಿಗೆ ಕರೆತರಲಾಗಿತ್ತು. 30 ರಷ್ಟು ಹಫ್ತಾ ಬೆದರಿಕೆ ಪ್ರಕರಣ ಮತ್ತು ಮುಸ್ಲಿಂ ಮಹಿಳೆಯೊಬ್ಬರು ಅನೈತಿಕ ದಂಧೆ ನಡೆಸುತ್ತಿದ್ದಾಳೆಂದು ಆಕೆಯನ್ನು ಗುರಿಯಾಗಿಸಿ ಶಿರಾಡಿ ಘಾಟಿಗೆ ಅಪಹರಣಗೈದು ಅಲ್ಲಿ ಕೊಲೆ ನಡೆಸಿ ಮೃತದೇಹವನ್ನು ಅಲ್ಲೇ ಎಸೆದಿರುವ ಪ್ರಕರಣದಲ್ಲಿ ಇಸುಬು ಆರೋಪಿಯಾಗಿದ್ದನು.

 

Exit mobile version