Site icon Ullalavani

ಇಎಸ್‌ಐ ಆಸ್ಪತ್ರೆಗಳಲ್ಲಿ ₹10 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿ: ಡಾ. ದಿನೇಶ್ ಕುಮಾರ್

ಉಳ್ಳಾಲ : ಇಎಸ್‌ಐ ಆಸ್ಪತ್ರೆಗಳಲ್ಲಿ ಇನ್ನಷ್ಟು ಆಧುನಿಕ ಸೌಲಭ್ಯಗಳನ್ನು ಕಲ್ಪಿಸುವುದು, ತಜ್ಞ ವೈದ್ಯರ ತಂಡಗಳನ್ನು ನಿಯೋಜಿಸುವುದು ಸೇರಿದಂತೆ ಆರೋಗ್ಯ ಸೇವೆಗಳನ್ನು ಬಲಪಡಿಸಲಾಗುತ್ತಿದೆ. ಸುಮಾರು ₹10 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, ಕಣಚೂರು ಆಸ್ಪತ್ರೆಯೊಂದಿಗೆ ಇನ್ನಷ್ಟು ಸಹಭಾಗಿತ್ವ ಬೆಳೆಸುವ ಉದ್ದೇಶವೂ ಇದೆ ಎಂದು ಕರ್ನಾಟಕ ಸರ್ಕಾರದ ನೌಕರರ ರಾಜ್ಯ ವಿಮಾ (ಇಎಸ್‌ಐ) ವೈದ್ಯಕೀಯ ಸೇವೆಗಳ ಆಯುಕ್ತರಾದ ಡಾ. ದಿನೇಶ್ ಕುಮಾರ್ ವೈ.ಕೆ. (ಐಎಫ್‌ಎಸ್) ಅಭಿಪ್ರಾಯಪಟ್ಟರು.

ಅವರು ಕಣಚೂರು ಇಸ್ಲಾಮಿಕ್ ಎಜುಕೇಶನ್ ಟ್ರಸ್ಟ್ ವತಿಯಿಂದ ಸೋಮವಾರ ನಾಟೆಕಲ್ ಕಣಚೂರು ಸಭಾಂಗಣದಲ್ಲಿ ಆಯೋಜಿಸಲಾದ ಸಂಸ್ಥಾಪಕರ ದಿನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ನೌಕರರ ರಾಜ್ಯ ವಿಮಾ (ಇಎಸ್‌ಐ) ಯೋಜನೆಯು ಕೇಂದ್ರ ಸರ್ಕಾರದ ಅನುದಾನಿತ ಯೋಜನೆಯಾಗಿದ್ದು, ಇಎಸ್‌ಐ ಕಾರ್ಡ್ ಹೊಂದಿರುವ ಉದ್ಯೋಗಿಗಳಿಗೆ ಮಾತ್ರವಲ್ಲದೆ ಅವರ ಕುಟುಂಬ ಸದಸ್ಯರಿಗೂ ಸಂಪೂರ್ಣ ಉಚಿತ ವೈದ್ಯಕೀಯ ಸೇವೆಯನ್ನು ಒದಗಿಸುತ್ತದೆ. ಕರ್ನಾಟಕದಲ್ಲಿ ಸುಮಾರು 36.5 ಲಕ್ಷ ಇಎಸ್‌ಐ ಫಲಾನುಭವಿಗಳಿದ್ದು, ರಾಜ್ಯದ ಸುಮಾರು ಮೂರನೇ ಒಂದು ಭಾಗದ ಜನಸಂಖ್ಯೆ ಈ ಯೋಜನೆಯ ಪ್ರಯೋಜನ ಪಡೆಯುತ್ತಿದೆ ಎಂದು ತಿಳಿಸಿದರು.


ಏಕೈಕ ಕ್ಯಾಂಪಸ್‌ನಲ್ಲಿ ಯುಕೆಜಿಯಿಂದ ಸ್ನಾತಕೋತ್ತರ ಹಾಗೂ ವೈದ್ಯಕೀಯ ಶಿಕ್ಷಣದವರೆಗೆ ಅವಕಾಶ ಕಲ್ಪಿಸಿರುವ ಕಾರ್ಯವನ್ನು ಶ್ಲಾಘಿಸಿದರು.
ಸಂಸ್ಥೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಹಿರಿಯ ವಿದ್ಯಾರ್ಥಿಗಳು ಹಾಗೂ ವೈದ್ಯರನ್ನು ನೋಡಿ ಪ್ರೇರಣೆ ಪಡೆಯುವಂತಹ ಶೈಕ್ಷಣಿಕ ವಾತಾವರಣ ನಿರ್ಮಾಣವಾಗಿರುವುದು ಶ್ಲಾಘನೀಯ ಎಂದು ಹೇಳಿದರು.
ಹವಾಮಾನ ವೈಪರೀತ್ಯದ ಕುರಿತು ಮಾತನಾಡಿದ ಅವರು, ಎಲ್‌ನಿನೊ ಪರಿಣಾಮದಿಂದ ಈ ವರ್ಷ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದ್ದು, ಬರದ ಪರಿಸ್ಥಿತಿ ಎದುರಾಗಬಹುದು. ಪರಿಸರ ಹಾನಿಗೆ ಮಾನವ ನಿರ್ಲಕ್ಷ್ಯವೂ ಪ್ರಮುಖ ಕಾರಣವಾಗಿದ್ದು, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಕಣಚೂರು ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಸಲಹಾ ಸಮಿತಿ ಚೇರ್ಮೆನ್ ಹಾಗೂ ಕಣ್ಣೂರು ವಿಶ್ವವಿದ್ಯಾಲಯ ಹಾಗೂ ಕ್ಯಾಲಿಕಟ್ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಡಾ. ಎಂ. ಅಬ್ದುಲ್ ರಹಿಮಾನ್ ಮಾತನಾಡಿ ಮಕ್ಕಳು ಪ್ರಕೃತಿಯೊಂದಿಗೆ ನಿಕಟ ಸಂಪರ್ಕ ಹೊಂದಿ ಬೆಳೆಯಬೇಕು. ವನಮಹೋತ್ಸವವು ಕೇವಲ ಗಿಡ ನೆಡುವ ಕಾರ್ಯಕ್ರಮವಲ್ಲ; ಅದು ಜೀವನ ಮೌಲ್ಯಗಳನ್ನು ಕಲಿಸುವ ಪ್ರಾಯೋಗಿಕ ಪಾಠವಾಗಿದೆ.
2004ರಲ್ಲಿ ಈ ಆವರಣದಲ್ಲಿ ನೆಡಲಾಗಿದ್ದ ನಾಲ್ಕು ಸಸಿಗಳು ಇಂದು ಬೃಹತ್ ಹೆಮ್ಮರಗಳಾಗಿ ಬೆಳೆದಿರುವುದನ್ನು ಉದಾಹರಣೆಯಾಗಿ ಉಲ್ಲೇಖಿಸಿದ ಅವರು, ಸಣ್ಣ ಪ್ರಯತ್ನಗಳೇ ಭವಿಷ್ಯದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗುತ್ತವೆ ಎಂದು ಹೇಳಿದರು.

ಈ ಸಂದರ್ಭ ಕಣಚೂರು ಇಸ್ಲಾಮಿಕ್ ಎಜುಕೇಶನ್ ಟ್ರಸ್ಟ್
ನಿರ್ದೇಶಕರು ಅಬ್ದುಲ್ ರಹಿಮಾನ್, ಟ್ರಸ್ಟಿಗಳಾದ ಸಾಹದಾ ರಹಿಮಾನ್, ಉಮಯಾ ಬಾನು ಆರಿಫ್, ಫರೀದಾ ನಸೀರ್ ಹಾಗೂ ಡಾ. ಅಬಿದಾ ಹಾಶಿಂ , ಕಣಚೂರು ಹೆಲ್ತ್ ಸೈನ್ಸಸ್ ಸಲಹಾ ಮಂಡಳಿ, ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ ಅಧ್ಯಕ್ಷರು ಡಾ. ಮೊಹಮ್ಮದ್ ಇಸ್ಮಾಯಿಲ್ ಹೆಜಮಾಡಿ, ಕಣಚೂರು ಹೆಲ್ತ್ ಸೈನ್ಸಸ್ ಸಲಹಾ ಮಂಡಳಿ ಸದಸ್ಯರು ಡಾ. ಎಂ. ವೆಂಕಟರಾಯ ಪ್ರಭು ಮುಖ್ಯ ಅತಿಥಿಗಳಾಗಿದ್ದರು. ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ. ರೋಹನ್ ಎಸ್. ಮೊನಿಸ್

ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ ಡೀನ್ ಡಾ. ಶಹ್ನವಾಝ್ ಮಣಿಪಾಡಿ ಸ್ವಾಗತಿಸಿದರು. ಮುಖ್ಯ ವೈದ್ಯಾಧಿಕಾರಿ, ಕಣಚೂರು ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ
ಪ್ರಾಂಶುಪಾಲರು ಡಾ. ವಿದ್ಯಾಪ್ರಭಾ ಆರ್ ವಂದಿಸಿದರು.

ಕಣಚೂರು ಇಸ್ಲಾಮಿಕ್ ಎಜುಕೇಶನ್ ಟ್ರಸ್ಟ್‌ನ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ವಿವಿಧ ಗ್ರಾಮ ಪಂಚಾಯತ್‌ಗಳ ಸಹಯೋಗದಲ್ಲಿ ಆಯಾ ಪ್ರದೇಶಗಳಲ್ಲಿ ಒಟ್ಟು 500 ಗಿಡಗಳನ್ನು ನೆಡಲಾಯಿತು.
ಈ ಪರಿಸರ ಸ್ನೇಹಿ ಅಭಿಯಾನಕ್ಕೆ ಸಹಕರಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳನ್ನು ಸಂಸ್ಥೆಯ ವತಿಯಿಂದ ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ಕಣಚೂರು ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ನಿರಂತರವಾಗಿ ಬೆಂಬಲ ಹಾಗೂ ಸಹಕಾರ ನೀಡುತ್ತಿರುವ ಹಿತೈಷಿಗಳ ಸೇವೆಯನ್ನು ಸ್ಮರಿಸಿ ಅವರಿಗೆ ಕೃತಜ್ಞತೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಹಿತೈಷಿಗಳ ಪರವಾಗಿ ಕಣಚೂರು ಇಸ್ಲಾಮಿಕ್ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಲಾಯಿತು.

Exit mobile version