Site icon Ullalavani

ವಿವಾಹಿತ ಮೃತ್ಯು ವೈದ್ಯರ ನಿರ್ಲಕ್ಷ್ಯ ಆರೋಪ

ಉಳ್ಳಾಲ್ ನ್ಯೂಸ್ ನೆಟ್  ವರ್ಕ್

ಉಳ್ಳಾಲ: ಕಾಲು ಮುರಿತಕ್ಕೊಳಗಾಗಿ ಅ.8 ರಂದು ಆಸ್ಪತ್ರೆಗೆ ದಾಖಲಾಗಿದ್ದ ವಿವಾಹಿತರೊಬ್ಬರು ಸೋಮವಾರ ನಸುಕಿನ ಜಾವ ಮೃತಪಟ್ಟಿದ್ದು, ಮೃತರ ಸಂಬಂಧಿ ಹಾಗೂ ಸ್ನೇಹಿತರು ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದಾರೆಂದು ಆರೋಪಿಸಿ ಆಸ್ಪತ್ರೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ಸೋಮವಾರ ನಡೆದಿದೆ. ಘಟನೆ ಕುರಿತ ಪ್ರಕರಣ ಉಳ್ಳಾಲ ಠಾಣೆಯಲ್ಲಿ ದಾಖಲಾಗಿದೆ.

ಕೈರಂಗಳ ಗ್ರಾಮದ ಮೋಂಟುಗೋಳಿ ನಿವಾಸಿ ಖಾಸಗಿ ಬಸ್ಸು ನಿರ್ವಾಹಕ ವಿಜಯ್(36) ಮೃತರು. ಅ.8 ರಂದು ಅದೇ ಆಸ್ಪತ್ರೆಯಲ್ಲಿ ದಾಖಲಾಗಿರುವ ತನ್ನ 3ರ ಹರೆಯದ ಮಗುವನ್ನು ನೋಡಿ ವಾಪಸ್ಸಾಗುವ ಸಂದರ್ಭ ಆಸ್ಪತ್ರೆಯ ಬೇಸ್‍ಮೆಂಟಿನಲ್ಲಿ ಜಾರಿಬಿದ್ದಿದ್ದರು.

ರಾತ್ರಿ ಪೂರ್ತಿ ಪ್ರe್ಞÁಹೀನರಾಗಿ ಅಲ್ಲೇ ಉಳಿದ ಅವರು ಮರುದಿನ ಬೆಳಗ್ಗೆ ಅದೇ ಆಸ್ಪತ್ರೆಗೆ ದಾಖಲಾಗಿದ್ದರು. ಬಲಕಾಲು ಮುರಿತಕ್ಕೊಳಗಾದ ವಿಜಯ್ ಅವರಿಗೆ ಶಸ್ತ್ರಚಿಕಿತ್ಸೆ ನಡೆಯಬೇಕಿತ್ತು. ಆದರೆ ವೈದ್ಯರು ನಿರ್ಲಕ್ಷ್ಯ ವಹಿಸಿ ಶಸ್ತ್ರಚಿಕಿತ್ಸೆ ನಡೆಸದೇ ಇದ್ದ ಪರಿಣಾಮ ವಿಜಯ್ ಮೃತಪಟ್ಟಿದ್ದಾರೆಂದು ಸಂಬಂಧಿಕರು ಹಾಗೂ ಸ್ನೇಹಿತರು ಆರೋಪಿಸಿದ್ದಾರೆ. ಇದೇ ವಿಚಾರದಲ್ಲಿ ಆಸ್ಪತ್ರೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಾಗ ಸ್ಥಳಕ್ಕಾಗಮಿಸಿದ ಉಳ್ಳಾಲ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದರು. ಈ ವೇಳೆ ಸಂಬಂಧಿಕರ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಈ ಕುರಿತು ಉಳ್ಳಾಲ ಠಾಣೆಯಲ್ಲಿ ಆಸ್ಪತ್ರೆ ವೈದ್ಯಾಧಿಕಾರಿಗಳ ವಿರುದ್ಧ 304.ಎ ಕಾಯ್ದೆಯಡಿ ನಿರ್ಲಕ್ಷ್ಯ ವಹಿಸಿರುವ ಕುರಿತು ಪ್ರಕರಣ ದಾಖಲಾಗಿದೆ. ವಿಜಯ್ ಅವರು ವಿವಾಹಿತರಾಗಿದ್ದು, ಪತ್ನಿ ಹಾಗೂ ಇಬ್ಬರು ಎಳೆಯ ವಯಸ್ಸಿನ ಮಕ್ಕಳನ್ನು ಹಾಗೂ ಹೆತ್ತವರನ್ನು ಅಗಲಿದ್ದಾರೆ. ಬಸ್ಸು ನಿರ್ವಾಹಕನಾಗಿ ಮತ್ತು ಅದರ ಜತೆಗೆ ಕೂಲಿ ಕೆಲಸ ನಿರ್ವಹಿಸಿಕೊಂಡು ಕುಟುಂಬ ನಡೆಸುತ್ತಿದ್ದರು.

ನಿತ್ರಾಣ ಜೀವದವರು
ವಿಜಯ್ ಅವರು ನಿತ್ರಾಣ ಜೀವದವರಾಗಿದ್ದು, ಈ ಕಾರಣಕ್ಕಾಗಿ ಶಸ್ತ್ರಚಿಕಿತ್ಸೆ ನಡೆಸಲು ವೈದ್ಯರು ಹಿಂದೇಟು ಹಾಕಿದ್ದರು. ಅಲ್ಲದೆ ಕುಟುಂಬದವರಲ್ಲಿ ವಿಜಯ್ ಅವರಿಗೆ ಅರಿವಳಿಕೆ ಔಷಧ ನೀಡಿ ಶಸ್ತ್ರಕ್ರಿಯೆ ನಡೆಸಿದಲ್ಲಿ ಜೀವಕ್ಕೆ ಅಪಾಯ ಇರುವ ಎಚ್ಚರಿಕೆಯನ್ನು ಕುಟುಂಬದವರಿಗೆ ನೀಡಿದ್ದರು. ಅಲ್ಲದೆ ಈ ವಿಚಾರದ ಕುರಿತ ಪತ್ರಕ್ಕೆ ಕುಟುಂಬದ ಮೂಲದವರಿಂದ ಸಹಿಯನ್ನು ಪಡೆದಿದ್ದರು. ಸೋಮವಾರ ನಸುಕಿನ ಜಾವ ವಿಜಯ್ ಮೃತರಾಗಲು ರಕ್ತ ಹೆಪ್ಪುಗಟ್ಟುವಿಕೆಯಿಂದ ಅಥವಾ ಹೃದಯಾಘಾತದಿಂದ ಸಾವು ಸಂಭವಿಸಿರಬಹುದು. ಶವಮಹಜರು ಪರೀಕ್ಷೆ ಬಳಿಕ ಸ್ಪಷ್ಟ ಕಾರಣ ಗೊತ್ತಾಗಲಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದೆ.

Exit mobile version