ಮುಡಿಪು: ಜೆನಿತ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ದೇಶಭಕ್ತಿ ಮತ್ತು ಸಂಭ್ರಮದ ವಾತಾವರಣದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ನಿವೃತ್ತ ಸಿಪಿಐ ರಾಘವ್ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ರಾಷ್ಟ್ರಗೀತೆಯ ನಡುವೆ ತ್ರಿವರ್ಣ ಧ್ವಜವು ಹೆಮ್ಮೆಯಿಂದ ಹಾರಾಡಿದ ಕ್ಷಣವು ಎಲ್ಲರಲ್ಲೂ ದೇಶಪ್ರೇಮದ ಕಿಚ್ಚನ್ನು ಮತ್ತಷ್ಟು ಪ್ರಜ್ವಲಿಸಿತು. ಬಳಿಕ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸಿ, ರಾಷ್ಟ್ರಸೇವೆಯ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಕರಸ್ಪಾಂಡೆಂಟ್ ನಹಾದ ಆಡಳಿತಾಧಿಕಾರಿ ಮೊಯ್ದೀನ್, ಪಿಟಿಎ ಅಧ್ಯಕ್ಷ ಹನೀಫ್, ಕಾರ್ಯದರ್ಶಿ ಸಮೃದ್ಧ, ಮುಖ್ಯೋಪಾಧ್ಯಾಯಿನಿ ಸಫೂರಾ, ಲಯನ್ಸ್ ಕ್ಲಬ್ ಅಧ್ಯಕ್ಷ ಮೋಹನ್ ಉಳ್ಳಾಲ್ ಹಾಗೂ ಉದ್ಯಮಿ ರಾಘವ್ ಶೆಟ್ಟಿ ಉಪಸ್ಥಿತರಿದ್ದರು.
ಧ್ವಜಾರೋಹಣದ ಬಳಿಕ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳು, ವರ್ಣರಂಜಿತ ನೃತ್ಯಗಳು, ಭಾಷಣಗಳು ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಭಾರತದ ವೈವಿಧ್ಯತೆ, ಏಕತೆ ಮತ್ತು ಸ್ವಾತಂತ್ರ್ಯದ ಮಹತ್ವವನ್ನು ಮನೋಜ್ಞವಾಗಿ ಅನಾವರಣಗೊಳಿಸಿದರು. ವಿದ್ಯಾರ್ಥಿಗಳ ಅದ್ಭುತ ಪ್ರದರ್ಶನಗಳು ನೆರೆದಿದ್ದವರಿಂದ ಭಾರೀ ಮೆಚ್ಚುಗೆಗೆ ಪಾತ್ರವಾದವು.
ಕೊನೆಯಲ್ಲಿ ರಾಷ್ಟ್ರಪ್ರೇಮ, ಶಿಸ್ತು ಮತ್ತು ಉತ್ತಮ ನಾಗರಿಕತೆಯ ಸಂದೇಶದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.