ನಮ್ಮ ಜೀವನದಲ್ಲಿ ತಂದೆ, ತಾಯಿ ಜೊತೆ ಗುರುಗಳ ಪಾ ತ್ರವೂ ಮಹತ್ವದ್ದಾಗಿರುವುದರಿಂದ ಮೂವರ ಹೆಸರಲ್ಲಿ ಗಿಡಗಳನ್ನು ನೆಟ್ಟು ಪೋಷಿಸಿ ಪ್ರಕೃತಿಗೆ ಕೊಡುಗೆ ನೀಡಬೇಕು ಎಂದು ಹಳೆಕೋಟೆ ಮಸ್ಜಿದುಲ್ ಕರೀಂ ಅಧ್ಯಕ್ಷ ಮೊಹಮ್ಮದ್ ತ್ವಾಹ ಹೇಳಿದರು.
ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಅಧೀನದ ಹಳೆಕೋಟೆ ಸಯ್ಯದ್ ಮದನಿ ವಿದ್ಯಾಸಂಸ್ಥೆಯಲ್ಲಿ ನಡೆದ ವನಮಹೋತ್ಸವ, ವಿದ್ಯಾರ್ಥಿ ಸರ್ಕಾರದ ಪದಗ್ರಹಣ, ವಿವಿಧ ಸಂಘಗಳ ಉದ್ಘಾಟನೆ, ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉಳ್ಳಾಲ ನಗರಸಭಾ ಪೌರಾಯುಕ್ತ ಸಂತೋಷ್ ಎಸ್.ಡಿ. ಮಾತನಾಡಿ, ನಾವಿಂದು ಪ್ರಕೃತಿ ಉಳಿಸುವ ಕಾರ್ಯ ಮಾಡಿದರೆ ಮುಂದಿನ ಪೀಳಿಗೆಯನ್ನು ಪ್ರಕೃತಿ ಉಳಿಸುತ್ತದೆ. ಮುಂದಿನ ಜೀವನ ರೂಪಿಸಿಕೊಳ್ಳಲು ಶಿಕ್ಷಣದಿಂದ ಮಾತ್ರ ಸಾಧ್ಯ. ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತವರು ಇಂದು ಉನ್ನತ ಸ್ಥಾನದಲ್ಲಿದ್ದಾರೆ ಎಂದು ತಿಳಿಸಿದರು.
ಯೂನಿಯನ್ ಬ್ಯಾಂಕ್ ಮುಖ್ಯ ಕಚೇರಿಯ ಮಾರುಕಟ್ಟೆ ವ್ಯವಸ್ಥಾಪಕಿ ಗ್ರೇಸಿ ಲೋಬೋ, ಫಳ್ನೀರ್ ಶಾಖಾ ವ್ಯವಸ್ಥಾಪಕ ಅಭಿಲಾಷ್ ಟಿ., ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಕೋಶಾಧಿಕಾರಿ ಅಬೂಬಕ್ಕರ್, ಪರಿಸರ ಪ್ರೇಮಿ ಮಾಧವ ಉಳ್ಳಾಲ್, ಕ್ಷೇತ್ರ ಶಿಕ್ಷಣ ಸಂಪನ್ಮೂಲ ವ್ಯಕ್ತಿ ಮೋಹನ್ ಕುಮಾರ್, ಎನ್ಎಸ್ ಯುಐ ಪ್ರಧಾನ ಕಾರ್ಯದರ್ಶಿ ಯು.ಟಿ.ಫರೀದ್, ಶಾಲಾ ಸಂಚಾಲಕ ಇಸ್ಮಾಯಿಲ್ ಹಾಜಬ್ಬ, ಶಿಕ್ಷಣ ಪ್ರೇಮಿ ಝೈನುದ್ದೀನ್, ಎಂ.ಎಚ್.ಇಬ್ರಾಹಿಂ, ಹಳೆವಿದ್ಯಾರ್ಥಿ ಶುಕೂರ್ ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಮುಖ್ಯಶಿಕ್ಷಕ ಕೆಎಂಕೆ ಮಂಜನಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಶಿಕ್ಷಕಿಯರಾದ ಸಪ್ನಾ ವಂದಿಸಿದರು. ದಾಮಿನಿ ಕಾರ್ಯಕ್ರಮ ನಿರೂಪಿಸಿದರು.