Site icon Ullalavani

ಕಾರ್ಯಕರ್ತರಿಗೆ ಮೊದಲ ಬಾರಿಗೆ ಸಿಕ್ಕ ಸ್ವಾತಂತ್ರ‍್ಯ: ದಕ್ಷಿಣ ಕನ್ನಡ ಕಾಂಗ್ರೆಸ್‌ನಲ್ಲಿ ಹೊಸ ಅಧ್ಯಕ್ಷರ ನಿರೀಕ್ಷೆ..!

ಕಾಂಗ್ರೆಸ್ ಪಕ್ಷದ “ಸಂಘಟನಾ ಸೃಜನ್ ಅಭಿಯಾನ್” ಅಡಿಯಲ್ಲಿ ಕರ್ನಾಟಕದ ಜಿಲ್ಲಾ ಕಾಂಗ್ರೆಸ್ ಘಟಕಗಳಿಗೆ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಆರಂಭವಾಗೊoಡಿದೆ. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೆ. ಹರೀಶ್ ಕುಮಾರ್ ಅವರ ಅವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಎಐಸಿಸಿ ವೀಕ್ಷಕರಾದ ಕೆ. ಜಯಂತ್ ಹಾಗೂ ಇತರರು ಜಿಲ್ಲೆಯಾದ್ಯಂತ ಕಾರ್ಯಕರ್ತರು, ಮುಖಂಡರು ಮತ್ತು ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

ಈ ಬಾರಿ ಕಾರ್ಯಕರ್ತರಲ್ಲಿ ವಿಭಿನ್ನ ರೀತಿಯ ಉತ್ಸಾಹ ಕಂಡುಬರುತ್ತಿದೆ. ಹಲವು ಕಾರ್ಯಕರ್ತರ ಅಭಿಪ್ರಾಯದಂತೆ, ಜಿಲ್ಲಾ ಅಧ್ಯಕ್ಷರ ಆಯ್ಕೆ ಕುರಿತು ತಮ್ಮ ಅಭಿಪ್ರಾಯವನ್ನು ನೇರವಾಗಿ ವ್ಯಕ್ತಪಡಿಸಲು ಅವಕಾಶ ದೊರೆತಿರುವುದು ಇದೇ ಮೊದಲ ಬಾರಿಯ ಅನುಭವವಾಗಿದೆ. ಆದ್ದರಿಂದ ಈ ಪ್ರಕ್ರಿಯೆ ಕೇವಲ ಔಪಚಾರಿಕತೆಯಾಗದೆ, ಕಾರ್ಯಕರ್ತರ ಧ್ವನಿಗೆ ನಿಜವಾದ ಮೌಲ್ಯ ಸಿಗಬೇಕು ಎಂಬ ನಿರೀಕ್ಷೆ ಸಾರ್ವಜನಿಕರದ್ದಾಗಿದೆ.

ದಕ್ಷಿಣ ಕನ್ನಡ ಕಾಂಗ್ರೆಸ್‌ನಲ್ಲಿ ಕಳೆದ ಕೆಲವು ವರ್ಷಗಳಿಂದ ಸಂಘಟನೆಗಿAತ ರಾಜಕೀಯ ಹೊಂದಾಣಿಕೆಗಳಿಗೆ ಹೆಚ್ಚಿನ ಆದ್ಯತೆ ದೊರೆತಿದೆ ಎಂಬ ಟೀಕೆ ಪಕ್ಷದೊಳಗೇ ಕೇಳಿಬರುತ್ತಿದೆ. ಹಲವು ಚುನಾಯಿತ ಪ್ರತಿನಿಧಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪ್ರಭಾವ ಹೊಂದಿದ್ದರೂ, ಜಿಲ್ಲಾ ಮಟ್ಟದಲ್ಲಿ ಸಂಘಟನೆಯ ಚಟುವಟಿಕೆಗಳು ನಿರೀಕ್ಷಿತ ಮಟ್ಟದಲ್ಲಿ ಬಲಗೊಂಡಿಲ್ಲ ಎಂಬ ಅಭಿಪ್ರಾಯವನ್ನು ಅನೇಕ ಕಾರ್ಯಕರ್ತರು ವ್ಯಕ್ತಪಡಿಸುತ್ತಿದ್ದಾರೆ. ಪಕ್ಷಕ್ಕೆ ಹೊಸ ಚೈತನ್ಯ ತುಂಬುವ ನಾಯಕತ್ವದ ಅಗತ್ಯ ಈಗ ಸ್ಪಷ್ಟವಾಗಿ ಕಾಣಿಸುತ್ತಿದೆ.

ಒಂದು ವರ್ಗದ ಸಾರ್ವಜನಿಕರ ಅಭಿಪ್ರಾಯದಂತೆ, ಬ್ಲಾಕ್ ಮತ್ತು ಜಿಲ್ಲಾ ಅಧ್ಯಕ್ಷರ ಆಯ್ಕೆಯಲ್ಲಿ ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯಕ್ಕಿಂತ ಮೇಲ್ಮಟ್ಟದ ರಾಜಕೀಯ ನಿರ್ಧಾರಗಳಿಗೆ ಕೆಲವೊಮ್ಮೆ ಹೆಚ್ಚಿನ ಪ್ರಾಮುಖ್ಯತೆ ದೊರೆತಿದೆ. ಇಂತಹ ಪರಿಸ್ಥಿತಿ ಸಂಘಟನೆಯ ಸ್ವಾಯತ್ತತೆ ಮತ್ತು ಕಾರ್ಯಕರ್ತರ ಉತ್ಸಾಹದ ಮೇಲೆ ಪರಿಣಾಮ ಬೀರಿದೆ ಎಂಬ ಅಸಮಾಧಾನವೂ ಕೇಳಿಬರುತ್ತಿದೆ. ಸಂಘಟನೆಯ ನಿಜವಾದ ಬಲ ಕಾರ್ಯಕರ್ತರಲ್ಲಿದ್ದು, ಅವರ ವಿಶ್ವಾಸವನ್ನು ಗಳಿಸುವ ನಾಯಕತ್ವವೇ ಪಕ್ಷವನ್ನು ಪುನಃ ಬಲಿಷ್ಠಗೊಳಿಸಬಲ್ಲದು.

ದಕ್ಷಿಣ ಕನ್ನಡದಂತಹ ರಾಜಕೀಯವಾಗಿ ಸೂಕ್ಷ್ಮ ಜಿಲ್ಲೆಯಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂಘಟನೆಗಳು ಬಲವಾಗಿ ನೆಲೆಯೂರಿವೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ಕೇವಲ ಹುದ್ದೆ ನಿರ್ವಹಿಸುವ ಅಧ್ಯಕ್ಷರಲ್ಲ, ವಿಚಾರಗಳನ್ನು ಸ್ಪಷ್ಟವಾಗಿ ಮಂಡಿಸುವ, ಜನರ ನಡುವೆ ನಿರಂತರವಾಗಿ ಕೆಲಸ ಮಾಡುವ, ಕಾರ್ಯಕರ್ತರ ಅಹವಾಲುಗಳನ್ನು ಆಲಿಸುವ, ಸಂಘಟನೆಯನ್ನು ಗ್ರಾಮ ಮಟ್ಟದಿಂದ ಪುನರ್‌ನಿರ್ಮಿಸುವ ಮತ್ತು ಪಕ್ಷದ ಸಿದ್ಧಾಂತವನ್ನು ಸಮರ್ಥವಾಗಿ ಪ್ರತಿಪಾದಿಸುವ ಸಮರ್ಥ ನಾಯಕತ್ವದ ಅಗತ್ಯವಿದೆ ಎಂಬುದು ಅಭಿಪ್ರಾಯವಾಗಿದೆ.

ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಐವನ್ ಡಿ’ಸೋಜಾ, ಮಿಥುನ್ ರೈ, ಎಂ.ಜಿ. ಹೆಗ್ಡೆ, ಪದ್ಮರಾಜ್, ಎಂ.ಎಸ್. ಮಹಮ್ಮದ್, ಹೇಮನಾಥ ಕಾವು, ವಿಶ್ವನಾಥ ರೈ ಹಾಗೂ ಮಮತಾ ಗಟ್ಟಿ ಸೇರಿದಂತೆ ಹಲವು ಪ್ರಮುಖ ಹೆಸರುಗಳು ಕೇಳಿಬರುತ್ತಿವೆ. ಅಂತಿಮವಾಗಿ ಯಾರೇ ಆಯ್ಕೆಯಾದರೂ, ಅವರ ಆಯ್ಕೆ ಯಾವುದೇ ರಾಜಕೀಯ ಹೊಂದಾಣಿಕೆಯ ಸಂಕೇತವಾಗದೆ, ಕಾರ್ಯಕರ್ತರ ವಿಶ್ವಾಸ, ಸಂಘಟನಾ ಸಾಮರ್ಥ್ಯ ಮತ್ತು ಪಕ್ಷದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರವಾಗಬೇಕು ಎಂಬುವುದು ಸಾರ್ವಜನಿಕ ವಲಯಗಳಿಂದ ಕೇಳಿಬರುತ್ತಿದೆ.

ಈ ಬಾರಿಯ ಜಿಲ್ಲಾ ಅಧ್ಯಕ್ಷರ ಆಯ್ಕೆ ಕಾಂಗ್ರೆಸ್‌ಗೆ ಸಾಮಾನ್ಯ ಆಡಳಿತಾತ್ಮಕ ಪ್ರಕ್ರಿಯೆಯಲ್ಲ; ದಕ್ಷಿಣ ಕನ್ನಡದಲ್ಲಿ ಪಕ್ಷವನ್ನು ಮರುಸಂಘಟಿಸುವ ಐತಿಹಾಸಿಕ ಅವಕಾಶವಾಗಿದೆ. ಕಾರ್ಯಕರ್ತರ ಧ್ವನಿಗೆ ಗೌರವ ನೀಡಿ, ಹೊಸ ಚೈತನ್ಯ ಮತ್ತು ಹೊಸ ನಾಯಕತ್ವಕ್ಕೆ ಅವಕಾಶ ನೀಡಿದರೆ, ಅದು ಕೇವಲ ಒಬ್ಬ ಅಧ್ಯಕ್ಷರ ಆಯ್ಕೆಯಾಗದೆ ದಕ್ಷಿಣ ಕನ್ನಡ ಕಾಂಗ್ರೆಸ್‌ನ ಪುನರುಜ್ಜೀವನದ ಆರಂಭವಾಗಬಹುದು ಎಂಬುವುದು ಒಂದಷ್ಟು ಸಾರ್ವಜನಿಕರ ಅಭಿಪ್ರಾಯ.

Exit mobile version