ಉಳ್ಳಾಲ್ ನ್ಯೂಸ್ ಡೆಸ್ಕ್
ನಾಟೆಕಲ್ : ತಾಯಿ ಹಾಗೂ ಅಜ್ಜಿಯೊಂದಿಗೆ ಕಾಸರಗೋಡಿನ ತಳಂಗರೆ ಮಾಲಿಕ್ ದೀನಾರ್ ದರ್ಗಾಕ್ಕೆ ಝಿಯಾರತ್ಗೆ ತೆರಳಿದ್ದ ನಾಟೆಕಲ್ ಸಮೀಪದ ನಿವಾಸಿ ಸಹೋದರ ಬಾಲಕರಿಬ್ಬರು ಕೊಳವೆಯಲ್ಲಿ ಮುಳುಗಿ ದಾರುಣ ಸಾವನ್ನಪ್ಪಿರುವ ಘಟನೆ ನಿನ್ನೆ ನಡೆದಿದೆ.
ನಾಟೆಕಲ್ ಸಮೀಪದ ಅನ್ವರ್ ಮತ್ತು ರೇಷ್ಮಾ ದಂಪತಿ ಮಕ್ಕಳಾದ ಅಲ್ತಾಫ್ (8), ಆತಿಫ್ (7) ಕೆರೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದವರು. ಗುರುವಾರ ಬೆಳಿಗ್ಗೆ ಕಾಸರಗೋಡಿಗೆ ತೆರಳಿದ್ದ ಕುಟುಂಬ, ತಳಂಗೆರೆ ಮಾಲಿಕ್ ದೀನಾರ್ ದರ್ಗಾದಲ್ಲಿ ಝಿಯಾರತ್ ಮುಗಿಸಿದ್ದರು. ತಾಯಿ ಮತ್ತು ಅಜ್ಜಿ ಇಬ್ಬರೂ ದರ್ಗಾದಲ್ಲಿದ್ದ ಸಂದರ್ಭ, ಇಬ್ಬರು ಬಾಲಕರು ಸಮೀಪದಲ್ಲಿದ್ದ ಕೊಳವೆಯ ನೀರಿಗೆ ಇಳಿದು ಈಜಲು ಆರಂಭಿಸಿದ್ದರು. ಆದರೆ ಕೊಳದಲ್ಲಿ ನೀರು ಆಳವಾಗಿದ್ದರಿಂದಾಗಿ ಈಜು ಗೊತ್ತಿಲ್ಲದ ಮಕ್ಕಳು ಮುಳುಗಲು ಆರಂಭವಾಗುತ್ತಿದ್ದಂತೆ ಕೂಗಾಡಲು ಆರಂಭಿಸಿದ್ದರು. ಸದ್ದು ಕೇಳಿ ಸ್ಥಳೀಯರು ಕೊಳವೆ ಸಮೀಪ ಧಾವಿಸಿ ಮಕ್ಕಳನ್ನು ನೀರಿನಿಂದ ಮೇಲಕ್ಕೆತ್ತಿದರೂ, ಅಷ್ಟರಲ್ಲಿ ಇಬ್ಬರ ಪ್ರಾಣಪಕ್ಷಿಯೂ ಹಾರಿಹೋಗಿತ್ತು. ಕಾಸರಗೋಡು ಚೌಕಿಯ ಅಜ್ಜಿ ಮನೆಗೆ ಶಾಲೆಗೆ ರಜೆಯಿದ್ದ ಹಿನ್ನೆಲೆಯಲ್ಲಿ ಇಬ್ಬರೂ ಬಾಲಕರು ತಾಯಿ ಜತೆಗೆ ತೆರಳಿದ್ದು, ಅಲ್ಲಿಂದ ದರ್ಗಾ ಝಿಯಾರತಿಗೆಂದು ತೆರಳಿದ್ದರು. ಇಬ್ಬರು ಬಾಲಕರು ನಾಟೆಕಲ್ ನ ಕುನಿಲ್ ಶಾಲೆಯಲ್ಲಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾಗಿದ್ದರು.