ಬಂಟ್ವಾಳ, ಜು. 22 : ಫರಂಗಿಪೇಟೆಯ ಬ್ಯಾಂಕ್ನಲ್ಲಿ ನಡೆದ ಕಳ್ಳತನ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಮಹತ್ವದ ಸುಳಿವು ಲಭಿಸಿದ್ದು, ತನಿಖೆ ಚುರುಕುಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಬಂಟ್ವಾಳ ಹೆಚ್ಚುವರಿ ಪೊಲೀಸ್ ಅಧೀಕ್ಷಕರ (ಎಎಸ್ಪಿ) ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದ್ದು, ಆರೋಪಿಗಳ ಪತ್ತೆಗೆ ತೀವ್ರ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.ಜುಲೈ 12ರ ರಾತ್ರಿ ಫರಂಗಿಪೇಟೆಯ ಬ್ಯಾಂಕ್ ಶಾಖೆಯಲ್ಲಿ ಕಳ್ಳತನಕ್ಕೆ ಯತ್ನ ನಡೆದಿತ್ತು. ದುಷ್ಕರ್ಮಿಗಳು ಕಟ್ಟಡದ ಮೇಲ್ಛಾವಣಿಯನ್ನು ಕೊರೆದು ಬ್ಯಾಂಕ್ ಒಳನುಗ್ಗಿದ್ದರು. ಆದರೆ ಬ್ಯಾಂಕ್ನ ಲಾಕರ್ ತೆರೆಯಲು ವಿಫಲರಾದ ಅವರು ಯಾವುದೇ ನಗದು ಅಥವಾ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡದೇ ಸ್ಥಳದಿಂದ ಪರಾರಿಯಾಗಿದ್ದರು.ಪ್ರಕರಣದ ತನಿಖೆಯನ್ನು ವಿವಿಧ ಆಯಾಮಗಳಲ್ಲಿ ನಡೆಸಿರುವ ಪೊಲೀಸರು ಹಲವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ತನಿಖೆಯ ವೇಳೆ ಮಹತ್ವದ ಸುಳಿವು ದೊರೆತ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗೆ ಪ್ರತ್ಯೇಕ ವಿಶೇಷ ತಂಡವನ್ನು ರಚಿಸಿ ತನಿಖೆ ಮುಂದುವರಿಸಲಾಗಿದೆ.ಘಟನೆ ನಡೆದ ದಿನದ ಮರುದಿನ ಎರಡನೇ ಶನಿವಾರದ ರಜೆ ಹಿನ್ನೆಲೆ ಬ್ಯಾಂಕ್ ಮುಚ್ಚಲಾಗಿತ್ತು. ಹೀಗಾಗಿ ಶನಿವಾರ ರಾತ್ರಿ ಮತ್ತು ಭಾನುವಾರದ ನಡುವಿನ ಅವಧಿಯಲ್ಲಿ ಕಳ್ಳತನ ಯತ್ನ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.ಈ ಹಿಂದೆ ನಡೆದ ತನಿಖೆಯಲ್ಲಿ ಆರೋಪಿಗಳು ಬ್ಯಾಂಕ್ನ ಅಲಾರಂ ವ್ಯವಸ್ಥೆ ಹಾಗೂ ಸಿಸಿಟಿವಿ ಕ್ಯಾಮೆರಾಗಳ ಸಂಪರ್ಕವನ್ನು ಕಡಿತಗೊಳಿಸಿದ್ದರೆಂಬುದು ಬೆಳಕಿಗೆ ಬಂದಿತ್ತು.ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖಕ್ಕೆ ಮಾಸ್ಕ್ ಹಾಗೂ ಕೈಗಳಿಗೆ ಗ್ಲೌಸ್ ಧರಿಸಿದ್ದ ವ್ಯಕ್ತಿಯ ಅಲ್ಪಾವಧಿಯ ಸಿಸಿಟಿವಿ ದೃಶ್ಯ ಮಾತ್ರ ಲಭ್ಯವಾಗಿದೆ. ಬ್ಯಾಂಕ್ ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಗಳು ಸ್ಪಷ್ಟವಾಗಿರದ ಕಾರಣ ಅಥವಾ ಸಮರ್ಪಕ ಮಾಹಿತಿಯನ್ನು ನೀಡದ ಕಾರಣ ಆರೋಪಿಗಳ ಗುರುತು ಪತ್ತೆ ಹಚ್ಚುವುದು ತನಿಖಾಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ.ಫರಂಗಿಪೇಟೆ ಬ್ಯಾಂಕ್ ಕಳ್ಳತನ ಯತ್ನ ಪ್ರಕರಣದ ತನಿಖೆ ಸಾಗುತ್ತಿದ್ದ ಸಂದರ್ಭದಲ್ಲೇ ಬಿ.ಸಿ.ರೋಡ್ನಲ್ಲಿ ಯುವತಿಯೊಬ್ಬಳ ಹತ್ಯೆ ಪ್ರಕರಣವೂ ನಡೆದಿದ್ದು, ಪೊಲೀಸರು ಎರಡೂ ಪ್ರಕರಣಗಳ ತನಿಖೆಯನ್ನು ಏಕಕಾಲದಲ್ಲಿ ಮುಂದುವರಿಸುತ್ತಿದ್ದಾರೆ.